Wednesday, November 21, 2007

ಅಪರಿಚಿತನಾಗಿ ಬಂದು ಪರಿಚಿತನಾಗಿ ಹೋಗುವಾಗ...

ಅಪರಿಚಿತನಾಗಿ ಬಂದು ಪರಿಚಿತನಾಗಿ ಹೋಗುವಾಗ ನಮ್ಮ ಹಾಗೂ ಅವರ ಮಧ್ಯೆ ಉಳಿಯುವುದು ಒಂದೇ ಅದುವೇ "ಸ್ನೇಹ". ನಿಜ. ನಮಗೆ ಯಾರಾದರೊಬ್ಬರು ಹೊಸದಾಗಿ ಪರಿಚಿತವಾದಾಗ, ಅವರೊಟ್ಟಿಗೆ ಹೇಗೆ ನಡೆದುಕೊಳ್ಳುವುದು, ಯಾವ ರೀತಿಯಾಗಿ ಅವರನ್ನು ಕಾಣಬೇಕೆಂಬ ಹಲವು ಪ್ರಶ್ನೆಗಳು ನಮ್ಮ ಮನದಲ್ಲಿ ಕಾಡತೊಡಗುತ್ತವೆ. ಕಾರಣ, ಆ ಅಪರಿಚಿತ ವ್ಯಕ್ತಿ ನಮಗೆ ಹತ್ತಿರವಾಗಿರುವುದಿಲ್ಲ ಎಂಬುದು ಒಂದು ಕಾರಣವಾದರೆ, ಇದೇ ಮೊದಲ ಬಾರಿಗೆ ಅವರ ಮುಖಚರ್ಯೆ ನನಗಾಗುತ್ತಿರುವುದು ಎಂಬುದು ಇನ್ನೊಂದು ಕಾರಣವಾಗಿದೆ.

ಕಾಲೇಜು ದಿನಗಳಲ್ಲಿಯಾದರೆ, ಅವರೊಟ್ಟಿಗೆ ಬೇಗನೆ ಹೊಂದಿಕೊಳ್ಳುವುದು ಕಷ್ಟತರವೇನಲ್ಲ ಎನ್ನುವುದು ನನ್ನ ಅನುಭವಕ್ಕೆ ಬಂದ ಮಾತು. ಆದರೆ, ಅದೇ ಅವರು ವೃತ್ತಿರಂಗದಲ್ಲಿ ಹೊಸದಾಗಿ ಪರಿಚಿತವಾದರೆ, ನಮ್ಮನ್ನು ಚಿಂತೆಯ ಅವಗಾಹನೆಗೆ ಎಡೆ ಮಾಡಿಕೊಡುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ.

ಅಂತಹ ವ್ಯಕ್ತಿ ಹಾಗೂ ನಮ್ಮ ನಡುವೆ "ಹೊಂದಾಣಿಕೆ" ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ ಸಹಜ. ಈ ಹೊಂದಾಣಿಕೆ ಅದು ವೃತ್ತಿ ಬದುಕಲ್ಲಾಗಬಹುದು, ಅವರ ಭಾಷೆಯಲ್ಲಾಗಹುದು, ವ್ಯಕ್ತಿತ್ವದಲ್ಲಾಗಬಹುದು ಅಥವಾ ಅವರ ಮನೋ ಇಚ್ಛೆಯಲ್ಲಾಗಬಹುದು. ಕೆಲವೊಮ್ಮೆ ಈ ಹೊಂದಾಣಿಕೆಯು ಅಪಾರ್ಥಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯು ಉಂಟು.

ಆದರೆ, ಹೊಂದಾಣಿಕೆ ಏಕಮಾರ್ಗವಾಗಿ ಬಂದರೆ, ಅದು ಅಷ್ಟೊಂದು ಸಮಂಜಸ ಅನಿಸುವುದಿಲ್ಲ. ಅದು ದ್ವಿಮುಖವಾಗಿಯೂ ಬಂದರೆ, ತುಂಬಾ ಒಳಿತು ಎಂಬುವುದು ಪ್ರಜ್ಞಾವಂತ ಓದುಗರ ಅಭಿಪ್ರಾಯ ಅಂಬೋಣ. ಇಂತಹ ಹೊಂದಾಣಿಕೆಯಾದ ಮೇಲೆಯೂ ಅವರು ನಮ್ಮ ಹೃದಯಕ್ಕೆ ಹತ್ತಿರವಾಗುತ್ತಾರೆಯೇ ಎಂಬ ಪ್ರಶ್ನೆ ನಮ್ಮ ಮುಂದೆ ಕಾಡುತ್ತದೆ. ಖಂಡಿತ ಎಂಬುದು ನನ್ನ ದಿಟ್ಟ ಉತ್ತರ.

ಆದರೆ, ಅಂತಹ ವ್ಯಕ್ತಿ ದಿನನಿತ್ಯ ನಮ್ಮ ಬದುಕಿನಲ್ಲಾಗುವ (ವೃತ್ತಿ ಬದುಕು ಒಳಗೊಂಡಂತೆ) ಪ್ರತಿಯೊಂದು ಘಟನೆಯಲ್ಲಿ ಪಾಲ್ಗೊಂಡಾಗ ಹಾಗೂ ಸಮಸ್ಯೆಯೊಂದು ನಮ್ಮ ಮುಂದೆ ದಿಢೀರ್‌ನೆ ಪ್ರತ್ಯಕ್ಷವಾದಾಗ ಅಂತಹ ವ್ಯಕ್ತಿಗಳ ಎದುರು ಮನಸ್ಸು ಬಿಚ್ಚಿ ಮಾತನಾಡಲು ಯಾವ ಭಯ, ಅಂಜಿಕೆ ಇರುವುದಿಲ್ಲ. ಹೀಗಾಗಿ ಅವರು ನಮಗೆ ಆಪ್ತರಾಗುತ್ತಾರೆ ಎಂಬುದು ವಾದ.

ದಿನನಿತ್ಯದ ನಮ್ಮ ಕಾರ್ಯಗಳಲ್ಲಿ ನಮಗೆ ಸ್ನೇಹಿತರಂತೆ ಸಲಹೆ, ಕಷ್ಟಗಳಲ್ಲಿ ಏನೋ ಸಂಬಂಧದಲ್ಲಿ ಭಾಗಿಯಾಗಿ ಭಾವನಾತ್ಮಕವಾಗಿ ಸಂಬಂಧಕ್ಕೆ ತಿರುಗಿದಾಗ ಅವರನ್ನು ಬಿಟ್ಟಿರಲು ಅಥವಾ ದೂರವಾಗಿಸಿಕೊಳ್ಳಲು ಯಾರು ಇಚ್ಛಿಸುವುದಿಲ್ಲ.

ಇಂತಹ ವ್ಯಕ್ತಿಯೊಬ್ಬರು ಒಮ್ಮೆಲೆ ದೈಹಿಕವಾಗಿ ದೂರವಾಗುತ್ತಾರೆ ಎಂಬ ಸುದ್ದಿ ಕೇಳಿದಾಗ, (ಕಾಲೇಜಿನಲ್ಲಿ ನೀವು ಕೊನೆಯ ಗಳಿಗೆಯಲ್ಲಿ ನಿಮ್ಮ ಸ್ನೇಹಿತರ ಅಥವಾ ಸ್ನೇಹಿತೆಯರು ನಿಮ್ಮನ್ನು ಅಗಲುತ್ತಿದ್ದಾರೆ ಎನ್ನುವಂತೆ ಅನುಭವವಾಗುತ್ತದೆ) ಮನಸ್ಸಿಗೆ ಏನೋ ಒಂದು ಕಸಿವಿಸಿ, ಕೆಲಸದಲ್ಲಿ ನಿರುತ್ಸಾಹ ಜೊತೆಗೆ ಮನಸ್ಸಿಗೆ ಹತ್ತಿರವಾದ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಂತೆ ಭಾಸ. ಅಲ್ಲದೆ ಮನಸ್ಸು ಏನನ್ನೊ ಯೋಚಿಸುತ್ತಿರುವ ಹಾಗೆ ಕೆಲಸದಲ್ಲಿ ನಿರಾಸಕ್ತಿ ತೋರಿ ಯಾವುದೋ ಚಿಂತೆಯಲ್ಲಿ ಮಗ್ನವಾಗುತ್ತದೆ.

ಪ್ರತಿನಿತ್ಯ ಒಡನಾಟದಲ್ಲಿದ್ದ, ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರು ದಿಢೀರನೆ ಮಾಯವಾದಾಗ. ಆಗುವ ಸಂಕಟ, ನೋವು ಅದನ್ನು ಅನುಭವಿಸಿದವನಿಗೆ ತಿಳಿದಿರಬೇಕು. ಇಂತಹ ಆಲೋಚನೆಯನ್ನು ನಾನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಇಂತಹ ಅಗಲುವಿಕೆಯನ್ನು. ಇದು ನನ್ನ ಅನುಭವಕ್ಕೂ ಹೊರತಾಗಿಲ್ಲ ಎಂಬುದು ಇನ್ನೊಂದು ಕಟು ಸತ್ಯವಾದ ಮಾತು.

ಒಂದು ಗಿಡವನ್ನು ನೆಡುವುದು ಸಾಮಾನ್ಯವಾದ ವಿಷಯವಲ್ಲ. ಅದನ್ನು ಬೆಳೆಸಿ ದೊಡ್ಡ ಮರವನ್ನಾಗಿ ಮಾಡುವುದು ಅದರ ಮುಂದಿನ ಗುರಿಯಾಗಿರುತ್ತದೆ. ಅಂತೆಯೇ ಅಂತಹ ವ್ಯಕ್ತಿಗಳು ಕೆಲವೇ ದಿನಗಳವರೆಗೆ ನಮ್ಮ ಸಂಗಡ ಇದ್ದರೂ, ಅವರೊಂದಿಗೆ ಮಾಡಿಕೊಂಡ ಸ್ನೇಹ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ಮುಂದಿರುವ ಗುರಿಯಾಗಿರುತ್ತದೆ. ಆದರೆ, ಇದು ಅನಿವಾರ್ಯವಲ್ಲ. ಅಪೇಕ್ಷಿತವಾದದು. ಕಾರಣ ಅವರ ವ್ಯಕ್ತಿತ್ವವೇ ಅಂತಹದ್ದಾಗಿರುತ್ತದೆ.

Saturday, November 10, 2007

ತಂಡದ ಕೊಂಡಿ ಕಳಚಿಕೊಂಡಾಗ...


ನದಿಯ ಎರಡು ದಡಗಳನ್ನು ಸೇರಿಸುವ ಸೇತುವೆಯ ಮೇಲೆ ನಡೆಯುತ್ತಿರುವಾಗ, ಒಮ್ಮೆಲೆ ಅದು ಕಳಚಿಕೊಂಡಾಗ! ನಿಮ್ಮ ಊಹೆ ಸರಿ. ಎಲ್ಲರೂ ನೀರುಪಾಲು, ಆದರೆ, ಅದರಲ್ಲಿ ಈಜು ಬಲ್ಲವ ಮಾತ್ರ ಬದುಕಬಲ್ಲ.

ಒಂದು ತಂಡವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವುದು ಸಾಮಾನ್ಯವಾದ ಕಾರ್ಯವೇನಲ್ಲ. ತಂಡದ ನಾಯಕರು ಯಾರು ಬೇಕಾದರೂ, ಆಗಬಹುದು. ಆದರೆ, ಆ ತಂಡದ ಸಹಪಾಠಿಗಳೊಂದಿಗೆ ತಮ್ಮೊಡನೆ ಕರೆದೊಯ್ಯಬಲ್ಲ ಸಮರ್ಥ ಶಕ್ತಿ, ಚಾಕಚಕ್ಯತೆ, ಚಾಣಾಕ್ಷ್ಯತನ, ಜಾಣ್ಮೆ ಹಾಗೂ ಆಸಕ್ತಿ ಅವರಲ್ಲಿ ಇರಬೇಕಾದುದು ಅತ್ಯಗತ್ಯ. ಅದು ಆಟದಲ್ಲಿರಬಹುದು ಅಥವಾ ನಮ್ಮ ವೃತ್ತಿ ಬದುಕೇ ಆಗಿರಬಹುದು.

ಗಿಡ ನೆಡುವುದು ಸುಲಭದ ಕೆಲಸ. ಅದನ್ನು ಯಾರು ಬೇಕಾದರೂ ಮಾಡಬಹುದು. ಆದರೆ, ಅದಕ್ಕೆ ಸಮಪ್ರಮಾಣದ ನೀರು, ಪೋಷಾಂಕಾಂಶಗಳನ್ನು ಹಾಕಿ ಬೆಳೆಸಿ ಮರ, ಹೆಮ್ಮರವಾಗಿ ಮಾಡುವುದು ತುಂಬಾ ಕಷ್ಟ. ಅದು ದೊಡ್ಡ ಹೆಮ್ಮರವಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ, ತಮ್ಮ ಕೈಯಿಂದ ಇಂತಹ ಕೆಲಸ ಏನು ಆಗದು ಎಂಬ ಮನೋವ್ಯಾಧೆಯಿಂದ ಕೆಲವು ನಿಷ್ಪ್ರಯೋಜಕರು ಇಂತಹ ಮರವನ್ನು ಬುಡಸಮೇತ ಕಿತ್ತೊಗೆಯಬೇಕೆಂಬ ಕೀಳರಿಮೆ ಚಿಂತನೆಗೆ ಒಳಗಾಗುವುದನ್ನು ನಾವು ಕಂಡಿದ್ದೇವೆ.

ಛಲ, ಅಚಲ ನಿರ್ಧಾರಗಳು, ಶಿಸ್ತು ಹಾಗೂ ದೃಢ ನಿಶ್ಚಯಗಳು ತಂಡದಲ್ಲಿರಲೇಬೇಕಾದುದು ಅತೀ ಮುಖ್ಯವಾದ ಅಂಶಗಳೆಂದು ನಾನು ಅಂದುಕೊಂಡಿದ್ದೇನೆ. ಆದರೆ, ಇವು ಕೆಲವೊಮ್ಮೆ ಮನುಷ್ಯನನ್ನು ಇಕ್ಕಟ್ಟಿಗೆ ಸಿಕ್ಕಿ ಹಾಕಿಸುತ್ತವೆ. ಆದರೂ ಕೂಡ ಇವು ತಂಡದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂಬುವುದರಲ್ಲಿ ಎರಡು ಮಾತಿಲ್ಲ.

ತಂಡದ ತನ್ನ ಕಾರ್ಯವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವಾಗ ದಾರಿ ಮಧ್ಯದಲ್ಲಿ ಕೆಲವು ವಿಚಿತ್ರ ತಿರುವುಗಳು, ದಿಗ್ಭ್ರಮೆ ಉಂಟು ಮಾಡುವಂತ ಸನ್ನಿವೇಶಗಳು ಘಟನೆಗಳು ನಡೆದು ಹೋಗುತ್ತವೆ. ಇದಕ್ಕೆ ಅಚ್ಚರಿ ಪಟ್ಟರೂ ಚಿಂತೆಯಿಲ್ಲ.

ತಾನು ತನ್ನ ತಂಡವನ್ನು ಮುಂಚೂಣಿಯಲ್ಲಿ ತರಬೇಕು, ಒಂದು ಆದರ್ಶಪ್ರಾಯವಾದ ತಂಡವನ್ನು ಕಟ್ಟಬೇಕು. ಅದನ್ನು ಎಲ್ಲರಿಗಿಂತಲೂ ಚೆನ್ನಾಗಿ ಪೋಷಿಸಬೇಕು, ಬೃಹತ್ ಪ್ರಮಾಣದಲ್ಲಿ ಬೆಳೆಸಬೇಕು ಎಂಬ ಹತ್ತು ಹಲವಾರು ಆಲೋಚನೆಗಳನ್ನು ಹಾಗೂ ಜೀವಂತ ಕನಸುಗಳನ್ನು ಹೊತ್ತುಕೊಂಡು ಹೋಗುತ್ತಿರುವಾಗ, ದಾರಿ ಮಧ್ಯೆ ಹಲವಾರು ಬಗೆಯ ಎಡರು ತೊಡರುಗಳು ಕಾಡತೊಡಗುತ್ತವೆ. ಕೆಲವೊಮ್ಮೆ ಬಿರುಗಾಳಿಗೆ ಸಿಕ್ಕ ಹೆಮ್ಮರ ನೆಲಕಚ್ಚಿದಂತೆ, ಆ ತಂಡವು ಕೂಡ ನಿಷ್ಪ್ರಯೋಚಕರ ಬಿರುಗಾಳಿಗೆ ಬಲಿಯಾಗುವುದರಲ್ಲಿ ಸಂದೇಹವಿಲ್ಲ.

ಹಲವಾರು ಕನಸುಗಳನ್ನು ಕಟ್ಟಿಕೊಂಡು ಬೆಳೆಸುತ್ತಿರುವ ಕೂಸನ್ನು ಮಧ್ಯದಲ್ಲಿಯೇ ಚಿವುಟಿ ಹಾಕಿದಾಗ, ಅಥವಾ ಅಂತಹ ಒಂದು ತಂಡದ ಕೊಂಡಿ ಕಳಚಿಕೊಂಡಾಗ, ಅಂತಹ ಸಂದರ್ಭದಲ್ಲಿ ಮನಸ್ಸಿಗೆ ಉಂಟಾಗುವ ಆಘಾತ, ನೋವು, ಸಂಕಟ, ದುಃಖ ಅಷ್ಟಿಷ್ಟಲ್ಲ. ಅದಕ್ಕೆ ಹೇಳೋದು Experience Can't Explain ಅಂತ.
ಇದೊಂದು ಅನಿರೀಕ್ಷಿತ ಬೆಳವಣಿಗೆ ಅಂತಲೇ ಹೇಳಬಹುದು. ಯಾರೂ ಕೂಡ ಇಂತಹ ಅಚ್ಚರಿಗೆ ಪಾತ್ರರಾಗಬೇಕಿಲ್ಲ. ಆದರೆ, ಈ ಮೊದಲೇ ನಾನು ಹೇಳಿದಂತೆ ಎರಡು ಸೇತುವೆಯನ್ನು ಸೇರಿಸುವ ಸೇತುವೆಯ ಮೇಲೆ ನಾವು ನಡೆಯುತ್ತಿರುವಾಗ ದಿಢೀರನೆ ಮುರಿದು ಬಿಟ್ಟರೆ. ಖಂಡಿತ ನಾವು ನೀರು ಪಾಲು. ಆದರೆ, ಈಜು ಬಲ್ಲವ ಮಾತ್ರ ಪಾರು ಎಂಬಂತೆಯೇ, ತಂಡದಲ್ಲಿ ಸ್ವಸಾಮರ್ಥ್ಯವಿರುವವು (ಅಂದರೆ ಈಜುಬಲ್ಲವನು) ತಡ ಎಷ್ಟು ದೂರವಿದ್ದರೂ, ಈಜಬಲ್ಲ. ಅವನು ಇಚ್ಛೆಪಟ್ಟರೆ, ತಂಡದ ಸಹಪಾಠಿಗಳನ್ನು ಮುನ್ನಡೆಸಿಕೊಂಡು ದಡ ಸೇರಿಸಬಲ್ಲ.

ಆದರೆ, ಇಂತಹ ಬೆರಗುಗೊಳಿಸುವ ಬೆಳವಣಿಗೆಗಳು ಅಲ್ಪಕಾಲ ಮಾತ್ರ ಎಂಬುವುದನ್ನು ನಾವು ಮರೆಯುವಂತಿಲ್ಲ. ಕತ್ತಲೆ ಎಷ್ಟೇ ಪ್ರಮಾಣದಲ್ಲಿದ್ದರೂ, ಬೆಳಕಿನ ಒಂದೇ ಒಂದು ಕಿರಣ ಅದರಲ್ಲಿ ಹಾಯ್ದುಹೋದರೆ ಸಾಕು, ಯಾವುದು ಬಲಿಷ್ಟ ಎಂಬುವುದು ಬಿಡಿಸಿ ಹೇಳಬೇಕಿಲ್ಲ.

Friday, November 2, 2007

ಕಲೆಯಋಷಿ ಶಾರೂಖ್ ‌ಖಾನ್‌ಗೆ ಇಂದು 42ರ ಸಂಭ್ರಮ


ಕಲೆಯನ್ನು ಬದುಕಿನ ಒಂದು ಅಂಗವಾಗಿ ಮಾಡಿಕೊಂಡು ವೇಷ ಹಾಕುವವರನ್ನು ನೋಡಿದ್ದೇವೆ. ಆದರೆ, ಕಲೆಯನ್ನೇ
ಬದುಕನ್ನಾಗಿ ಮಾಡಿಕೊಂಡು ಪಕ್ಕಾ ವೃತ್ತಿಪರರಾಗಿ ಅದನ್ನೇ ಜೀವಾಳವಾಗಿರಿಸಿಕೊಂಡವರ ಬಣ್ಣದ ಕಥೆಯು ನಿಜಕ್ಕೂ
ವಿಸ್ಮಯವಾಗಿರುತ್ತೆ. ಅಂತಹ ಕಲೆಯಲ್ಲಿ ಚಿತ್ರರಂಗವು ಒಂದು.


ಮುಖಕ್ಕೆ ಬಣ್ಣ ಬಳಿದುಕೊಂಡು, ಕತ್ತಲೆ ಕೋಣೆಯೊಂದರಲ್ಲಿ ಮೂರು ಗಂಟೆಗಳ ಕಾಲ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ
ಕಲೆಗಾರಿಕೆ ನಿಜಕ್ಕೂ ಅದ್ಭುತ. ಇಂತಹ ಪ್ರತಿಭೆಯನ್ನು ನಾವು ಎಲ್ಲರಲ್ಲೂ ಕಾಣುವುದು ಅಸಾಧ್ಯವಾದದ ಮಾತು. ಆದರೆ,
ಅದನ್ನು ಕೆಲವರು ಮಾತ್ರ ಪಡೆದುಕೊಂಡಿರುತ್ತಾರೆ. ಅಂತಹ ಸಾಲಿಗೆ ಬಾಲಿವುಡ್ ನಟ ಶಾರೂಖ್ ಖಾನ್ ಕೂಡ ಸೇರಿದ್ದಾರೆ.


ತಮ್ಮ ಅದ್ಭುತ ಕಲೆಯ ಮೂಲಕ ದೇಶ ವಿದೇಶಗಳಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಶಾರೂಖ್ ಖಾನ್
ಇಂದು (02-11-2007) 42 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಕತ್ತಲೆಕೋಣೆಯಲ್ಲಿ ಕಲೆಯನ್ನು ತೋರ್ಪಡಿಸಿರುವ ಶಾರೂಖ್
ತಮ್ಮ ನೈಜ ಸ್ವರೂಪದ ಬೆಳಕನ್ನು ಹೊರಚೆಲ್ಲಿದ್ದಾರೆ.


ಶಾರೂಖ್ ಜೀವನ:ಸ್ವತಂತ್ರ ಹೋರಾಟಗಾರ ತಾಜ್ ಮೊಹಮ್ಮದ್ ಹಾಗೂ ಫಾತಿಮಾ ಖಾನ್ ಅವರ ಪುತ್ರನಾಗಿ ಶಾರೂಖ್ ಖಾನ್ 1965, ನವೆಂಬರ್ 2 ರಂದು ಜನ್ಮ ತಳೆದರು. ನಂತರ ತಮ್ಮ ವಿದ್ಯಾಭ್ಯಾಸವನ್ನು ಸೆಂಟ್ ಕೊಲಂಬಿಯಾ ಶಾಲೆಯಲ್ಲಿ
ಪೂರ್ಣಗೊಳಿಸಿದರು. ಶಾರೂಖ್ ಚಿತ್ರರಂಗದಲ್ಲಿ ಬರುತ್ತಾರೆ, ಮಿಂಚುತ್ತಾರೆ, ಒಬ್ಬ ದೊಡ್ಡ ಕಲಾವಿದನಾಗುತ್ತಾನೆ ಎಂಬ
ಯಾವ ಕನಸನ್ನು ಹೊತ್ತುಕೊಂಡಿರಲಿಲ್ಲ. ಕೊಲಂಬಿಯಾ ಶಾಲೆಯು ಉತ್ಸಾಹಿತ ಮಕ್ಕಳಿಗೆ ಸ್ವಾರ್ಡ್ ಪ್ರಶಸ್ತಿಯನ್ನು ನೀಡಿ
ಗೌರವಿಸುತ್ತದೆ. ಈ ಪ್ರಶಸ್ತಿಗೆ ಶಾರೂಖ್ ಆಯ್ಕೆಯಾದಾಗ ಅವರೊಬ್ಬ ಕಲಾವಿದರಾಗುವ ಲಕ್ಷಣಗಳು ಕಾಣಿಸಿಕೊಂಡವು.


ಅಲ್ಲದೆ, ಶಾಲಾ ಅವಧಿಗೆ ಚಕ್ಕರ್ ಹೊಡೆದು, ನಾಟಕಗಳಲ್ಲಿ ಪಾಲ್ಗೊಳ್ಳುವುದಕ್ಕೆ ಪ್ರಾರಂಭಿಸಿದರು. ಇದರಿಂದ ಅಭಿನಯದತ್ತ
ತಮ್ಮ ಚಿತ್ತವನ್ನು ಹರಿಸಿದರು. ನಂತರ ಹನ್ಸ್‌ರಾಜ್ ಕಾಲೇಜಿನಿಂದ ಪದವಿಯನ್ನು ಮುಗಿಸಿಕೊಂಡ ಶಾರೂಖ್ ಖಾನ್,
ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿಯನ್ನು
ಮುಗಿಸಿಕೊಂಡರು.


ಬೆಳ್ಳಿತೆರೆಗೆ ಬರುವ ಮುಂಚಿತವಾಗಿ ಶಾರೂಖ್ ಖಾನ್ ಅವರು, ಫೌಜಿ ಹಾಗೂ ಸರ್ಕಸ್ ಧಾರಾವಾಹಿಗಳ ಮೂಲಕ
ಕಿರುತೆರೆಯಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಪ್ರಾರಂಭವಾಯಿತು ಅವರ ಬಣ್ಣದ ಬದುಕು. ನಂತರ ಶಾರೂಖ್‌ ಮಾಯಾನಗರಿ
ಮುಂಬೈಗೆ ಆಗಮಿಸಿ ಬಾಲಿವುಡ್‌ನಲ್ಲಿ ಕಾಣಿಸಿಕೊಳ್ಳುವ ಆಸೆಗೆ ಮುಂದಾದರು. ಆದರೆ, ಅವರಿಗೆ ದಿಕ್ಕಾಗಿದ್ದ ಅವರ ತಂದೆ
ತಾಯಿಗಳನ್ನು 1991 ರಲ್ಲಿಯೇ ಕಳೆದುಕೊಂಡು ಅನಾಥರಾದರು.


ಖಾನ್ ತಮ್ಮ ತಂದೆತಾಯಿಗಳನ್ನು ಕಳೆದುಕೊಂಡ ನಂತರ, 1991 ರಲ್ಲಿಯೇ ಗೊರ್‌ಗಾವ್‌ದಿಂದ ಮುಂಬೈಗೆ ಆಗಮಿಸಿದರು.
ಇದಾದ ಕೇವಲ ಒಂದೇ ವರ್ಷದಲ್ಲಿ (1992 ರಲ್ಲಿ) "ದಿವಾನಾ" ಚಿತ್ರದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಯ ಚಿತ್ರಗಳನ್ನು
ರೂಪಿಸಲು ಪ್ರಾರಂಭಿಸಿದರು. ಇದು ಅವರ ಮೊಟ್ಟ ಮೊದಲ ಚಿತ್ರವಾದರೂ, ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಚರ್ಚೆಗೆ
ಗ್ರಾಸವಾಯಿತು. ಈ ಚಿತ್ರದ ಮೂಲಕವೇ ಶಾರೂಖ್‌ ತಮ್ಮನ್ನು ಗುರುತಿಸಿಕೊಂಡರು.


ಅಷ್ಟೇ ಅವರ ಮೊದಲ ಚಿತ್ರವು ಫಿಲ್ಮ್‌ಫೇರ್‌ನ ಉತ್ತಮ ಪ್ರಶಸ್ತಿಯು ದೊರೆಯಿತು. ಇದಾದ ನಂತರ ಅವರು ನಟಿಸಿದ
"ಮಾಯಾ ಮೆಮ್‌ಸಾಬ್" ಚಿತ್ರವು ಸ್ವಲ್ಪ ವಿವಾದವೆಬ್ಬಿಸಿತು. ಕಾರಣವಿಷ್ಟೇ, ಅದರಲ್ಲಿ ಶಾರೂಖ್ ಲೈಂಗಿಕ ಚಿತ್ರಗಳಲ್ಲಿ
ಕಾಣಿಸಿಕೊಂಡಿದ್ದರು. ಹೀಗೆ ಖಾನ್ ಬಾಲಿವುಡ್ ಚಿತ್ರರಂಗದಲ್ಲಿ "ಕಭಿ ಖುಷ್, ಕಭಿ ಗಮ್" ಅನುಭವಿಸಿ, ಮುಂದೆ ಬಾಲಿವುಡ್
ಚಿತ್ರರಂಗದ "ಅಶೋಕ್" ಚಕ್ರವರ್ತಿಯಾಗಿ ಮೆರೆದಿದ್ದು ನಿಜಕ್ಕೂ ವಿಸ್ಮಯ.


ಹಿಟ್ ಚಿತ್ರಗಳು:
ಶಾರೂಖ್ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು. 1993 ರಲ್ಲಿ ಅವರು ಅಭಿನಯಿಸಿದ
"ಬಾಜಿಗರ್" ಹಾಗೂ "ಡರ್" ಚಿತ್ರಗಳು ಮತ್ತೊಂದು ಹೊಸ ಅಲೆಯನ್ನು ಸೃಷ್ಟಿಸಿದವು. ಆದರೆ ಈ ಚಿತ್ರದಲ್ಲಿ ಹೀರೊ ರೂಪದ
ಖಳನಾಯಕನಾಗಿ ಅಭಿನಯಿಸಿದ್ದು ವಿಶೇಷ. ಅವರು ಖಳನಾಯಕನಾಗಿ ನಟಿಸಿದ ಮೊದಲ ಚಿತ್ರಗಳಾದರೂ, ಇವು
ಪ್ರೇಕ್ಷಕರ ಅಚ್ಚುಮೆಚ್ಚುಗೆಗೆ ಪಾತ್ರವಾದವು. "ಬಾಜಿಗರ್" ಚಿತ್ರದಲ್ಲಿನ ಅವರ ಅದ್ಭುತ ಅಭಿನಯಕ್ಕೆ ಮೆಚ್ಚಿ ಫಿಲ್ಮ್‌ಫೇರ್
ಅತ್ಯುತ್ತಮ ನಟ ಪ್ರಶಸ್ತಿಯು ದೊರಕಿತು.


ಇದಾದ ನಂತರ "ಕಭಿ ಹಾ ಕಭಿ ನಾ" ಚಿತ್ರವು ಅವರಿಗೆ ದೊಡ್ಡ ಪ್ರಮಾಣದ ಯಶಸ್ಸು ದೊರಕಿಸಿಕೊಟ್ಟಿತು. ಈ ಚಿತ್ರಕ್ಕೂ
ಕೂಡ ಅವರಿಗೆ ಫಿಲ್ಮ್‌ಫೆರ್‌ನ ಅತ್ಯುತ್ತಮ ನಟ ಪ್ರಶಸ್ತಿ ದೊರಕಿತು. ನಂತರ ಅವರು ನಟಿಸಿದ ಕರಣ್ ಅರ್ಜುನ್,
ಡಿಡಿಎಲ್‌ಜಿ, ಪರದೇಸಿ, ಕುಚ್ ಕುಚ್ ಹೋತಾ ಹೈ, ಕಭಿ ಖುಷ್ ಕಭಿ ಗಮ್, ವೀರ್ ಜರಾ ಹಾಗೂ ಇತ್ತೀಚೆಗೆ ರೂಪಿಸಿರುವ
ಚಕ್ ದೇ ಇಂಡಿಯಾಗಳು ಬಾಕ್ಸ್ ಆಫಿಸ್‌ನಲ್ಲಿ ಭರ್ಜರಿ ಯಶಸ್ಸು ದೊರಕಿಸಿ ಕೊಟ್ಟಿವೆ.


ಶಾರೂಖ್ ನಿಜಕ್ಕೂ ಅದ್ಭುತ ಕಲಾವಿದ. ಇಂದಿಗೂ ಕೂಡ ಅವರ ಚಿತ್ರಗಳನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ
ಅಭಿಮಾನಿಗಳು ಮುಗಿಬೀಳುತ್ತಾರೆ. ಅವರು ಕನ್ನಡದ ದೀಪಿಕಾ ಪಡುಕೋಣೆ ಅವರೊಂದಿಗೆ "ಓಂ ಶಾಂತಿ ಓಂ" ಚಿತ್ರವನ್ನು
ಈಗಾಗಲೇ ಪೂರ್ಣಗೊಳಿಸಿದ್ದು, ದೀಪಾವಳಿಯ ಹಬ್ಬದಂದು ಅದು ಬಿಡುಗೊಳ್ಳಲಿದೆ.


ಈ ಲೇಖನವನ್ನು ಎಂಎಸ್ಎನ್ ಕನ್ನಡ ಪೋರ್ಟಲ್‌ನಲ್ಲಿಯೂ ಓದಬಹುದು. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

Thursday, November 1, 2007

ಸ್ಫೂರ್ತಿ ನೀಡಿದ ಅಜ್ಜಿಗೆ ನನ್ನ ನಮನ...


ಆಗತಾನೆ ನಾನು ಡಿಗ್ರಿಯನ್ನು ಮುಗಿಸಿದ್ದೆ. ಮುಂದೇನು ಮಾಡಬೇಕು ಎಂದು ಸ್ಪಷ್ಟ ನಿರ್ಧಾರವಿರಲಿಲ್ಲ. ಭವಿಷ್ಯದ ನಿರ್ಮಾಣಕ್ಕಾಗಿ ಯಾವ ದಾರಿಯನ್ನು ಅರಿಸಿಕೊಂಡು ಹೋದರೆ ಉತ್ತಮ ಎಂಬ ಪ್ರಶ್ನೆ ಸದಾ ಕಾಡುತ್ತಿತ್ತು. ಕಾಲೇಜಿನಲ್ಲಿ ಕಲಿಸಿದ ಅಧ್ಯಾಪಕರುಗಳ ಸಲಹೆಯನ್ನು ಕೇಳಿದೆ. ಕೆಲವರಿಂದ ಉಪಯುಕ್ತ ಸಲಹೆ ಬಂತು. ಮತ್ತೆ ಕೆಲವರಿಂದ ಬಂದ ಉತ್ತರ ನನಗೆ ಸೂಕ್ತ ಎಂದು ತೋರಲಿಲ್ಲ.


ನಾನು ಕೊನೆಗೆ ಆಯ್ಕೆ ಮಾಡಿಕೊಂಡ ವಿಷಯಗಳಲ್ಲಿ ಪತ್ರಿಕೋದ್ಯಮ ಮತ್ತು ಗ್ರಂಥಾಲಯ ವಿಜ್ಞಾನ ಅಗ್ರ ಸ್ಥಾನದಲ್ಲಿದ್ದವು. ಆದರೆ, ಈ ಕೋರ್ಸಿಗೆ ಏನು ಮಾಡಬೇಕೆಂದು ಗೊಂದಲಕ್ಕೊಳಗಾದಾಗ ನನ್ನ ಆತ್ಮೀಯ ಮಿತ್ರನೊಬ್ಬ ನನಗೆ ಸಹಾಯ ಮಾಡಿದ. ನಾನು ಆತನನ್ನು ಸಹಾಯ ಕೇಳಿರಲಿಲ್ಲ. ನನ್ನ ಪರಿಸ್ಥಿತಿ ಅರಿತುಕೊಂಡು ಆತನಾಗಿಯೇ ಮುಂದೆ ಬಂದು ಸಹಾಯ ಮಾಡಿದ. ಅವನದು ದೊಡ್ಡ ಗುಣ. ಮುಂದೆ ಆತನೂ ನನ್ನೊಂದಿಗೆ ಸೇರಿ ಕರ್ನಾಟಕದ ಪ್ರಮುಖ ವಿಶ್ವವಿದ್ಯಾಲಯ ಒಂದರಲ್ಲಿ ಪ್ರವೇಶ ಪರೀಕ್ಷೆ ಬರೆದೆ. ಕೊನೆಗೂ ನಾನು ಇವೆರಡರಲ್ಲಿಯೂ ನನಗೆ ಸೀಟು ಸಿಕ್ಕಿತು!


ಬಹುಶಃ ನಾನು ಈ ಸೀಟು ತೆಗೆದುಕೊಳ್ಳಲು ನೀವು ಆ ಸ್ನೇಹಿತ ನನಗೆ ಎಷ್ಟು ಕಾರಣವಾಗಿದ್ದಾನೆಯೊ ಅಷ್ಟೇ ಪ್ರಮಾಣದಲ್ಲಿ ಒಂದು ಹಿರಿಯ ಜೀವ ನನ್ನ ಸ್ಫೂರ್ತಿ ನೀಡಿದ್ದರು. ನಾನು ಡಿಗ್ರಿ ಮುಗಿಸಿಕೊಂಡೆ. ಮುಂದೇನು ಮಾಡಬೇಕು ಎಂದು ಲೆಕ್ಕಾಚಾರ ಹಾಕುವಷ್ಟರಲ್ಲಿ ನನ್ನ ಮನೆತನದ ಆರ್ಥಿಕ ಪರಿಸ್ಥಿತಿ ನೆನಪಾಗಿ 'ನನ್ನ ಓದಿಗೆ ಪೂರ್ಣವಿರಾಮ ನೀಡಿ, ಯಾವುದಾದರೂ ಕೆಲಸ ಮಾಡಬೇಕೆಂಬ' ನಿರ್ಧಾರಕ್ಕೆ ಬಂದೆ. ನನ್ನ ನಿರ್ಧಾರದ ವಿಚಾರವನ್ನು ನಾನು ಮನೆಯಲ್ಲಿ ಹೇಳಲು ಹೋಗಲಿಲ್ಲ.


ಒಮ್ಮೆ ಅನಿವಾರ್ಯ ಕಾರಣಗಳಿಂದ ನಾನು ನನ್ನ ಅಜ್ಜಿಯ ಊರಿಗೆ ಹೋಗಬೇಕಾಯಿತು. ಆದರೆ, ಅಲ್ಲಿ ನನಗೊಂದು ಆಶ್ಚರ್ಯ ಕಾದಿತ್ತು! ಬಹುಶಃ ಅಜ್ಜಿಗೆ ನನ್ನ ನಿರ್ಧಾರದ ಬಗ್ಗೆ ಹೇಗೊ ತಿಳಿದಿರಬೇಕು. ನನ್ನನ್ನು ಹತ್ತಿರದಲ್ಲಿಯೇ ಕೂಡಿಸಿಕೊಂಡು 'ನೀನು ಮುಂದೆ ಏನು ಓದಬೇಕಂತ್ ತೀರ್ಮಾನ ಮಾಡಿದಿ' ಅಂದ್ಲು. ನಾನು ನನ್ನ ಓದಿನ ವಿಚಾರ ಲಹರಿಗಳನ್ನು ಹರಿಯಬಿಟ್ಟೆ. ನಂತರ ಆ ಹಿರಿಯ ಜೀವ ಹೇಳಿದ್ದೆನು ಗೊತ್ತೆ 'ನೋಡು ನೀನು ಏನ್ ಬೇಕಾದ್ ಕಲಿ, ಎಷ್ಟ್ ಖರ್ಚಾದ್ರು ಪರವಾಗಿಲ್ಲ. ಅದನ್ ನಾನ್ ಕೊಡ್ತಿನಿ' ಅಂದ್ರು.


ಅಜ್ಜಿಯ ಪ್ರತಿಯೊಂದು ಮಾತುಗಳನ್ನು ಕೇಳುತ್ತಾ ಹೊರಟ ನನಗೆ, ನನಗೇ ಗೊತ್ತಿಲ್ಲದ ಹಾಗೆ ನನ್ನ ಕಣ್ಣುಗಳು ಒದ್ದೆಯಾಗಿ ಕಣ್ಣೀರ ಹನಿಗಳು ಕಪಾಳಕ್ಕೆ ತಾಗಿದ್ದವು. ಅಜ್ಜಿ ನನ್ನ ಜೀವನಕ್ಕೆ ಇಷ್ಟೊಂದು ತಿರುವು ನೀಡ್ತಾರೆ ಅಂತ ನಾನು ಯಾವತ್ತಿಗೂ ನಿರೀಕ್ಷೆ ಮಾಡಿರಲಿಲ್ಲ. ನಿಜಕ್ಕೂ ನಾನು ಈ ಊರಿಗೆ ಬಂದ ಕಾರ್ಯ ಫಲಿಸಿತು ಅಂತ್ ಮನಸ್ಸಿನಲ್ಲಿಯೇ ಅಂದುಕೊಂಡು, ಅಜ್ಜಿಯ ಪ್ರತಿಯೊಂದು ಮಾತುಗಳನ್ನು ಸವಾಲಾಗಿ ಸ್ವೀಕರಿಸಿದೆ.


ನಿಜ ಹೇಳಬೇಕಂದ್ರೆ ನನ್ನ ಅಜ್ಜಿ ಸಾಲಿ ಕಟ್ಟೆಯನ್ನೂ ಹತ್ತಿಲ್ಲ. ಯಾವ ವಿಶ್ವ ವಿದ್ಯಾಲಯದಿಂದ ಯಾವ ಪದವಿಯನ್ನು ಪಡೆದುಕೊಂಡಿಲ್ಲ. ಆದರೆ, ಅವರು ಜೀವನದಲ್ಲಿಯೇ ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸಿದ್ದಾರೆ. ಇದರಿಂದ ಪಡೆದ ಅನುಭವಗಳೇ ಪ್ರಮಾಣಪತ್ರ. ಅಷ್ಟೇ ಅಲ್ಲ, ಕಷ್ಟಕಾಲ, ಬರಗಾಲ ಪರಿಸ್ಥಿತಿಯಲ್ಲಿಯೂ ತಮ್ಮ ಸಂಸಾರದ ಬಂಡಿಯನ್ನು ನೂಕಿರುವ ಕುರಿತು ನನ್ನ ಅಮ್ಮ ನನಗೆ ಹೇಳುತ್ತಿದ್ದನ್ನು ಕೇಳಿ, ನನ್ನ ಈ ಸಮಸ್ಯೆ ಯಾವ ಲೆಕ್ಕವೂ ಅಲ್ಲ ಅಂತ ಅನಿಸ್ತು. ನಿಜಕ್ಕೂ ಆ ಅಜ್ಜಿಯ ಅನುಭವಗಳು ನನ್ನನೊಮ್ಮೆ ಚಿಂತೆನೆಗೆ ಈಡು ಮಾಡಿದವು.


ನನಗೆ ಮುಂದೆ ಏನು ಮಾತಾಡ್ಬೇಕು ಅಂತಾ ಹೊಳೆಯದೆ ಹಾಗೆ ಸುಮ್ಮನೆ ಗೋಣು ಅಲ್ಲಾಡಿಸಿದೆ. ಅದೇ ಒಂದು ಮಾತು ನಾನು ಮತ್ತೆ ಓದನ್ನು ಮುಂದುವರೆಸಲು ಸ್ಫೂರ್ತಿಯಾಯಿತು. ಹಣವನ್ನು ಹಾಗೋ ಹೀಗೋ ಮಾಡಿ ಕೂಡಿಸಿ, ವಿಶ್ವವಿದ್ಯಾಲಯದ ವೃತ್ತಿಪರ ಕೋರ್ಸ್‌ವೊಂದಕ್ಕೆ ಕೊನೆಗೂ ಪ್ರವೇಶಾತಿಯನ್ನು ಪಡೆದೆ. ಇದರಿಂದಲೇ ನನ್ನ ಜೀವನ ರೂಪಿಸಿಕೊಳ್ಳಬೇಕೆಂಬ ನಿರ್ಣಯಕ್ಕೆ ಬಂದೆ. ಆಗ ನನ್ನ ದೃಢ ನಿರ್ಧಾರ ಬದಲಾವಣೆಯಾಗಿ ಓದಿನಲ್ಲಿ ಹೆಚ್ಚು ಆಸಕ್ತಿ ಹಾಗೂ ವಿಶ್ವಾಸ ಮತ್ತಷ್ಟು ಹೆಚ್ಚಿತು.


ಮುಂದೆ ನನ್ನ ಓದು ಆರ್ಥಿಕ ಸಮಸ್ಯೆಗಳ ನಡುವೆಯೇ ಮುಂದುವರೆಯಿತು. ಆದ್ರೆ ಅದಕ್ಕೆ ಹಣದ ನೆರವನ್ನು ಕೊಡುವುದರ ಜೊತೆಗೆ ಮಾನಸಿಕ ಸ್ಥೈರ್ಯವನ್ನು ತುಂಬಿದ್ದ ಅಜ್ಜಿಯ ಮಾತನ್ನು ಕೊನೆಗೂ ನಾನು ಈಡೇರಿಸಿದೆ. ಈಗ ಎರಡು ವರ್ಷಗಳ ವೃತ್ತಿಪರ ಕೋರ್ಸ್‌ನ್ನು ಯಶಸ್ವಿಯಾಗಿ ಪೂರೈಸಿರುವ ನಾನು, ಹೆಸರಾಂತ ಐಟಿ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.


ಓದನ್ನು ಅರ್ಧಕ್ಕೆ ನಿಲ್ಲಿಸಿ, ದುಡಿಯಬೇಕೆಂಬ ನಿರ್ಧಾರ ಕೈಗೊಂಡಿದ್ದಾಗ, ಆ ಹಿರಿಯ ಅನುಭವಿ ಜೀವ ನನ್ನಲ್ಲಿ ಸ್ಫೂರ್ತಿ ತುಂಬಿ ನನ್ನ ಜೀವನಕ್ಕೆ ಒಂದು ಅರ್ಥ ಬರುವಂತೆ ಮಾಡಿದ್ದಾರೆ. ಅವರು ಕೂಡ ಹಲವಾರು ತಮ್ಮ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಅನುಭವಿಸಿ ಬಂದವರು. ಅವರ ಅನುಭವಕ್ಕೆ, ಸ್ಫೂರ್ತಿ ಚಿಲುಮೆಗೆ ನಾನು ಋಣಿಯಾಗಿದ್ದೇನೆ.


ಈಗಲೂ ಕೂಡ ನಾನು ಊರಿಗೆ ಹೋದಾಗಲೊಮ್ಮೆ ಅಜ್ಜಿಯನ್ನು ಕಂಡು ಬರುತ್ತೇನೆ. ಪ್ರತಿಸಲ ಅವರ ಕಣ್ ಜೇನ ಹನಿಯನ್ನು ನೋಡಿದಾಗ ನೂರು ಕಥೆಗಳನ್ನು ಹೇಳುತ್ತಿರುವಂತಿವೆ. ಅವರ ಅನುಭವ, ಅವರ ವಿಚಾರ ಸಾಮರ್ಥ್ಯ, ಬದುಕಿನ ಹೋರಾಟ, ಮೊಮ್ಮಕ್ಕಳ ಬಗ್ಗೆ ಇರುವ ಇನ್ನೂ ವಿಶೇಷ ಕಾಳಜಿಯನ್ನು ನೋಡಿದರೆ, ನಾನು ಜೀವನದಲ್ಲಿ ಇನ್ನೂ ಬಹಳಷ್ಟು ಸಾಧನೆ ಮಾಡಬೇಕೆಂಬ ಆಸೆ ಹುಟ್ಟುತ್ತದೆ.


ಹೋರಾಟದ ಬದುಕು ನಮ್ಮ ಜೀವನದಲ್ಲಿ ಹಲವಾರು ಪಾಠಗಳನ್ನು ಕಲಿಸುತ್ತದೆ. ಆದರೆ, ಇಂತಹ ಬದುಕಿನಲ್ಲಿ ಸಮಸ್ಯೆಗಳು ಎದುರಾದಾಗ, ಅವುಗಳಿಗೆ ಪರಿಹಾರ ಇಲ್ಲವೇನೋ ಎಂಬ ಮನೋವ್ಯಾಧಿಯಂತೆ ಚಿಂತಿಸ ತೊಡಗುತ್ತೇವೆ. ಕೆಲವೊಮ್ಮೆ ಇಂತಹ ಸಮಸ್ಯೆಗಳಿಗೆ ಅನುಭವಗಳೆಂಬ ಔಷಧಿಯು ಪರಿಹಾರವಾಗಿ ಒದಗಬಲ್ಲುದು. ಅದಕ್ಕೆ ಇಂತಹ ಅನುಭವಿಗಳ ಸ್ಫೂರ್ತಿಯೇ ಕಾರಣವಾಗಬುಹುದಲ್ಲವೇ............