Saturday, November 10, 2007

ತಂಡದ ಕೊಂಡಿ ಕಳಚಿಕೊಂಡಾಗ...


ನದಿಯ ಎರಡು ದಡಗಳನ್ನು ಸೇರಿಸುವ ಸೇತುವೆಯ ಮೇಲೆ ನಡೆಯುತ್ತಿರುವಾಗ, ಒಮ್ಮೆಲೆ ಅದು ಕಳಚಿಕೊಂಡಾಗ! ನಿಮ್ಮ ಊಹೆ ಸರಿ. ಎಲ್ಲರೂ ನೀರುಪಾಲು, ಆದರೆ, ಅದರಲ್ಲಿ ಈಜು ಬಲ್ಲವ ಮಾತ್ರ ಬದುಕಬಲ್ಲ.

ಒಂದು ತಂಡವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವುದು ಸಾಮಾನ್ಯವಾದ ಕಾರ್ಯವೇನಲ್ಲ. ತಂಡದ ನಾಯಕರು ಯಾರು ಬೇಕಾದರೂ, ಆಗಬಹುದು. ಆದರೆ, ಆ ತಂಡದ ಸಹಪಾಠಿಗಳೊಂದಿಗೆ ತಮ್ಮೊಡನೆ ಕರೆದೊಯ್ಯಬಲ್ಲ ಸಮರ್ಥ ಶಕ್ತಿ, ಚಾಕಚಕ್ಯತೆ, ಚಾಣಾಕ್ಷ್ಯತನ, ಜಾಣ್ಮೆ ಹಾಗೂ ಆಸಕ್ತಿ ಅವರಲ್ಲಿ ಇರಬೇಕಾದುದು ಅತ್ಯಗತ್ಯ. ಅದು ಆಟದಲ್ಲಿರಬಹುದು ಅಥವಾ ನಮ್ಮ ವೃತ್ತಿ ಬದುಕೇ ಆಗಿರಬಹುದು.

ಗಿಡ ನೆಡುವುದು ಸುಲಭದ ಕೆಲಸ. ಅದನ್ನು ಯಾರು ಬೇಕಾದರೂ ಮಾಡಬಹುದು. ಆದರೆ, ಅದಕ್ಕೆ ಸಮಪ್ರಮಾಣದ ನೀರು, ಪೋಷಾಂಕಾಂಶಗಳನ್ನು ಹಾಕಿ ಬೆಳೆಸಿ ಮರ, ಹೆಮ್ಮರವಾಗಿ ಮಾಡುವುದು ತುಂಬಾ ಕಷ್ಟ. ಅದು ದೊಡ್ಡ ಹೆಮ್ಮರವಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ, ತಮ್ಮ ಕೈಯಿಂದ ಇಂತಹ ಕೆಲಸ ಏನು ಆಗದು ಎಂಬ ಮನೋವ್ಯಾಧೆಯಿಂದ ಕೆಲವು ನಿಷ್ಪ್ರಯೋಜಕರು ಇಂತಹ ಮರವನ್ನು ಬುಡಸಮೇತ ಕಿತ್ತೊಗೆಯಬೇಕೆಂಬ ಕೀಳರಿಮೆ ಚಿಂತನೆಗೆ ಒಳಗಾಗುವುದನ್ನು ನಾವು ಕಂಡಿದ್ದೇವೆ.

ಛಲ, ಅಚಲ ನಿರ್ಧಾರಗಳು, ಶಿಸ್ತು ಹಾಗೂ ದೃಢ ನಿಶ್ಚಯಗಳು ತಂಡದಲ್ಲಿರಲೇಬೇಕಾದುದು ಅತೀ ಮುಖ್ಯವಾದ ಅಂಶಗಳೆಂದು ನಾನು ಅಂದುಕೊಂಡಿದ್ದೇನೆ. ಆದರೆ, ಇವು ಕೆಲವೊಮ್ಮೆ ಮನುಷ್ಯನನ್ನು ಇಕ್ಕಟ್ಟಿಗೆ ಸಿಕ್ಕಿ ಹಾಕಿಸುತ್ತವೆ. ಆದರೂ ಕೂಡ ಇವು ತಂಡದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂಬುವುದರಲ್ಲಿ ಎರಡು ಮಾತಿಲ್ಲ.

ತಂಡದ ತನ್ನ ಕಾರ್ಯವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವಾಗ ದಾರಿ ಮಧ್ಯದಲ್ಲಿ ಕೆಲವು ವಿಚಿತ್ರ ತಿರುವುಗಳು, ದಿಗ್ಭ್ರಮೆ ಉಂಟು ಮಾಡುವಂತ ಸನ್ನಿವೇಶಗಳು ಘಟನೆಗಳು ನಡೆದು ಹೋಗುತ್ತವೆ. ಇದಕ್ಕೆ ಅಚ್ಚರಿ ಪಟ್ಟರೂ ಚಿಂತೆಯಿಲ್ಲ.

ತಾನು ತನ್ನ ತಂಡವನ್ನು ಮುಂಚೂಣಿಯಲ್ಲಿ ತರಬೇಕು, ಒಂದು ಆದರ್ಶಪ್ರಾಯವಾದ ತಂಡವನ್ನು ಕಟ್ಟಬೇಕು. ಅದನ್ನು ಎಲ್ಲರಿಗಿಂತಲೂ ಚೆನ್ನಾಗಿ ಪೋಷಿಸಬೇಕು, ಬೃಹತ್ ಪ್ರಮಾಣದಲ್ಲಿ ಬೆಳೆಸಬೇಕು ಎಂಬ ಹತ್ತು ಹಲವಾರು ಆಲೋಚನೆಗಳನ್ನು ಹಾಗೂ ಜೀವಂತ ಕನಸುಗಳನ್ನು ಹೊತ್ತುಕೊಂಡು ಹೋಗುತ್ತಿರುವಾಗ, ದಾರಿ ಮಧ್ಯೆ ಹಲವಾರು ಬಗೆಯ ಎಡರು ತೊಡರುಗಳು ಕಾಡತೊಡಗುತ್ತವೆ. ಕೆಲವೊಮ್ಮೆ ಬಿರುಗಾಳಿಗೆ ಸಿಕ್ಕ ಹೆಮ್ಮರ ನೆಲಕಚ್ಚಿದಂತೆ, ಆ ತಂಡವು ಕೂಡ ನಿಷ್ಪ್ರಯೋಚಕರ ಬಿರುಗಾಳಿಗೆ ಬಲಿಯಾಗುವುದರಲ್ಲಿ ಸಂದೇಹವಿಲ್ಲ.

ಹಲವಾರು ಕನಸುಗಳನ್ನು ಕಟ್ಟಿಕೊಂಡು ಬೆಳೆಸುತ್ತಿರುವ ಕೂಸನ್ನು ಮಧ್ಯದಲ್ಲಿಯೇ ಚಿವುಟಿ ಹಾಕಿದಾಗ, ಅಥವಾ ಅಂತಹ ಒಂದು ತಂಡದ ಕೊಂಡಿ ಕಳಚಿಕೊಂಡಾಗ, ಅಂತಹ ಸಂದರ್ಭದಲ್ಲಿ ಮನಸ್ಸಿಗೆ ಉಂಟಾಗುವ ಆಘಾತ, ನೋವು, ಸಂಕಟ, ದುಃಖ ಅಷ್ಟಿಷ್ಟಲ್ಲ. ಅದಕ್ಕೆ ಹೇಳೋದು Experience Can't Explain ಅಂತ.
ಇದೊಂದು ಅನಿರೀಕ್ಷಿತ ಬೆಳವಣಿಗೆ ಅಂತಲೇ ಹೇಳಬಹುದು. ಯಾರೂ ಕೂಡ ಇಂತಹ ಅಚ್ಚರಿಗೆ ಪಾತ್ರರಾಗಬೇಕಿಲ್ಲ. ಆದರೆ, ಈ ಮೊದಲೇ ನಾನು ಹೇಳಿದಂತೆ ಎರಡು ಸೇತುವೆಯನ್ನು ಸೇರಿಸುವ ಸೇತುವೆಯ ಮೇಲೆ ನಾವು ನಡೆಯುತ್ತಿರುವಾಗ ದಿಢೀರನೆ ಮುರಿದು ಬಿಟ್ಟರೆ. ಖಂಡಿತ ನಾವು ನೀರು ಪಾಲು. ಆದರೆ, ಈಜು ಬಲ್ಲವ ಮಾತ್ರ ಪಾರು ಎಂಬಂತೆಯೇ, ತಂಡದಲ್ಲಿ ಸ್ವಸಾಮರ್ಥ್ಯವಿರುವವು (ಅಂದರೆ ಈಜುಬಲ್ಲವನು) ತಡ ಎಷ್ಟು ದೂರವಿದ್ದರೂ, ಈಜಬಲ್ಲ. ಅವನು ಇಚ್ಛೆಪಟ್ಟರೆ, ತಂಡದ ಸಹಪಾಠಿಗಳನ್ನು ಮುನ್ನಡೆಸಿಕೊಂಡು ದಡ ಸೇರಿಸಬಲ್ಲ.

ಆದರೆ, ಇಂತಹ ಬೆರಗುಗೊಳಿಸುವ ಬೆಳವಣಿಗೆಗಳು ಅಲ್ಪಕಾಲ ಮಾತ್ರ ಎಂಬುವುದನ್ನು ನಾವು ಮರೆಯುವಂತಿಲ್ಲ. ಕತ್ತಲೆ ಎಷ್ಟೇ ಪ್ರಮಾಣದಲ್ಲಿದ್ದರೂ, ಬೆಳಕಿನ ಒಂದೇ ಒಂದು ಕಿರಣ ಅದರಲ್ಲಿ ಹಾಯ್ದುಹೋದರೆ ಸಾಕು, ಯಾವುದು ಬಲಿಷ್ಟ ಎಂಬುವುದು ಬಿಡಿಸಿ ಹೇಳಬೇಕಿಲ್ಲ.

No comments: