Saturday, December 29, 2007

ಮಿತ್ರರು ಒಂದೇ ಕುಟುಂಬದ ಸೊಸೆಯರಾದಾಗ..


ನನಗಾಗ 8 ವರ್ಷ. ಬಾಲ್ಯ ಸವಿಯೋ ಕಾಲ. ಸುಖ ದುಃಖ, ಮೇಲು ಕೀಳು, ಬೇಧ ಭಾವ ಅರಿಯದ ವಯಸ್ಸು. ಒಂದರ್ಥದಲ್ಲಿ ಇನ್ನೂ ಸಾಧಾರಣ ತಿಳುವಳಿಕೆ ಬಾರದ ವಯಸ್ಸು. ಕನ್ನಡ (ಪ್ರಾಥಮಿಕ) ಶಾಲೆಗೆ ಹೋಗ್ತಾ ಇದ್ದೆ. ಆ ಸಂದರ್ಭದಲ್ಲಿ ನಮ್ಮ ಮನೆಯ ಜವಾಬ್ದಾರಿಯನ್ನೆಲ್ಲಾ ಅಪ್ಪನೆ ನಿರ್ವಹಿಸಬೇಕಾಗಿತ್ತು. ಅಮ್ಮ ಅವತ್ತಿನ ದಿನ ಕೂಲಿ ನಾಲಿ ಮಾಡಿಕೊಂಡು ಸಂಸಾರದ ಹೊರೆಯಲ್ಲಿ ತನ್ನ ಪಾಲನ್ನು ನೀಡುತ್ತಿದ್ದಳು. ಅತ್ತ ಅಣ್ಣನಿಗೆ ತನ್ನ ಓದನ್ನು ಮುಂದುವರೆಸಬೇಕೆಂಬ ಹಂಬಲ. ಆದ್ರೆ ಅವನು ದುಡಿಯೋದು ಬಿಟ್ಟು ಓದುತ್ತಾ ಕೂತ್ರೆ ಹಾಳಾದ ಹೊಟ್ಟೆ ಕೇಳಬೇಕಲ್ಲಾ. ಅದಕ್ಕಾಗಿ ಅವ್ನು ದಿನದಲ್ಲಿ ಕೆಲವು ಸಮಯವನ್ನು ಕಿರಾಣಿ ಅಂಗಡಿಗೆ ಹೋಗಿ ಲೆಕ್ಕಾ ಬರೆಯೋದಕ್ಕೆ ಹೋಗ್ತಾ ಇದ್ದಾ.

ನಮ್ಮನೇಲಿ ನಾನೊಬ್ಬಳೇ ಎಲ್ಲರ ಪ್ರೀತಿಗೆ ಪಾತ್ರಳಾದ ಹುಡುಗಿ ಅಂದ್ರೆ ಅತಿಶಯೋಕ್ತಿಯೇನಲ್ಲ. ಮುಂದೆ ನಾನು ಹಾಗೊ ಹೀಗೋ ಮಾಡಿ ಎಸ್ಎಸ್ಎಲ್‌ಸಿ ಪಾಸು ಮಾಡಿಕೊಂಡೆ. ಮುಂದೆ ಕಾಲೇಜು ಮೆಟ್ಟಿಲು ಏರಿ, ಹೆಚ್ಚಿಗೆ ಓದೋಣಾ ಅಂದ್ರೆ ಮನೆ ಪರಿಸ್ಥಿತಿ ಬೇರೆ ಚೆನ್ನಾಗಿರಲಿಲ್ಲ. ನಾನು ದೊಡ್ಡವಳಾದ ಮೇಲಂತೂ ನನ್ನ ತಂದೆ ತಾಯಿಗಳು ನನ್ನ ಮದುವೆ ಮಾಡೋ ಚಿಂತೆಯಲ್ಲಿಯೇ ಮಗ್ನರಾಗಿ ಬಿಟ್ರು. ಅಷ್ಟಕ್ಕೂ ನನಗಾಗ ಮದುವೆ ಮಾಡಿಕೊಳ್ಳೋ ಹಂಬಲವೇನೂ ಇರಲಿಲ್ಲ. ಅಲ್ಲದೆ ನನ್ನ ಜೀವನದ ಮಹದಾಸೆಯೂ ಅದಾಗಿರಲಿಲ್ಲ. ನಾನು ಚೆನ್ನಾಗಿ ಓದಿ ಜೀವನದಲ್ಲಿ ನಮಗಾಗಿ ಕಷ್ಟಪಟ್ಟ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆಯಿತ್ತು. ಆದ್ರೆ, ಸರಕಾರಿ ಕಾಲೇಜಿನಲ್ಲಿ ಇನ್ನೂರು ರೂಪಾಯಿ ನೀಡುವಷ್ಟು ಸಾಮರ್ಥ್ಯ ಕೂಡ ನನ್ನ ತಂದೆಗೆ ಇರಲಿಲ್ಲ. ಏತನ್ಮಧ್ಯೆ ಹಾಸಿಗೆ ಹಿಡಿದ ಅಜ್ಜಿ ಬೇರೆ. ಸಂಸಾರಗಿಂತಲೂ ದೊಡ್ಡ ಖರ್ಚು ಅವಳದೆ.

ಹೀಗೆ ಒಂದಿಲ್ಲಾ ಒಂದು ತಾಪತ್ರೆಯಗಳು ನಮ್ಮ ಸಂಸಾರದಲ್ಲಿ ಆಗಾಗ ಬಾಣದಂತೆ ಎದೆಗೆ ನಾಟುತ್ತಲೇ ಇದ್ದವು. ನನ್ನ ಕುಟುಂಬದ ಕಷ್ಟವನ್ನು ನೋಡಲಾರದೆ, ನನ್ನಿಂದ ಏನಾದ್ರು ಸಹಾಯ ಆಗುತ್ತದೆಯೇ ಎಂದು ಆಲೋಚನೆ ಮಾಡಿ, ಪ್ರತಿನಿತ್ಯ ಅಮ್ಮನೊಂದಿಗೆ ಇನ್ನೂ ಮುಂದೆ ನಾನು ಕೂಲಿಗೆ ಹೋದರಾಯ್ತು ಅಂತಾ ವಿಚಾರ ಮಾಡಿದೆ. ಆದ್ರೆ ವಯಸ್ಸಿನ ಹೆಣ್ಮಕ್ಳು ಹೊರಗಡೆ ಹೋಗಿ ದುಡಿಯೋದು ಯಾವ ತಂದೆ-ತಾಯಿಗಳು ಇಚ್ಚೆ ಪಡ್ತಾರೆ ಹೇಳಿ... ಹಾಗೇನೆ ನಮ್ಮ ಮನೇಲೂ ಅದಕ್ಕೆ ಬೇಡ ಅಂದ್ರು. ಆದರೆ, ಕುಟುಂಬದ ನೈಜ ಪರಿಸ್ಥಿತಿ ಅನಿವಾರ್ಯವಾಗಿ ಅವರನ್ನು ಮೂಕರನ್ನಾಗಿಸಿತು.

ನಾನೂ ಅಮ್ಮನೊಂದಿಗೆ ಹೋಗಿ ದಿನನಿತ್ಯ ಕೆಲಸಕ್ಕೆ ಹೋಗಿ ದುಡೀತಾ ಇರೋದ್ರಿಂದಾಗಿ ಕುಟುಂಬದಲ್ಲಿ ಹೌದೋ ಅಲ್ಲವೋ ಅನ್ನುವಷ್ಟು ಆರ್ಥಿಕ ಮಟ್ಟ ಸುಧಾರಣೆ ಕಂಡಿತ್ತು. ಕೆಲವು ದಿನಗಳ ಈ ಕಾರ್ಯ ಬಿಡುವಿಲ್ಲದೆ ಹಾಗೇ ಮುಂದುವರೆಯಿತು. ಮಳೆಗಾಲದಲ್ಲಿ ಹೊಲ ಗದ್ದೆಗಳಲ್ಲಿ ಸಾಕಷ್ಟು ಕೆಲ್ಸಾ ಇರ್ತಿತ್ತು. ಇದರಿಂದ ಕೆಲಸಕ್ಕೆ ಯಾವ ಅಡ್ಡಿಗಳು ಬರಲಿಲ್ಲ. ಆದರೆ, ಮಳೆಗಾಲ ಮರೆಮಾಚಿ ಬೇಸಿಗೆ ಆವರಿಸಿದಾಗ, ಆಗಂತೂ ಅಪ್ಪಾ ಹಾಗೂ ಅಮ್ಮಾ ಇಬ್ರೂ ಪಟ್ಟಣಕ್ಕೆ ಹೋಗಿಯೇ ದುಡಿದುಕೊಂಡು ಬರಬೇಕಾಗಿತ್ತು. ಆದರೆ, ನಾನು ಅವರೊಟ್ಟಿಗೆ ಬರುವುದು ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ಹೀಗಾಗಿ ನಮ್ಮೂರ ಗೌಡ್ರು ಮನೆಯಲ್ಲಿ ಮನೆಗೆಲಸ ಮಾಡಿಕೊಳ್ಳುತ್ತಾ ನಾನು ಕುಟುಂಬಕ್ಕೆ ಅಳಿಲು ಸೇವೆ ಮಾಡ್ತಾ ಇದ್ದೆ.

ಪ್ರತಿನಿತ್ಯದಂತೆ ನನ್ನ ಕೆಲಸಕ್ಕೆ ನಾನು ಗೌಡರ ಮನೆಗೆ ಹೋದೆ. ಆಗ ಅವರ ಮನೇಲಿ ಏನೋ ಒಂದು ಹಬ್ಬದ ವಾತಾವರಣ ಮೂಡಿತ್ತು. ನನಗೂ ತುಂಬಾ ಆಶ್ಚರ್ಯವಾಯ್ತು. 'ಏನಿದು ಇವತ್ತು ಎಲ್ಲರೂ ಇಷ್ಟೊಂದು ಖುಷಿಯಾಗಿದ್ದಾರೆ' ಅಂದ್ಕೊಂಡು ಮನೆಯ ಒಳಗಡೆ ಕಾಲಿಟ್ಟೆ. ಆಗ ಗೌಡಶ್ಯಾನಿ (ಗೌಡರ ಪತ್ನಿ) ಬಂದು 'ಮಲ್ಲಿ ಇವತ್ತು ನಮ್ಮ ಕವಿತಾಳನ್ನು (ಮಗಳು) ನೋಡೋಕೆ ಗಂಡಿನ ಕಡೆಯೋರು ಬರ್ತಾ ಇದಾರೆ' ಅನ್ನೊ ವಿಷಯವನ್ನು ತಿಳಿಸಿದಾಗ, ಈ ಸಂಭ್ರಮದ ಗುಟ್ಟೇನು ಅಂತಾ ಆವಾಗ ನನಗೆ ತಿಳಿತು. ಗಂಡಿನ ಕಡೆಯವರು ಇವರಿಗಿಂತಲೂ ಸ್ವಲ್ಪ ಮೇಲುಗೈ ಇದ್ದರು ಎನ್ನಿ. ಅವರಿಗೆ ಹೆಣ್ಣು ಇಷ್ಟವಾಗಿರುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿದ್ದವು.

ನಾನು ಅಂದುಕೊಂಡಂತೆ ಮರುದಿನ ನಡದೆ ಹೋಗಿತ್ತು. ಗೌಡರ ಮನೆಗೆ ಎಂದಿನಂತೆ ಕೆಲಸಕ್ಕೆ ಹೋದಾಗ, ಅಮ್ಮಾವ್ರು (ಗೌಡರ ಪತ್ನಿ) 'ಲೆ ಮಲ್ಲಿ ನಮ್ಮ ಕವಿತಾನ ಅವ್ರು ಒಪ್ಕೊಂಡಿದಾರಂತೆ. ಇವತ್ತು ಮುಂಜಾನೆ ಅವ್ರು ಫೋನ್ ಮಾಡಿ ತಿಳಿಸಿದ್ರು' ಎಂದು ಸಂಭ್ರಮದಿಂದ ತಿಳಿಸಿದಾಗ ನನಗೆ ತುಂಬಾ ಸಂತೋಷವಾಯಿತು. ಕಾಲ ಯಾರನ್ನು ಎಲ್ಲಿ, ಯಾವಾಗ ಒಂದು ಮಾಡುತ್ತೋ ಆ ದೇವರಿಗೆ ಗೊತ್ತು ಅಂತಾ ಮನೆಗೆ ಹೋದೆ.

ಈ ಘಟನೆಯಾಗಿ ಎರಡು ಮೂರು ದಿನಗಳ ನಂತರ ನನಗೊಂದು ವಿಚಿತ್ರವಾದ ಮತ್ತು ಅಷ್ಟೇ ಆಶ್ಚರ್ಯ ಕಾದಿತ್ತು. ನಮ್ಮನೇಲಿ ಯಾರೋ ಅತಿಥಿ ಬಂದು ಕುಳಿತಿದ್ದಾನೆ ! ಅವರೊಟ್ಟಿಗೆ ಅವರ ಬಂದು ಬಳಗ ಬೇರೆ ! ನನ್ನ ಕಣ್ಣುಗಳನ್ನು ನಾನೇ ನಂಬದಾಯಿತು. ಆಗ ನನ್ನ ತಾಯಿ ಒಳಗೆ ಕರೆದು 'ಲೇ ಮಲ್ಲಿ ಅವ್ರು ನಿನ್ನನ್ನ ನೋಡೋಕೆ ಬಂದಾರೆ. ಹುಡುಗನಿಗೆ ಈಗಾಗಲೇ ಒಂದ್ ಮದ್ವೆ ಆಗಿ, ಅವಳಿಗೆ ಡೈವೋರ್ಸ್ ನೀಡಿದ್ದಾನೆ. ಇದು ಅವರಿಗೆ ಎರಡನೇ ಕಡೆ ಸಂಬಂಧ. ಹುಡುಗಾ ಪರವಾಗಿಲ್ಲ. ಚೆನ್ನಾಗಿದ್ದಾನೆ. ಸುಮಾರು 34 ರ ಆಸುಪಾಸು' ಎಂದು ನನ್ನ ಅಮ್ಮ ಆ ಹುಡುಗನ ಗುಣಗಾನ ಮಾಡಿದ್ದೆ ಮಾಡಿದ್ದು. ಆದ್ರೆ.... ಮದ್ವೆ ಆಗೋಳು ನಾನು ತಾನೆ ಎಂದು ಹೇಳಿದಾಗ, ನನ್ನ ಅಮ್ಮನ ಕಣ್ಣಲ್ಲಿ ಕಂಬನಿ ತುಂಬಿಯೇ ಬಂತು. ಆಗ 'ನೋಡೇ ನಿನಗೆ ಸಾವಿರಾರು ರೂಪಾಯಿ ವರದಕ್ಷಿಣಿ ಕೊಟ್ಟು ಮದ್ವೆ ಮಾಡೋ ಶಕ್ತಿ ಅಂತೂ ಆ ದೇವ್ರು ನಮಗೆ ಕೊಟ್ಟಿಲ್ಲಾ. ಇದು ಒಳ್ಳೆ ಕಡೆ ಸಂಬಂಧ ದೇವಸ್ಥಾನದಲ್ಲಿ ಸರಳವಾಗಿ ಮದ್ವೆ ಮಾಡಿಕೊಡು ಅಂತಾ ಹೇಳಿದಾರೆ. ಅದಕ್ಕೆ ಅವ್ರೇ ಖರ್ಚು ನೀಡ್ತಾ ಇದಾರೆ. ದಯವಿಟ್ಟು ಬೇಡಾ ಅನ್ನಬೇಡ್ವೆ' ಅಂದಾಗ. ಆಯ್ತು ಅಂತಾ ಮೌನದಲ್ಲೇ ಉತ್ತರ ನೀಡಿದೆ.

ಕಾಲಚಕ್ರ ತಿರುಗತ್ತಲೇ ಇರುತ್ತದೆ ಎಂಬುವುದಕ್ಕೆ ನಾನೇ ಸಾಕ್ಷಿ. ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಏನು ಗೊತ್ತೆ ನಾನು ಮದುವೆ ಆಗ್ತಾ ಇರೋ ಹುಡುಗನ ಸ್ವಂತ ತಮ್ಮನೆ ನಾನು ಪ್ರತಿನಿತ್ಯ ಕೆಲಸಕ್ಕೆ ಹೋಗ್ತಾ ಇದ್ದ ಗೌಡರ ಮಗಳ್ನಾ ಅಂದ್ರೆ ಕವಿತಾನ ಮದುವೆ ಆಗೋ ಗಂಡು ಅಂತಾ! ಎಷ್ಟೊಂದು ವಿಪರ್ಯಾಸ. ನನ್ನ ತಂದೆ ಪಟ್ಟಣಕ್ಕೆ ಕೆಲಸಕ್ಕೆ ಹೋದಾಗ ಅಲ್ಲಿ ಇವರ ಬಗ್ಗೆ ಯಾರೋ ಒಬ್ರು ಹೇಳಿದ್ದರಂತೆ. ಆ ಮೂಲಕವಾಗಿ ನಾನು ಇವರನ್ನು ಮದುವೆ ಆಗಬೇಕಾಗಿ ಬಂತು. ಇನ್ನೊಂದು ಆಶ್ಚರ್ಯದ ಸಂಗತಿ ಎಂದರೆ, ಕವಿತಾ ಮತ್ತು ನಾನು ಇಬ್ಬರು ಪ್ರಾಥಮಿಕ ಶಾಲೆಯಿಂದಲೇ ಮಿತ್ರರು ! ಈಗ ಒಂದೇ ಮನೆ ಸೊಸೆಯಂದಿರು ಬೇರೆ.

ನಮ್ಮ ಮಗಳು ತಾನು ಹುಟ್ಟಿನಿಂದಲೂ ಸಂಕಷ್ಟದಲ್ಲಿಯೇ ಬೆಳೆದವಳು. ತನ್ನ ಗಂಡನ ಮನೆಯಲ್ಲಾದ್ರೂ ಸುಖದಿಂದ ಬದುಕಲಿ ಎಂದು ತಂದೆ-ತಾಯಿಗಳು ಆಶಿಸಿದ್ದರು. ಆದ್ರೆ ಅದಕ್ಕೆ ತದ್ವಿರುದ್ಧವಾದ ವಾತಾವರಣ ಇಲ್ಲಿ ಸೃಷ್ಟಿಯಾಗಿತ್ತು. ಮದುವೆಯಾಗಿ ಕೆಲವು ತಿಂಗಳುಗಳು ಕಳೆದವು. ನನ್ನ ಗಂಡನ ಮನೇಲಿ ಒಂದು ರೀತಿಯ ತಾರತಮ್ಯ ಕಾಣಿಸುತ್ತಿತ್ತು. ಅದರಲ್ಲೂ ನನ್ನ ಅತ್ತೆಯಂತೂ ನಿಸ್ಸೀಮಳು. ನಾನು ಬಡವರ ಮನೆಯಿಂದ ಬಂದ ಹೆಣ್ಣು, ಕವಿತಾ ಸಾಹುಕಾರ ಮನೆಯಿಂದ ಬಂದ ಹೆಣ್ಣು ಎಂಬ ಒಂದೇ ಒಂದು ಕಾರಣಕ್ಕೆ ಅತ್ತೆ ಮನೆಯ ಹೊರಗಡೆಯಿರುವ ಬೇರೆ ಎರಡು ರೂಮ್‌ಗಳನ್ನು ನನಗೆ ನೀಡಿದಳು. ಆದ್ರೆ ನಾನು ಅದನ್ನು ಮನಪೂರ್ವಕವಾಗಿ ಸ್ವೀಕರಿಸಿದ್ದೆ.

ಆದ್ರೆ ಇದು ನನಗೆ ಹೊಸತರವೇನೂ ಕಾಣಲಿಲ್ಲ. ಗುಡಿಸಲಲ್ಲಿಯೇ ಹುಟ್ಟಿ, ಬೆಳೆದವಳು ನಾನು. ಇದು ಅಂತಹ ಬದಲಾವಣೆಯೇನೂ ನನ್ನಲ್ಲಿ ಕಾಣಲಿಲ್ಲ. ಅದು ಅಲ್ಲದೆ, ನನ್ನ ಪತಿಯೂ ಕೂಡ ಅವರು ಕೊಟ್ಟ ಒಳಗಡೆಯ ಬಂಗಲೆಯನ್ನು ಬಿಟ್ಟು ನನ್ನೊಟ್ಟಿಗೆ ಸಂಸಾರ ಸಾಗಿಸುತ್ತಿದ್ದಾರೆ. ಇದಕ್ಕಿಂತಲೂ ನನಗೆ ಬೇರೆ ಭಾಗ್ಯ ನನಗೇನು ಬೇಕು ಅಂದುಕೊಂಡು ನನ್ನ ಪತಿಯೊಂದಿಗೆ ಸುಖ ಜೀವನ ನಡೆಸುತ್ತಿದ್ದೇನೆ.

ಪ್ರಿಯ ಓದುಗರೆ, ಇಲ್ಲಿ ನಾನು ಬಿಡಿಸಿರುವ ಅಕ್ಷರಗಳ ಸರಮಾಲೆಯು ಕೇವಲ ಸೃಷ್ಟಿಯಲ್ಲ. ಇದು ನನ್ನೂರಿನಲ್ಲಾದ ನೈಜ ಘಟನೆಯನ್ನು ಆಧರಿಸಿ ಬರೆದಿರುವ ಸತ್ಯ ಸಂಗತಿ. ವಿವಿಧ ಬಗೆಯ ಕಷ್ಟ ಕಾರ್ಪಣ್ಯಗಳು ಜೀವನದುದ್ದಕ್ಕೂ ಬರುತ್ತಲೇ ಇರುತ್ತವೆ. ಆದರೆ, ಕೆಲವರ ಅನುಭವಗಳು ಇದಕ್ಕೆ ಹೊರತಾಗಿರುತ್ತವೆ.

Wednesday, November 21, 2007

ಅಪರಿಚಿತನಾಗಿ ಬಂದು ಪರಿಚಿತನಾಗಿ ಹೋಗುವಾಗ...

ಅಪರಿಚಿತನಾಗಿ ಬಂದು ಪರಿಚಿತನಾಗಿ ಹೋಗುವಾಗ ನಮ್ಮ ಹಾಗೂ ಅವರ ಮಧ್ಯೆ ಉಳಿಯುವುದು ಒಂದೇ ಅದುವೇ "ಸ್ನೇಹ". ನಿಜ. ನಮಗೆ ಯಾರಾದರೊಬ್ಬರು ಹೊಸದಾಗಿ ಪರಿಚಿತವಾದಾಗ, ಅವರೊಟ್ಟಿಗೆ ಹೇಗೆ ನಡೆದುಕೊಳ್ಳುವುದು, ಯಾವ ರೀತಿಯಾಗಿ ಅವರನ್ನು ಕಾಣಬೇಕೆಂಬ ಹಲವು ಪ್ರಶ್ನೆಗಳು ನಮ್ಮ ಮನದಲ್ಲಿ ಕಾಡತೊಡಗುತ್ತವೆ. ಕಾರಣ, ಆ ಅಪರಿಚಿತ ವ್ಯಕ್ತಿ ನಮಗೆ ಹತ್ತಿರವಾಗಿರುವುದಿಲ್ಲ ಎಂಬುದು ಒಂದು ಕಾರಣವಾದರೆ, ಇದೇ ಮೊದಲ ಬಾರಿಗೆ ಅವರ ಮುಖಚರ್ಯೆ ನನಗಾಗುತ್ತಿರುವುದು ಎಂಬುದು ಇನ್ನೊಂದು ಕಾರಣವಾಗಿದೆ.

ಕಾಲೇಜು ದಿನಗಳಲ್ಲಿಯಾದರೆ, ಅವರೊಟ್ಟಿಗೆ ಬೇಗನೆ ಹೊಂದಿಕೊಳ್ಳುವುದು ಕಷ್ಟತರವೇನಲ್ಲ ಎನ್ನುವುದು ನನ್ನ ಅನುಭವಕ್ಕೆ ಬಂದ ಮಾತು. ಆದರೆ, ಅದೇ ಅವರು ವೃತ್ತಿರಂಗದಲ್ಲಿ ಹೊಸದಾಗಿ ಪರಿಚಿತವಾದರೆ, ನಮ್ಮನ್ನು ಚಿಂತೆಯ ಅವಗಾಹನೆಗೆ ಎಡೆ ಮಾಡಿಕೊಡುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ.

ಅಂತಹ ವ್ಯಕ್ತಿ ಹಾಗೂ ನಮ್ಮ ನಡುವೆ "ಹೊಂದಾಣಿಕೆ" ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ ಸಹಜ. ಈ ಹೊಂದಾಣಿಕೆ ಅದು ವೃತ್ತಿ ಬದುಕಲ್ಲಾಗಬಹುದು, ಅವರ ಭಾಷೆಯಲ್ಲಾಗಹುದು, ವ್ಯಕ್ತಿತ್ವದಲ್ಲಾಗಬಹುದು ಅಥವಾ ಅವರ ಮನೋ ಇಚ್ಛೆಯಲ್ಲಾಗಬಹುದು. ಕೆಲವೊಮ್ಮೆ ಈ ಹೊಂದಾಣಿಕೆಯು ಅಪಾರ್ಥಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯು ಉಂಟು.

ಆದರೆ, ಹೊಂದಾಣಿಕೆ ಏಕಮಾರ್ಗವಾಗಿ ಬಂದರೆ, ಅದು ಅಷ್ಟೊಂದು ಸಮಂಜಸ ಅನಿಸುವುದಿಲ್ಲ. ಅದು ದ್ವಿಮುಖವಾಗಿಯೂ ಬಂದರೆ, ತುಂಬಾ ಒಳಿತು ಎಂಬುವುದು ಪ್ರಜ್ಞಾವಂತ ಓದುಗರ ಅಭಿಪ್ರಾಯ ಅಂಬೋಣ. ಇಂತಹ ಹೊಂದಾಣಿಕೆಯಾದ ಮೇಲೆಯೂ ಅವರು ನಮ್ಮ ಹೃದಯಕ್ಕೆ ಹತ್ತಿರವಾಗುತ್ತಾರೆಯೇ ಎಂಬ ಪ್ರಶ್ನೆ ನಮ್ಮ ಮುಂದೆ ಕಾಡುತ್ತದೆ. ಖಂಡಿತ ಎಂಬುದು ನನ್ನ ದಿಟ್ಟ ಉತ್ತರ.

ಆದರೆ, ಅಂತಹ ವ್ಯಕ್ತಿ ದಿನನಿತ್ಯ ನಮ್ಮ ಬದುಕಿನಲ್ಲಾಗುವ (ವೃತ್ತಿ ಬದುಕು ಒಳಗೊಂಡಂತೆ) ಪ್ರತಿಯೊಂದು ಘಟನೆಯಲ್ಲಿ ಪಾಲ್ಗೊಂಡಾಗ ಹಾಗೂ ಸಮಸ್ಯೆಯೊಂದು ನಮ್ಮ ಮುಂದೆ ದಿಢೀರ್‌ನೆ ಪ್ರತ್ಯಕ್ಷವಾದಾಗ ಅಂತಹ ವ್ಯಕ್ತಿಗಳ ಎದುರು ಮನಸ್ಸು ಬಿಚ್ಚಿ ಮಾತನಾಡಲು ಯಾವ ಭಯ, ಅಂಜಿಕೆ ಇರುವುದಿಲ್ಲ. ಹೀಗಾಗಿ ಅವರು ನಮಗೆ ಆಪ್ತರಾಗುತ್ತಾರೆ ಎಂಬುದು ವಾದ.

ದಿನನಿತ್ಯದ ನಮ್ಮ ಕಾರ್ಯಗಳಲ್ಲಿ ನಮಗೆ ಸ್ನೇಹಿತರಂತೆ ಸಲಹೆ, ಕಷ್ಟಗಳಲ್ಲಿ ಏನೋ ಸಂಬಂಧದಲ್ಲಿ ಭಾಗಿಯಾಗಿ ಭಾವನಾತ್ಮಕವಾಗಿ ಸಂಬಂಧಕ್ಕೆ ತಿರುಗಿದಾಗ ಅವರನ್ನು ಬಿಟ್ಟಿರಲು ಅಥವಾ ದೂರವಾಗಿಸಿಕೊಳ್ಳಲು ಯಾರು ಇಚ್ಛಿಸುವುದಿಲ್ಲ.

ಇಂತಹ ವ್ಯಕ್ತಿಯೊಬ್ಬರು ಒಮ್ಮೆಲೆ ದೈಹಿಕವಾಗಿ ದೂರವಾಗುತ್ತಾರೆ ಎಂಬ ಸುದ್ದಿ ಕೇಳಿದಾಗ, (ಕಾಲೇಜಿನಲ್ಲಿ ನೀವು ಕೊನೆಯ ಗಳಿಗೆಯಲ್ಲಿ ನಿಮ್ಮ ಸ್ನೇಹಿತರ ಅಥವಾ ಸ್ನೇಹಿತೆಯರು ನಿಮ್ಮನ್ನು ಅಗಲುತ್ತಿದ್ದಾರೆ ಎನ್ನುವಂತೆ ಅನುಭವವಾಗುತ್ತದೆ) ಮನಸ್ಸಿಗೆ ಏನೋ ಒಂದು ಕಸಿವಿಸಿ, ಕೆಲಸದಲ್ಲಿ ನಿರುತ್ಸಾಹ ಜೊತೆಗೆ ಮನಸ್ಸಿಗೆ ಹತ್ತಿರವಾದ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಂತೆ ಭಾಸ. ಅಲ್ಲದೆ ಮನಸ್ಸು ಏನನ್ನೊ ಯೋಚಿಸುತ್ತಿರುವ ಹಾಗೆ ಕೆಲಸದಲ್ಲಿ ನಿರಾಸಕ್ತಿ ತೋರಿ ಯಾವುದೋ ಚಿಂತೆಯಲ್ಲಿ ಮಗ್ನವಾಗುತ್ತದೆ.

ಪ್ರತಿನಿತ್ಯ ಒಡನಾಟದಲ್ಲಿದ್ದ, ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರು ದಿಢೀರನೆ ಮಾಯವಾದಾಗ. ಆಗುವ ಸಂಕಟ, ನೋವು ಅದನ್ನು ಅನುಭವಿಸಿದವನಿಗೆ ತಿಳಿದಿರಬೇಕು. ಇಂತಹ ಆಲೋಚನೆಯನ್ನು ನಾನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಇಂತಹ ಅಗಲುವಿಕೆಯನ್ನು. ಇದು ನನ್ನ ಅನುಭವಕ್ಕೂ ಹೊರತಾಗಿಲ್ಲ ಎಂಬುದು ಇನ್ನೊಂದು ಕಟು ಸತ್ಯವಾದ ಮಾತು.

ಒಂದು ಗಿಡವನ್ನು ನೆಡುವುದು ಸಾಮಾನ್ಯವಾದ ವಿಷಯವಲ್ಲ. ಅದನ್ನು ಬೆಳೆಸಿ ದೊಡ್ಡ ಮರವನ್ನಾಗಿ ಮಾಡುವುದು ಅದರ ಮುಂದಿನ ಗುರಿಯಾಗಿರುತ್ತದೆ. ಅಂತೆಯೇ ಅಂತಹ ವ್ಯಕ್ತಿಗಳು ಕೆಲವೇ ದಿನಗಳವರೆಗೆ ನಮ್ಮ ಸಂಗಡ ಇದ್ದರೂ, ಅವರೊಂದಿಗೆ ಮಾಡಿಕೊಂಡ ಸ್ನೇಹ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ಮುಂದಿರುವ ಗುರಿಯಾಗಿರುತ್ತದೆ. ಆದರೆ, ಇದು ಅನಿವಾರ್ಯವಲ್ಲ. ಅಪೇಕ್ಷಿತವಾದದು. ಕಾರಣ ಅವರ ವ್ಯಕ್ತಿತ್ವವೇ ಅಂತಹದ್ದಾಗಿರುತ್ತದೆ.

Saturday, November 10, 2007

ತಂಡದ ಕೊಂಡಿ ಕಳಚಿಕೊಂಡಾಗ...


ನದಿಯ ಎರಡು ದಡಗಳನ್ನು ಸೇರಿಸುವ ಸೇತುವೆಯ ಮೇಲೆ ನಡೆಯುತ್ತಿರುವಾಗ, ಒಮ್ಮೆಲೆ ಅದು ಕಳಚಿಕೊಂಡಾಗ! ನಿಮ್ಮ ಊಹೆ ಸರಿ. ಎಲ್ಲರೂ ನೀರುಪಾಲು, ಆದರೆ, ಅದರಲ್ಲಿ ಈಜು ಬಲ್ಲವ ಮಾತ್ರ ಬದುಕಬಲ್ಲ.

ಒಂದು ತಂಡವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವುದು ಸಾಮಾನ್ಯವಾದ ಕಾರ್ಯವೇನಲ್ಲ. ತಂಡದ ನಾಯಕರು ಯಾರು ಬೇಕಾದರೂ, ಆಗಬಹುದು. ಆದರೆ, ಆ ತಂಡದ ಸಹಪಾಠಿಗಳೊಂದಿಗೆ ತಮ್ಮೊಡನೆ ಕರೆದೊಯ್ಯಬಲ್ಲ ಸಮರ್ಥ ಶಕ್ತಿ, ಚಾಕಚಕ್ಯತೆ, ಚಾಣಾಕ್ಷ್ಯತನ, ಜಾಣ್ಮೆ ಹಾಗೂ ಆಸಕ್ತಿ ಅವರಲ್ಲಿ ಇರಬೇಕಾದುದು ಅತ್ಯಗತ್ಯ. ಅದು ಆಟದಲ್ಲಿರಬಹುದು ಅಥವಾ ನಮ್ಮ ವೃತ್ತಿ ಬದುಕೇ ಆಗಿರಬಹುದು.

ಗಿಡ ನೆಡುವುದು ಸುಲಭದ ಕೆಲಸ. ಅದನ್ನು ಯಾರು ಬೇಕಾದರೂ ಮಾಡಬಹುದು. ಆದರೆ, ಅದಕ್ಕೆ ಸಮಪ್ರಮಾಣದ ನೀರು, ಪೋಷಾಂಕಾಂಶಗಳನ್ನು ಹಾಕಿ ಬೆಳೆಸಿ ಮರ, ಹೆಮ್ಮರವಾಗಿ ಮಾಡುವುದು ತುಂಬಾ ಕಷ್ಟ. ಅದು ದೊಡ್ಡ ಹೆಮ್ಮರವಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ, ತಮ್ಮ ಕೈಯಿಂದ ಇಂತಹ ಕೆಲಸ ಏನು ಆಗದು ಎಂಬ ಮನೋವ್ಯಾಧೆಯಿಂದ ಕೆಲವು ನಿಷ್ಪ್ರಯೋಜಕರು ಇಂತಹ ಮರವನ್ನು ಬುಡಸಮೇತ ಕಿತ್ತೊಗೆಯಬೇಕೆಂಬ ಕೀಳರಿಮೆ ಚಿಂತನೆಗೆ ಒಳಗಾಗುವುದನ್ನು ನಾವು ಕಂಡಿದ್ದೇವೆ.

ಛಲ, ಅಚಲ ನಿರ್ಧಾರಗಳು, ಶಿಸ್ತು ಹಾಗೂ ದೃಢ ನಿಶ್ಚಯಗಳು ತಂಡದಲ್ಲಿರಲೇಬೇಕಾದುದು ಅತೀ ಮುಖ್ಯವಾದ ಅಂಶಗಳೆಂದು ನಾನು ಅಂದುಕೊಂಡಿದ್ದೇನೆ. ಆದರೆ, ಇವು ಕೆಲವೊಮ್ಮೆ ಮನುಷ್ಯನನ್ನು ಇಕ್ಕಟ್ಟಿಗೆ ಸಿಕ್ಕಿ ಹಾಕಿಸುತ್ತವೆ. ಆದರೂ ಕೂಡ ಇವು ತಂಡದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂಬುವುದರಲ್ಲಿ ಎರಡು ಮಾತಿಲ್ಲ.

ತಂಡದ ತನ್ನ ಕಾರ್ಯವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವಾಗ ದಾರಿ ಮಧ್ಯದಲ್ಲಿ ಕೆಲವು ವಿಚಿತ್ರ ತಿರುವುಗಳು, ದಿಗ್ಭ್ರಮೆ ಉಂಟು ಮಾಡುವಂತ ಸನ್ನಿವೇಶಗಳು ಘಟನೆಗಳು ನಡೆದು ಹೋಗುತ್ತವೆ. ಇದಕ್ಕೆ ಅಚ್ಚರಿ ಪಟ್ಟರೂ ಚಿಂತೆಯಿಲ್ಲ.

ತಾನು ತನ್ನ ತಂಡವನ್ನು ಮುಂಚೂಣಿಯಲ್ಲಿ ತರಬೇಕು, ಒಂದು ಆದರ್ಶಪ್ರಾಯವಾದ ತಂಡವನ್ನು ಕಟ್ಟಬೇಕು. ಅದನ್ನು ಎಲ್ಲರಿಗಿಂತಲೂ ಚೆನ್ನಾಗಿ ಪೋಷಿಸಬೇಕು, ಬೃಹತ್ ಪ್ರಮಾಣದಲ್ಲಿ ಬೆಳೆಸಬೇಕು ಎಂಬ ಹತ್ತು ಹಲವಾರು ಆಲೋಚನೆಗಳನ್ನು ಹಾಗೂ ಜೀವಂತ ಕನಸುಗಳನ್ನು ಹೊತ್ತುಕೊಂಡು ಹೋಗುತ್ತಿರುವಾಗ, ದಾರಿ ಮಧ್ಯೆ ಹಲವಾರು ಬಗೆಯ ಎಡರು ತೊಡರುಗಳು ಕಾಡತೊಡಗುತ್ತವೆ. ಕೆಲವೊಮ್ಮೆ ಬಿರುಗಾಳಿಗೆ ಸಿಕ್ಕ ಹೆಮ್ಮರ ನೆಲಕಚ್ಚಿದಂತೆ, ಆ ತಂಡವು ಕೂಡ ನಿಷ್ಪ್ರಯೋಚಕರ ಬಿರುಗಾಳಿಗೆ ಬಲಿಯಾಗುವುದರಲ್ಲಿ ಸಂದೇಹವಿಲ್ಲ.

ಹಲವಾರು ಕನಸುಗಳನ್ನು ಕಟ್ಟಿಕೊಂಡು ಬೆಳೆಸುತ್ತಿರುವ ಕೂಸನ್ನು ಮಧ್ಯದಲ್ಲಿಯೇ ಚಿವುಟಿ ಹಾಕಿದಾಗ, ಅಥವಾ ಅಂತಹ ಒಂದು ತಂಡದ ಕೊಂಡಿ ಕಳಚಿಕೊಂಡಾಗ, ಅಂತಹ ಸಂದರ್ಭದಲ್ಲಿ ಮನಸ್ಸಿಗೆ ಉಂಟಾಗುವ ಆಘಾತ, ನೋವು, ಸಂಕಟ, ದುಃಖ ಅಷ್ಟಿಷ್ಟಲ್ಲ. ಅದಕ್ಕೆ ಹೇಳೋದು Experience Can't Explain ಅಂತ.
ಇದೊಂದು ಅನಿರೀಕ್ಷಿತ ಬೆಳವಣಿಗೆ ಅಂತಲೇ ಹೇಳಬಹುದು. ಯಾರೂ ಕೂಡ ಇಂತಹ ಅಚ್ಚರಿಗೆ ಪಾತ್ರರಾಗಬೇಕಿಲ್ಲ. ಆದರೆ, ಈ ಮೊದಲೇ ನಾನು ಹೇಳಿದಂತೆ ಎರಡು ಸೇತುವೆಯನ್ನು ಸೇರಿಸುವ ಸೇತುವೆಯ ಮೇಲೆ ನಾವು ನಡೆಯುತ್ತಿರುವಾಗ ದಿಢೀರನೆ ಮುರಿದು ಬಿಟ್ಟರೆ. ಖಂಡಿತ ನಾವು ನೀರು ಪಾಲು. ಆದರೆ, ಈಜು ಬಲ್ಲವ ಮಾತ್ರ ಪಾರು ಎಂಬಂತೆಯೇ, ತಂಡದಲ್ಲಿ ಸ್ವಸಾಮರ್ಥ್ಯವಿರುವವು (ಅಂದರೆ ಈಜುಬಲ್ಲವನು) ತಡ ಎಷ್ಟು ದೂರವಿದ್ದರೂ, ಈಜಬಲ್ಲ. ಅವನು ಇಚ್ಛೆಪಟ್ಟರೆ, ತಂಡದ ಸಹಪಾಠಿಗಳನ್ನು ಮುನ್ನಡೆಸಿಕೊಂಡು ದಡ ಸೇರಿಸಬಲ್ಲ.

ಆದರೆ, ಇಂತಹ ಬೆರಗುಗೊಳಿಸುವ ಬೆಳವಣಿಗೆಗಳು ಅಲ್ಪಕಾಲ ಮಾತ್ರ ಎಂಬುವುದನ್ನು ನಾವು ಮರೆಯುವಂತಿಲ್ಲ. ಕತ್ತಲೆ ಎಷ್ಟೇ ಪ್ರಮಾಣದಲ್ಲಿದ್ದರೂ, ಬೆಳಕಿನ ಒಂದೇ ಒಂದು ಕಿರಣ ಅದರಲ್ಲಿ ಹಾಯ್ದುಹೋದರೆ ಸಾಕು, ಯಾವುದು ಬಲಿಷ್ಟ ಎಂಬುವುದು ಬಿಡಿಸಿ ಹೇಳಬೇಕಿಲ್ಲ.

Friday, November 2, 2007

ಕಲೆಯಋಷಿ ಶಾರೂಖ್ ‌ಖಾನ್‌ಗೆ ಇಂದು 42ರ ಸಂಭ್ರಮ


ಕಲೆಯನ್ನು ಬದುಕಿನ ಒಂದು ಅಂಗವಾಗಿ ಮಾಡಿಕೊಂಡು ವೇಷ ಹಾಕುವವರನ್ನು ನೋಡಿದ್ದೇವೆ. ಆದರೆ, ಕಲೆಯನ್ನೇ
ಬದುಕನ್ನಾಗಿ ಮಾಡಿಕೊಂಡು ಪಕ್ಕಾ ವೃತ್ತಿಪರರಾಗಿ ಅದನ್ನೇ ಜೀವಾಳವಾಗಿರಿಸಿಕೊಂಡವರ ಬಣ್ಣದ ಕಥೆಯು ನಿಜಕ್ಕೂ
ವಿಸ್ಮಯವಾಗಿರುತ್ತೆ. ಅಂತಹ ಕಲೆಯಲ್ಲಿ ಚಿತ್ರರಂಗವು ಒಂದು.


ಮುಖಕ್ಕೆ ಬಣ್ಣ ಬಳಿದುಕೊಂಡು, ಕತ್ತಲೆ ಕೋಣೆಯೊಂದರಲ್ಲಿ ಮೂರು ಗಂಟೆಗಳ ಕಾಲ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ
ಕಲೆಗಾರಿಕೆ ನಿಜಕ್ಕೂ ಅದ್ಭುತ. ಇಂತಹ ಪ್ರತಿಭೆಯನ್ನು ನಾವು ಎಲ್ಲರಲ್ಲೂ ಕಾಣುವುದು ಅಸಾಧ್ಯವಾದದ ಮಾತು. ಆದರೆ,
ಅದನ್ನು ಕೆಲವರು ಮಾತ್ರ ಪಡೆದುಕೊಂಡಿರುತ್ತಾರೆ. ಅಂತಹ ಸಾಲಿಗೆ ಬಾಲಿವುಡ್ ನಟ ಶಾರೂಖ್ ಖಾನ್ ಕೂಡ ಸೇರಿದ್ದಾರೆ.


ತಮ್ಮ ಅದ್ಭುತ ಕಲೆಯ ಮೂಲಕ ದೇಶ ವಿದೇಶಗಳಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಶಾರೂಖ್ ಖಾನ್
ಇಂದು (02-11-2007) 42 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಕತ್ತಲೆಕೋಣೆಯಲ್ಲಿ ಕಲೆಯನ್ನು ತೋರ್ಪಡಿಸಿರುವ ಶಾರೂಖ್
ತಮ್ಮ ನೈಜ ಸ್ವರೂಪದ ಬೆಳಕನ್ನು ಹೊರಚೆಲ್ಲಿದ್ದಾರೆ.


ಶಾರೂಖ್ ಜೀವನ:ಸ್ವತಂತ್ರ ಹೋರಾಟಗಾರ ತಾಜ್ ಮೊಹಮ್ಮದ್ ಹಾಗೂ ಫಾತಿಮಾ ಖಾನ್ ಅವರ ಪುತ್ರನಾಗಿ ಶಾರೂಖ್ ಖಾನ್ 1965, ನವೆಂಬರ್ 2 ರಂದು ಜನ್ಮ ತಳೆದರು. ನಂತರ ತಮ್ಮ ವಿದ್ಯಾಭ್ಯಾಸವನ್ನು ಸೆಂಟ್ ಕೊಲಂಬಿಯಾ ಶಾಲೆಯಲ್ಲಿ
ಪೂರ್ಣಗೊಳಿಸಿದರು. ಶಾರೂಖ್ ಚಿತ್ರರಂಗದಲ್ಲಿ ಬರುತ್ತಾರೆ, ಮಿಂಚುತ್ತಾರೆ, ಒಬ್ಬ ದೊಡ್ಡ ಕಲಾವಿದನಾಗುತ್ತಾನೆ ಎಂಬ
ಯಾವ ಕನಸನ್ನು ಹೊತ್ತುಕೊಂಡಿರಲಿಲ್ಲ. ಕೊಲಂಬಿಯಾ ಶಾಲೆಯು ಉತ್ಸಾಹಿತ ಮಕ್ಕಳಿಗೆ ಸ್ವಾರ್ಡ್ ಪ್ರಶಸ್ತಿಯನ್ನು ನೀಡಿ
ಗೌರವಿಸುತ್ತದೆ. ಈ ಪ್ರಶಸ್ತಿಗೆ ಶಾರೂಖ್ ಆಯ್ಕೆಯಾದಾಗ ಅವರೊಬ್ಬ ಕಲಾವಿದರಾಗುವ ಲಕ್ಷಣಗಳು ಕಾಣಿಸಿಕೊಂಡವು.


ಅಲ್ಲದೆ, ಶಾಲಾ ಅವಧಿಗೆ ಚಕ್ಕರ್ ಹೊಡೆದು, ನಾಟಕಗಳಲ್ಲಿ ಪಾಲ್ಗೊಳ್ಳುವುದಕ್ಕೆ ಪ್ರಾರಂಭಿಸಿದರು. ಇದರಿಂದ ಅಭಿನಯದತ್ತ
ತಮ್ಮ ಚಿತ್ತವನ್ನು ಹರಿಸಿದರು. ನಂತರ ಹನ್ಸ್‌ರಾಜ್ ಕಾಲೇಜಿನಿಂದ ಪದವಿಯನ್ನು ಮುಗಿಸಿಕೊಂಡ ಶಾರೂಖ್ ಖಾನ್,
ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿಯನ್ನು
ಮುಗಿಸಿಕೊಂಡರು.


ಬೆಳ್ಳಿತೆರೆಗೆ ಬರುವ ಮುಂಚಿತವಾಗಿ ಶಾರೂಖ್ ಖಾನ್ ಅವರು, ಫೌಜಿ ಹಾಗೂ ಸರ್ಕಸ್ ಧಾರಾವಾಹಿಗಳ ಮೂಲಕ
ಕಿರುತೆರೆಯಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಪ್ರಾರಂಭವಾಯಿತು ಅವರ ಬಣ್ಣದ ಬದುಕು. ನಂತರ ಶಾರೂಖ್‌ ಮಾಯಾನಗರಿ
ಮುಂಬೈಗೆ ಆಗಮಿಸಿ ಬಾಲಿವುಡ್‌ನಲ್ಲಿ ಕಾಣಿಸಿಕೊಳ್ಳುವ ಆಸೆಗೆ ಮುಂದಾದರು. ಆದರೆ, ಅವರಿಗೆ ದಿಕ್ಕಾಗಿದ್ದ ಅವರ ತಂದೆ
ತಾಯಿಗಳನ್ನು 1991 ರಲ್ಲಿಯೇ ಕಳೆದುಕೊಂಡು ಅನಾಥರಾದರು.


ಖಾನ್ ತಮ್ಮ ತಂದೆತಾಯಿಗಳನ್ನು ಕಳೆದುಕೊಂಡ ನಂತರ, 1991 ರಲ್ಲಿಯೇ ಗೊರ್‌ಗಾವ್‌ದಿಂದ ಮುಂಬೈಗೆ ಆಗಮಿಸಿದರು.
ಇದಾದ ಕೇವಲ ಒಂದೇ ವರ್ಷದಲ್ಲಿ (1992 ರಲ್ಲಿ) "ದಿವಾನಾ" ಚಿತ್ರದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಯ ಚಿತ್ರಗಳನ್ನು
ರೂಪಿಸಲು ಪ್ರಾರಂಭಿಸಿದರು. ಇದು ಅವರ ಮೊಟ್ಟ ಮೊದಲ ಚಿತ್ರವಾದರೂ, ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಚರ್ಚೆಗೆ
ಗ್ರಾಸವಾಯಿತು. ಈ ಚಿತ್ರದ ಮೂಲಕವೇ ಶಾರೂಖ್‌ ತಮ್ಮನ್ನು ಗುರುತಿಸಿಕೊಂಡರು.


ಅಷ್ಟೇ ಅವರ ಮೊದಲ ಚಿತ್ರವು ಫಿಲ್ಮ್‌ಫೇರ್‌ನ ಉತ್ತಮ ಪ್ರಶಸ್ತಿಯು ದೊರೆಯಿತು. ಇದಾದ ನಂತರ ಅವರು ನಟಿಸಿದ
"ಮಾಯಾ ಮೆಮ್‌ಸಾಬ್" ಚಿತ್ರವು ಸ್ವಲ್ಪ ವಿವಾದವೆಬ್ಬಿಸಿತು. ಕಾರಣವಿಷ್ಟೇ, ಅದರಲ್ಲಿ ಶಾರೂಖ್ ಲೈಂಗಿಕ ಚಿತ್ರಗಳಲ್ಲಿ
ಕಾಣಿಸಿಕೊಂಡಿದ್ದರು. ಹೀಗೆ ಖಾನ್ ಬಾಲಿವುಡ್ ಚಿತ್ರರಂಗದಲ್ಲಿ "ಕಭಿ ಖುಷ್, ಕಭಿ ಗಮ್" ಅನುಭವಿಸಿ, ಮುಂದೆ ಬಾಲಿವುಡ್
ಚಿತ್ರರಂಗದ "ಅಶೋಕ್" ಚಕ್ರವರ್ತಿಯಾಗಿ ಮೆರೆದಿದ್ದು ನಿಜಕ್ಕೂ ವಿಸ್ಮಯ.


ಹಿಟ್ ಚಿತ್ರಗಳು:
ಶಾರೂಖ್ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು. 1993 ರಲ್ಲಿ ಅವರು ಅಭಿನಯಿಸಿದ
"ಬಾಜಿಗರ್" ಹಾಗೂ "ಡರ್" ಚಿತ್ರಗಳು ಮತ್ತೊಂದು ಹೊಸ ಅಲೆಯನ್ನು ಸೃಷ್ಟಿಸಿದವು. ಆದರೆ ಈ ಚಿತ್ರದಲ್ಲಿ ಹೀರೊ ರೂಪದ
ಖಳನಾಯಕನಾಗಿ ಅಭಿನಯಿಸಿದ್ದು ವಿಶೇಷ. ಅವರು ಖಳನಾಯಕನಾಗಿ ನಟಿಸಿದ ಮೊದಲ ಚಿತ್ರಗಳಾದರೂ, ಇವು
ಪ್ರೇಕ್ಷಕರ ಅಚ್ಚುಮೆಚ್ಚುಗೆಗೆ ಪಾತ್ರವಾದವು. "ಬಾಜಿಗರ್" ಚಿತ್ರದಲ್ಲಿನ ಅವರ ಅದ್ಭುತ ಅಭಿನಯಕ್ಕೆ ಮೆಚ್ಚಿ ಫಿಲ್ಮ್‌ಫೇರ್
ಅತ್ಯುತ್ತಮ ನಟ ಪ್ರಶಸ್ತಿಯು ದೊರಕಿತು.


ಇದಾದ ನಂತರ "ಕಭಿ ಹಾ ಕಭಿ ನಾ" ಚಿತ್ರವು ಅವರಿಗೆ ದೊಡ್ಡ ಪ್ರಮಾಣದ ಯಶಸ್ಸು ದೊರಕಿಸಿಕೊಟ್ಟಿತು. ಈ ಚಿತ್ರಕ್ಕೂ
ಕೂಡ ಅವರಿಗೆ ಫಿಲ್ಮ್‌ಫೆರ್‌ನ ಅತ್ಯುತ್ತಮ ನಟ ಪ್ರಶಸ್ತಿ ದೊರಕಿತು. ನಂತರ ಅವರು ನಟಿಸಿದ ಕರಣ್ ಅರ್ಜುನ್,
ಡಿಡಿಎಲ್‌ಜಿ, ಪರದೇಸಿ, ಕುಚ್ ಕುಚ್ ಹೋತಾ ಹೈ, ಕಭಿ ಖುಷ್ ಕಭಿ ಗಮ್, ವೀರ್ ಜರಾ ಹಾಗೂ ಇತ್ತೀಚೆಗೆ ರೂಪಿಸಿರುವ
ಚಕ್ ದೇ ಇಂಡಿಯಾಗಳು ಬಾಕ್ಸ್ ಆಫಿಸ್‌ನಲ್ಲಿ ಭರ್ಜರಿ ಯಶಸ್ಸು ದೊರಕಿಸಿ ಕೊಟ್ಟಿವೆ.


ಶಾರೂಖ್ ನಿಜಕ್ಕೂ ಅದ್ಭುತ ಕಲಾವಿದ. ಇಂದಿಗೂ ಕೂಡ ಅವರ ಚಿತ್ರಗಳನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ
ಅಭಿಮಾನಿಗಳು ಮುಗಿಬೀಳುತ್ತಾರೆ. ಅವರು ಕನ್ನಡದ ದೀಪಿಕಾ ಪಡುಕೋಣೆ ಅವರೊಂದಿಗೆ "ಓಂ ಶಾಂತಿ ಓಂ" ಚಿತ್ರವನ್ನು
ಈಗಾಗಲೇ ಪೂರ್ಣಗೊಳಿಸಿದ್ದು, ದೀಪಾವಳಿಯ ಹಬ್ಬದಂದು ಅದು ಬಿಡುಗೊಳ್ಳಲಿದೆ.


ಈ ಲೇಖನವನ್ನು ಎಂಎಸ್ಎನ್ ಕನ್ನಡ ಪೋರ್ಟಲ್‌ನಲ್ಲಿಯೂ ಓದಬಹುದು. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

Thursday, November 1, 2007

ಸ್ಫೂರ್ತಿ ನೀಡಿದ ಅಜ್ಜಿಗೆ ನನ್ನ ನಮನ...


ಆಗತಾನೆ ನಾನು ಡಿಗ್ರಿಯನ್ನು ಮುಗಿಸಿದ್ದೆ. ಮುಂದೇನು ಮಾಡಬೇಕು ಎಂದು ಸ್ಪಷ್ಟ ನಿರ್ಧಾರವಿರಲಿಲ್ಲ. ಭವಿಷ್ಯದ ನಿರ್ಮಾಣಕ್ಕಾಗಿ ಯಾವ ದಾರಿಯನ್ನು ಅರಿಸಿಕೊಂಡು ಹೋದರೆ ಉತ್ತಮ ಎಂಬ ಪ್ರಶ್ನೆ ಸದಾ ಕಾಡುತ್ತಿತ್ತು. ಕಾಲೇಜಿನಲ್ಲಿ ಕಲಿಸಿದ ಅಧ್ಯಾಪಕರುಗಳ ಸಲಹೆಯನ್ನು ಕೇಳಿದೆ. ಕೆಲವರಿಂದ ಉಪಯುಕ್ತ ಸಲಹೆ ಬಂತು. ಮತ್ತೆ ಕೆಲವರಿಂದ ಬಂದ ಉತ್ತರ ನನಗೆ ಸೂಕ್ತ ಎಂದು ತೋರಲಿಲ್ಲ.


ನಾನು ಕೊನೆಗೆ ಆಯ್ಕೆ ಮಾಡಿಕೊಂಡ ವಿಷಯಗಳಲ್ಲಿ ಪತ್ರಿಕೋದ್ಯಮ ಮತ್ತು ಗ್ರಂಥಾಲಯ ವಿಜ್ಞಾನ ಅಗ್ರ ಸ್ಥಾನದಲ್ಲಿದ್ದವು. ಆದರೆ, ಈ ಕೋರ್ಸಿಗೆ ಏನು ಮಾಡಬೇಕೆಂದು ಗೊಂದಲಕ್ಕೊಳಗಾದಾಗ ನನ್ನ ಆತ್ಮೀಯ ಮಿತ್ರನೊಬ್ಬ ನನಗೆ ಸಹಾಯ ಮಾಡಿದ. ನಾನು ಆತನನ್ನು ಸಹಾಯ ಕೇಳಿರಲಿಲ್ಲ. ನನ್ನ ಪರಿಸ್ಥಿತಿ ಅರಿತುಕೊಂಡು ಆತನಾಗಿಯೇ ಮುಂದೆ ಬಂದು ಸಹಾಯ ಮಾಡಿದ. ಅವನದು ದೊಡ್ಡ ಗುಣ. ಮುಂದೆ ಆತನೂ ನನ್ನೊಂದಿಗೆ ಸೇರಿ ಕರ್ನಾಟಕದ ಪ್ರಮುಖ ವಿಶ್ವವಿದ್ಯಾಲಯ ಒಂದರಲ್ಲಿ ಪ್ರವೇಶ ಪರೀಕ್ಷೆ ಬರೆದೆ. ಕೊನೆಗೂ ನಾನು ಇವೆರಡರಲ್ಲಿಯೂ ನನಗೆ ಸೀಟು ಸಿಕ್ಕಿತು!


ಬಹುಶಃ ನಾನು ಈ ಸೀಟು ತೆಗೆದುಕೊಳ್ಳಲು ನೀವು ಆ ಸ್ನೇಹಿತ ನನಗೆ ಎಷ್ಟು ಕಾರಣವಾಗಿದ್ದಾನೆಯೊ ಅಷ್ಟೇ ಪ್ರಮಾಣದಲ್ಲಿ ಒಂದು ಹಿರಿಯ ಜೀವ ನನ್ನ ಸ್ಫೂರ್ತಿ ನೀಡಿದ್ದರು. ನಾನು ಡಿಗ್ರಿ ಮುಗಿಸಿಕೊಂಡೆ. ಮುಂದೇನು ಮಾಡಬೇಕು ಎಂದು ಲೆಕ್ಕಾಚಾರ ಹಾಕುವಷ್ಟರಲ್ಲಿ ನನ್ನ ಮನೆತನದ ಆರ್ಥಿಕ ಪರಿಸ್ಥಿತಿ ನೆನಪಾಗಿ 'ನನ್ನ ಓದಿಗೆ ಪೂರ್ಣವಿರಾಮ ನೀಡಿ, ಯಾವುದಾದರೂ ಕೆಲಸ ಮಾಡಬೇಕೆಂಬ' ನಿರ್ಧಾರಕ್ಕೆ ಬಂದೆ. ನನ್ನ ನಿರ್ಧಾರದ ವಿಚಾರವನ್ನು ನಾನು ಮನೆಯಲ್ಲಿ ಹೇಳಲು ಹೋಗಲಿಲ್ಲ.


ಒಮ್ಮೆ ಅನಿವಾರ್ಯ ಕಾರಣಗಳಿಂದ ನಾನು ನನ್ನ ಅಜ್ಜಿಯ ಊರಿಗೆ ಹೋಗಬೇಕಾಯಿತು. ಆದರೆ, ಅಲ್ಲಿ ನನಗೊಂದು ಆಶ್ಚರ್ಯ ಕಾದಿತ್ತು! ಬಹುಶಃ ಅಜ್ಜಿಗೆ ನನ್ನ ನಿರ್ಧಾರದ ಬಗ್ಗೆ ಹೇಗೊ ತಿಳಿದಿರಬೇಕು. ನನ್ನನ್ನು ಹತ್ತಿರದಲ್ಲಿಯೇ ಕೂಡಿಸಿಕೊಂಡು 'ನೀನು ಮುಂದೆ ಏನು ಓದಬೇಕಂತ್ ತೀರ್ಮಾನ ಮಾಡಿದಿ' ಅಂದ್ಲು. ನಾನು ನನ್ನ ಓದಿನ ವಿಚಾರ ಲಹರಿಗಳನ್ನು ಹರಿಯಬಿಟ್ಟೆ. ನಂತರ ಆ ಹಿರಿಯ ಜೀವ ಹೇಳಿದ್ದೆನು ಗೊತ್ತೆ 'ನೋಡು ನೀನು ಏನ್ ಬೇಕಾದ್ ಕಲಿ, ಎಷ್ಟ್ ಖರ್ಚಾದ್ರು ಪರವಾಗಿಲ್ಲ. ಅದನ್ ನಾನ್ ಕೊಡ್ತಿನಿ' ಅಂದ್ರು.


ಅಜ್ಜಿಯ ಪ್ರತಿಯೊಂದು ಮಾತುಗಳನ್ನು ಕೇಳುತ್ತಾ ಹೊರಟ ನನಗೆ, ನನಗೇ ಗೊತ್ತಿಲ್ಲದ ಹಾಗೆ ನನ್ನ ಕಣ್ಣುಗಳು ಒದ್ದೆಯಾಗಿ ಕಣ್ಣೀರ ಹನಿಗಳು ಕಪಾಳಕ್ಕೆ ತಾಗಿದ್ದವು. ಅಜ್ಜಿ ನನ್ನ ಜೀವನಕ್ಕೆ ಇಷ್ಟೊಂದು ತಿರುವು ನೀಡ್ತಾರೆ ಅಂತ ನಾನು ಯಾವತ್ತಿಗೂ ನಿರೀಕ್ಷೆ ಮಾಡಿರಲಿಲ್ಲ. ನಿಜಕ್ಕೂ ನಾನು ಈ ಊರಿಗೆ ಬಂದ ಕಾರ್ಯ ಫಲಿಸಿತು ಅಂತ್ ಮನಸ್ಸಿನಲ್ಲಿಯೇ ಅಂದುಕೊಂಡು, ಅಜ್ಜಿಯ ಪ್ರತಿಯೊಂದು ಮಾತುಗಳನ್ನು ಸವಾಲಾಗಿ ಸ್ವೀಕರಿಸಿದೆ.


ನಿಜ ಹೇಳಬೇಕಂದ್ರೆ ನನ್ನ ಅಜ್ಜಿ ಸಾಲಿ ಕಟ್ಟೆಯನ್ನೂ ಹತ್ತಿಲ್ಲ. ಯಾವ ವಿಶ್ವ ವಿದ್ಯಾಲಯದಿಂದ ಯಾವ ಪದವಿಯನ್ನು ಪಡೆದುಕೊಂಡಿಲ್ಲ. ಆದರೆ, ಅವರು ಜೀವನದಲ್ಲಿಯೇ ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸಿದ್ದಾರೆ. ಇದರಿಂದ ಪಡೆದ ಅನುಭವಗಳೇ ಪ್ರಮಾಣಪತ್ರ. ಅಷ್ಟೇ ಅಲ್ಲ, ಕಷ್ಟಕಾಲ, ಬರಗಾಲ ಪರಿಸ್ಥಿತಿಯಲ್ಲಿಯೂ ತಮ್ಮ ಸಂಸಾರದ ಬಂಡಿಯನ್ನು ನೂಕಿರುವ ಕುರಿತು ನನ್ನ ಅಮ್ಮ ನನಗೆ ಹೇಳುತ್ತಿದ್ದನ್ನು ಕೇಳಿ, ನನ್ನ ಈ ಸಮಸ್ಯೆ ಯಾವ ಲೆಕ್ಕವೂ ಅಲ್ಲ ಅಂತ ಅನಿಸ್ತು. ನಿಜಕ್ಕೂ ಆ ಅಜ್ಜಿಯ ಅನುಭವಗಳು ನನ್ನನೊಮ್ಮೆ ಚಿಂತೆನೆಗೆ ಈಡು ಮಾಡಿದವು.


ನನಗೆ ಮುಂದೆ ಏನು ಮಾತಾಡ್ಬೇಕು ಅಂತಾ ಹೊಳೆಯದೆ ಹಾಗೆ ಸುಮ್ಮನೆ ಗೋಣು ಅಲ್ಲಾಡಿಸಿದೆ. ಅದೇ ಒಂದು ಮಾತು ನಾನು ಮತ್ತೆ ಓದನ್ನು ಮುಂದುವರೆಸಲು ಸ್ಫೂರ್ತಿಯಾಯಿತು. ಹಣವನ್ನು ಹಾಗೋ ಹೀಗೋ ಮಾಡಿ ಕೂಡಿಸಿ, ವಿಶ್ವವಿದ್ಯಾಲಯದ ವೃತ್ತಿಪರ ಕೋರ್ಸ್‌ವೊಂದಕ್ಕೆ ಕೊನೆಗೂ ಪ್ರವೇಶಾತಿಯನ್ನು ಪಡೆದೆ. ಇದರಿಂದಲೇ ನನ್ನ ಜೀವನ ರೂಪಿಸಿಕೊಳ್ಳಬೇಕೆಂಬ ನಿರ್ಣಯಕ್ಕೆ ಬಂದೆ. ಆಗ ನನ್ನ ದೃಢ ನಿರ್ಧಾರ ಬದಲಾವಣೆಯಾಗಿ ಓದಿನಲ್ಲಿ ಹೆಚ್ಚು ಆಸಕ್ತಿ ಹಾಗೂ ವಿಶ್ವಾಸ ಮತ್ತಷ್ಟು ಹೆಚ್ಚಿತು.


ಮುಂದೆ ನನ್ನ ಓದು ಆರ್ಥಿಕ ಸಮಸ್ಯೆಗಳ ನಡುವೆಯೇ ಮುಂದುವರೆಯಿತು. ಆದ್ರೆ ಅದಕ್ಕೆ ಹಣದ ನೆರವನ್ನು ಕೊಡುವುದರ ಜೊತೆಗೆ ಮಾನಸಿಕ ಸ್ಥೈರ್ಯವನ್ನು ತುಂಬಿದ್ದ ಅಜ್ಜಿಯ ಮಾತನ್ನು ಕೊನೆಗೂ ನಾನು ಈಡೇರಿಸಿದೆ. ಈಗ ಎರಡು ವರ್ಷಗಳ ವೃತ್ತಿಪರ ಕೋರ್ಸ್‌ನ್ನು ಯಶಸ್ವಿಯಾಗಿ ಪೂರೈಸಿರುವ ನಾನು, ಹೆಸರಾಂತ ಐಟಿ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.


ಓದನ್ನು ಅರ್ಧಕ್ಕೆ ನಿಲ್ಲಿಸಿ, ದುಡಿಯಬೇಕೆಂಬ ನಿರ್ಧಾರ ಕೈಗೊಂಡಿದ್ದಾಗ, ಆ ಹಿರಿಯ ಅನುಭವಿ ಜೀವ ನನ್ನಲ್ಲಿ ಸ್ಫೂರ್ತಿ ತುಂಬಿ ನನ್ನ ಜೀವನಕ್ಕೆ ಒಂದು ಅರ್ಥ ಬರುವಂತೆ ಮಾಡಿದ್ದಾರೆ. ಅವರು ಕೂಡ ಹಲವಾರು ತಮ್ಮ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಅನುಭವಿಸಿ ಬಂದವರು. ಅವರ ಅನುಭವಕ್ಕೆ, ಸ್ಫೂರ್ತಿ ಚಿಲುಮೆಗೆ ನಾನು ಋಣಿಯಾಗಿದ್ದೇನೆ.


ಈಗಲೂ ಕೂಡ ನಾನು ಊರಿಗೆ ಹೋದಾಗಲೊಮ್ಮೆ ಅಜ್ಜಿಯನ್ನು ಕಂಡು ಬರುತ್ತೇನೆ. ಪ್ರತಿಸಲ ಅವರ ಕಣ್ ಜೇನ ಹನಿಯನ್ನು ನೋಡಿದಾಗ ನೂರು ಕಥೆಗಳನ್ನು ಹೇಳುತ್ತಿರುವಂತಿವೆ. ಅವರ ಅನುಭವ, ಅವರ ವಿಚಾರ ಸಾಮರ್ಥ್ಯ, ಬದುಕಿನ ಹೋರಾಟ, ಮೊಮ್ಮಕ್ಕಳ ಬಗ್ಗೆ ಇರುವ ಇನ್ನೂ ವಿಶೇಷ ಕಾಳಜಿಯನ್ನು ನೋಡಿದರೆ, ನಾನು ಜೀವನದಲ್ಲಿ ಇನ್ನೂ ಬಹಳಷ್ಟು ಸಾಧನೆ ಮಾಡಬೇಕೆಂಬ ಆಸೆ ಹುಟ್ಟುತ್ತದೆ.


ಹೋರಾಟದ ಬದುಕು ನಮ್ಮ ಜೀವನದಲ್ಲಿ ಹಲವಾರು ಪಾಠಗಳನ್ನು ಕಲಿಸುತ್ತದೆ. ಆದರೆ, ಇಂತಹ ಬದುಕಿನಲ್ಲಿ ಸಮಸ್ಯೆಗಳು ಎದುರಾದಾಗ, ಅವುಗಳಿಗೆ ಪರಿಹಾರ ಇಲ್ಲವೇನೋ ಎಂಬ ಮನೋವ್ಯಾಧಿಯಂತೆ ಚಿಂತಿಸ ತೊಡಗುತ್ತೇವೆ. ಕೆಲವೊಮ್ಮೆ ಇಂತಹ ಸಮಸ್ಯೆಗಳಿಗೆ ಅನುಭವಗಳೆಂಬ ಔಷಧಿಯು ಪರಿಹಾರವಾಗಿ ಒದಗಬಲ್ಲುದು. ಅದಕ್ಕೆ ಇಂತಹ ಅನುಭವಿಗಳ ಸ್ಫೂರ್ತಿಯೇ ಕಾರಣವಾಗಬುಹುದಲ್ಲವೇ............

Monday, October 22, 2007

ಚೆನ್ನೈನಲ್ಲಿ ಕನ್ನಡಿಗರ ದಸರಾ ಹಬ್ಬದ ಸಂಭ್ರಮ


















ಇತ್ತೀಚೆಗೆ ವೆಬ್‌ದುನಿಯಾ ಕಚೇರಿಯಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಸಂಭ್ರಮಿಸಿದ ಬಗೆಯ ಚಿತ್ರಗಳು..

Sunday, October 21, 2007

ನಾವ್ ನೀವ್ ಬಂಗಾರ್‌ದ್ಹಂಗ್ ಇರೂಣ....


ಬಹುಶಃ ನಾನು ಊರಲ್ಲಿ ಇದ್ದಿದ್ರೆ ವಿಜಯ ದಶಮಿಯನ್ನು ಅಲ್ಲಿಯೇ ಆಚರಣೆ ಮಾಡ್ತಾ ಇದ್ದೆ. ಆದ್ರೆ ಅದಕ್ಕೆ ಕಾಲ ಕೂಡಿ ಬಾರದ್ದರಿಂದ ಚೆನ್ನೈನಲ್ಲಿ ನನ್ನ ಯಾಂತ್ರಿಕ ಜೀವನದಲ್ಲಿಯೇ ಅಲ್ಲಿಯ ಹಬ್ಬದ ಆಚರಣೆ ಬಗೆಯನ್ನು ಜ್ಞಾಪಿಸಿಕೊಂಡು ಈ ಮೂಲಕ ನನ್ನ ಎಲ್ಲ ಮಿತ್ರರಿಗೆ, ಬಂಧು-ಬಾಂಧವರಿಗೆ ಹಾಗೂ ಈ ಬ್ಲಾಗ್ ಓದಿದವರಿಗೂ ಸಹ ವಿಜಯ ದಶಮಿಯ ಶುಭಾಶಯಗಳನ್ನು ಕೋರುತ್ತಿದ್ದೇನೆ.


ಉತ್ತರ ಕರ್ನಾಟಕದಲ್ಲಿ ವಿಜಯ ದಶಮಿ ದಿನದಂದು ಪತ್ರಿ ಹಾಗೂ ಪತ್ರಿಯ ಎಲೆಯನ್ನು ಹಿರಿಯ ಕೊಟ್ಟು ಅವರಿಗೆ ನಮಸ್ಕರಿಸಿ, "ನಾವು ನೀವು ಬಂಗಾರ್‌ದ್ಹಂಗ್ ಇರೂಣ" ಅಂತ ಹೇಳೋದು ಸಾಂಪ್ರದಾಯ. ಅದಕ್ಕೆ ನಾನು ಅಲ್ಲಿಲ್ಲದ್ದರಿಂದ, ಈ ಮೂಲಕ ಎಲ್ಲರಿಗೂ ಇದನ್ನೇ ಹೇಳಲು ಇಚ್ಛಿಸಲು ಬಯಸುವೆ.


'ನಿನ್ನೆಯ ಕಹಿಯನ್ನು ಮರೆಯೋಣ,

ನಾಳೆಯ ಏನಾಗುತ್ತೊ ಎಂಬುವುದನ್ನು ಬಿಡೋಣ

ಇಂದಿನ ಸಂತಸವನ್ನು ಹಂಚಿಕೊಳ್ಳೋಣ'


-ಎಂದು ಹೇಳುತ್ತಾ, ಈ ಬ್ಲಾಗ್ ಓದುಗರಿಗೆ, ಮಿತ್ರರಿಗೆ, ಬಂಧು-ಬಾಂಧವರಿಗೆ ಮತ್ತೊಮ್ಮೆ ವಿಜಯ ದಶಮಿಗಳ ಶುಭಾಶಯ ಕೋರುವೆ.

Wednesday, October 17, 2007

ಬೆಂಚು ಬರಹದ ಬಗ್ಗೆ ಕೊಂಚ ಬರಹ.......


'ಕಂಡಲ್ಲೂ ನೀನೆನೆ... ನಿಂತಲ್ಲೂ ನೀನೆನೆ.. ಎಲ್ಲೆಲ್ಲೂ ನೀನೆ ಕಾಣುವೆ'... ಎಂಬ ಪ್ರೇಮಗೀತೆಯನ್ನು ಸದಾ ಹೃದಯದಲ್ಲಿ ಮಿಡಿಯುವ ಪ್ರೇಮಿಗಳು, ತಮ್ಮ ಪ್ರೀತಿ ನಿಜವಾಗಿಯೂ ಎಷ್ಟು ಪ್ರಭಾವವಾಗಿರುತ್ತೆ ಅಥವಾ ಆಳವಾಗಿರುತ್ತೆ ಎಂಬುವುದನ್ನು ತಾವು ಕೂತ ಬೆಂಚು, ನಿಂತ ನೆಲ, ಓಡಾಡಿದ ಕಲ್ಲುಗಳು ಹೀಗೆ ತಾವೆಲ್ಲಿ ವಿಹರಿಸಿ ಬಂದಿರುತ್ತಾರೋ ಅಲ್ಲೆಲ್ಲ ತಮ್ಮ ಅಮರ ಪ್ರೇಮದ ಅಕ್ಷರಗಳನ್ನು ಮೂಡಿಸುತ್ತಾರೆ (ಇನ್ನೂ ಈ ಪ್ರತೀತಿಯನ್ನು ಮಂದುವರೆಸಿದ್ದಾರೆ).


ತನ್ನ ಹಾಗೂ ತನ್ನ ಪ್ರೇಮಿಯ ಹೆಸರು ಶಾಶ್ವತವಾಗಿರಲಿ ಎಂಬ (ಮೂಢ) ಭಾವನೆಯಿಂದ ಪ್ರಸಿದ್ಧ ಐತಿಹಾಸಿಕ ಸ್ಥಳಗಳ ಗೋಡೆಗಳ ಮೇಲೆ ತಮ್ಮ ಹೆಸರುಗಳನ್ನು ಪ್ರೇಮಕಾವ್ಯದಂತೆ ಮೂಡಿಸಿ ಬಂದಿರುತ್ತಾರೆ. ಅಬ್ಬಾ! ಇದು ಎಂಥಾ ಪ್ರೀತಿ ಎಂದು ಅದನ್ನು ನೋಡಿದವರಿಗೇ ಅರ್ಥವಾಗಬೇಕು (ತಿಳಿದರೆ ಮಾತ್ರ).


'ಜನ್ಮ ಜನ್ಮಕ್ಕೂ ನೀನೆ ನನ್ನ ಸಂಗಾತಿ', 'ನಿನ್ನನ್ನೇ ಪ್ರೀತಿಸುವ ಇಂತಿ ನಿನ್ನ ಪ್ರಿಯಕರ', 'ಹಲವು ದಿನಗಳ ಗೆಳೆಯಾ ಅಥವಾ ಗೆಳತಿ' ಹೀಗೆ ನಾನಾ ವಿಧಗಳಲ್ಲಿ ತಮ್ಮದೆಯಾದ ವಾಕ್ಯಗಳನ್ನು ಪ್ರೇಮದ ಸಂಕೇತದೊಂದಿಗೆ ಸ್ಥಳಗಳಲ್ಲಿ ಮೂಡಿಸಿರುತ್ತಾರೆ. 'ಇವರೇಕೆ ಹೀಗೆ ನನ್ನ ಮೇಲೆ ಮೂಡಿಸುತ್ತಾರೋ' ಎಂದು ಆ ಗೋಡೆಗಳು ತಮ್ಮಲ್ಲಿಯೇ ಗೊಣಕಿಕೊಳ್ಳುತ್ತಿರುತ್ತವೆ.


ಇದರಲಿ ಬಿಡಿ. ಇದು ಪ್ರೇಮಿಗಳ ಕಥೆಯಾಯಿತು. ಟೈಂ ಪಾಸ್ ಮಾಡುವವರ ಕಥೆಯು ಅದೇ ಆಗಿರುತ್ತದೆ. ರೈಲಿನಲ್ಲಿ ಪ್ರಯಾಣಿಸುವಾಗ ಅವರ ಮುಂದಿರುವ ಸೀಟು ಸ್ಪಲ್ಪ ಕಣ್ಣಾಡಿಸಿ ನೋಡಿ (ಸಾಧ್ಯವಾದರೆ, ಕಿಡಿಗಳು ಹಾಗೇ ಬಾತ್ ರೂಮ್ ಕೂಡಾ). ಎನೆಲ್ಲಾ ಗೀಚಿರ್ತಾರೆ. ಇಷ್ಟೇ ಆದ್ರೆ ಓಕೆ ಅನ್ನಬಹುದು. ಆದರೆ, ಅಲ್ಲಿ ಬರೆದಿರುವ ನಿಯಮಗಳನ್ನು 'ತಿದ್ದುಪಡಿ' ಮಾಡಿ ಅದರ ನೈಜ ಅರ್ಥವನ್ನು ಅನರ್ಥ ಬರುವಂತೆ ಮಾಡಿರುತ್ತಾರೆ. ಇದನ್ನು ಬರೆದ ಆ ಮಹಾಪುರುಷ ಎಷ್ಟು ಜಾಣನಿರಬಹುದು ಎಂದು ಅದನ್ನು ಓದಿದವರು ಮನಸ್ಸಿನಲ್ಲಿಯೇ ಮಂದಹಾಸ ಬೀರುವುದನ್ನು ನಾವು ಕಂಡಿದ್ದೇವೆ.


ಹಾಗೆ ಪಾರ್ಕ್‌ಗೆ ಬೆಳಗಿನ ಜಾವ ಜಾಗಿಂಗ್‌ಗೆ ಹೋದಾಗಲೊ ಅಥವಾ ಸಂಜೆ ವಾಕ್ ಹೋದಾಗಲೋ ಕೊಂಚ ಹೊತ್ತು ವಿಶ್ರಾಂತಿ ಪಡೆದುಕೊಳ್ಳಲು ಬೆಂಚುಗಳ ಮೇಲೆ ಕುಳಿತಾಗ ಅಲ್ಲಿಯು ಆ ಮಹಾಪುರುಷರ 'ಅಕ್ಷರ ಕೆತ್ತನೆ' ತಪ್ಪಿರುವುದಿಲ್ಲ. ಒಂದು ಒಳ್ಳೆಯ ವಾಕ್ಯವನ್ನು ಬರೆದಿದ್ದರೆ, ಪರವಾಗಿಲ್ಲ, ಅದರ ಬದಲು ಅವರ ಹೆಸರು ವಿಳಾಸ ಎಲ್ಲ ವಿವರ ನಮೂದಿಸಿ ಬಿಟ್ಟಿರ್ತಾರೆ. ಇನ್ನು ಕೆಲವರು ತಮ್ಮ ಭಾವಚಿತ್ರವನ್ನೆ ಬಿಡಿಸಿರುತ್ತಾರೆ! ಅದು ಅದ್ಭುತ ಕಲೆ.


ಇದು ಬಸ್ಸುಗಳನ್ನು ಬಿಡಲಿಲ್ಲ. ಒಮ್ಮೆ ಬಸ್ಸಿನಲ್ಲಿ ಹೋಗುವಾಗ ಅದರ ಸೀಟಿನ ಹಿಂದೆ ಹೀಗೆ ಬರೆಯಲಾಗಿತ್ತು- 'ಟಿಕೆಟ್ ರಹಿತ ಪ್ರಯಾಣ ಮಾಡಿದಲ್ಲಿ, ಅವರಿಗೆ 500 ರೂಪಾಯಿಗಳ ದಂಡ ವಿಧಿಸಲಾಗುವುದು' ಎಂದಿತ್ತು. ಇದನ್ನು ಯಾರೋ ಒಬ್ಬ, 'ಟಿಕೆಟ್ ಹಿತ ಪ್ರಯಾಣ ರೂಪಾ!' ಎಂದು ಅದರ ಮೂಲರೂಪವನ್ನು ಬದಲಾಯಿಸಿಬಿಟ್ಟಿದ್ದ. ಇನ್ನೊಬ್ಬ 'ಟಿಕೆಟ್ ಹಿತ ಪ್ರಯಾಣ ಮಾಡಿದಲ್ಲಿ, ಅವರಿಗೆ 500 ರೂಪಾಯಿ' ಎಂದಷ್ಟೇ ಬದಲಾಯಿಸಿದ್ದ. ನಿಜಕ್ಕೂ ಇಷ್ಟೊಂದು ಬುದ್ಧಿವಂತರು(!) ಇರ್ತಾರೆಯೇ ಎಂದುಕೊಂಡೆ.


ಕ್ಲಾಸ್ ರೂಮಿನಲ್ಲಿ ಬೆಂಚ್ ಮೇಲೆ ಕೂತಾಗಲು ಕೂಡ ಹಲವಾರು ಬಗೆಯ ವಿಶಿಷ್ಟ ಶೈಲಿಯ ಬರಹಗಳು ಕಾಣ ಸಿಗುತ್ತವೆ (ಕಾಲೇಜು ಜೀವನ ಅನುಭವಿಸಿದ್ದಲ್ಲಿ). ಪ್ರೊಪೆಸ್ಸರ್‌ಗಳ ಪಾಠ ಬೇಜಾರಾದಾಗ ಮುಂದಿರುವುದು ಒಂದೇ ಮಾರ್ಗ. ಅಕ್ಷರಗಳನ್ನು ಬರಿಯೋದು. ಚಿತ್ರ ಬಿಡಿಸೋದು. ಕೆಲವೊಮ್ಮೆ ಚಿತ್ರಗಾರರಿದ್ದರೆ, ಅದೇ ಪ್ರೊಫೆಸ್ಸರ್‌ಗಳು ಬೆಂಚ್ ಮೇಲೆ ಚಿತ್ರವಾಗಿ ಮೂಡಿಬಿಡುತ್ತಾರೆ! (ಆದ್ರೆ ನಾನೇನು ಅಂತಹ ಕಲಾವಿದನಲ್ಲ).


ಇದೆಲ್ಲಕ್ಕಿಂತಲೂ ಹಾಸ್ಟೇಲ್ ಗೋಡೆಗಳು ಇವಕ್ಕೆ ಅತಿಸೂಕ್ತ ಎಂದರೆ, ತಪ್ಪಾಗಲಾರದು. ಎಂತೆಂಥ ಬರಹಗಳು, ಒಂದೊಂದು ಅದ್ಭುತ ಮತ್ತು ಅಷ್ಟೇ ಹಾಸ್ಯಮಯವಾಗಿರುತ್ತವೆ. 'ನನ್ನನ್ನು ನೀವು ಭೇಟಿಯಾಗಬೇಕಿದ್ದರೆ, ಈ ನಂಬರ್‌ನ್ನು ಸಂಪರ್ಕಿಸಿ. ಎಂದು ಬರೆದು ಅವರ ವಿಳಾಸ ಕೂಡ ಬರೆದಿರ್ತಾರೆ' (ಇವರನ್ನು ನಾವ್ಯಾಕೆ ಸಂಪರ್ಕಿಸಬೇಕು. ಹೋಗ್ಲಿ ಯಾಕೆ ಫೋನ್ ಮಾಡಬೇಕು). 'ಇವರು ನನ್ನ ರೂಮ್ ಪಾರ್ಟ್ನರ್‌ಗಳು- ಮುಂದೆ ಅವರ ಹೆಸರು' (ಅವರನ್ನು ತೆಗೆದುಕೊಂಡು ನಾನೇನು ಮಾಡಲಿ).


ಹೀಗೆ ಬೆಂಚು ಬರಹದ ಬಗ್ಗೆ ಹೇಳುತ್ತಾ ಹೋದರೆ, ಅದು ನಿರಂತರ. ರಾಜ ಮಹಾರಾಜರು ತಮ್ಮ ಹೆಸರನ್ನು ಬರೆಸಲು ಈಗಿನಂತೆ ಕಂಪ್ಯೂಟರ್‌ಗಳು, ವೆಬ್‌ಸೈಟ್‌ಗಳು ಇಲ್ಲದ್ದರಿಂದ ಕಲ್ಲಿನ ಮೇಲೆ ಚಿತ್ರಕಾರರ ಮೂಲಕ ತಮ್ಮ ಹೆಸರನ್ನು ಬರೆಸುತ್ತಿದ್ದರು ಎಂಬುದನ್ನು ನಾವು ಇತಿಹಾಸದಿಂದ ತಿಳಿದುಕೊಂಡಿದ್ದೇವೆ. ಅವರಂತೆಯೇ ನಮ್ಮ ಹೆಸರು ಕೆತ್ತನೆಯಲ್ಲಿ ಬಾರದಿದ್ದರೂ ಪರವಾಗಿಲ್ಲ. At least ಈ ಬರಹದ ಮೂಲಕವಾದರೂ, ಇಲ್ಲಿ ಒಡಮೂಡಲಿ ಎಂಬ ಭಾವನೆ ಈಗಿನ ಜನರದ್ದು. ಹೀಗಾಗಿ ತಾವು ಎಲ್ಲಿಗಾದರೂ ಭೇಟಿ ನೀಡಿದಾಗ ಅಥವಾ ಎಲ್ಲಿಯಾದರೂ ಕೂತಾಗ (ಖಾಲಿ) ಇಂತಹ ಕಾರ್ಯಕ್ಕೆ ಮುಂದಾಗುವುದು ಸಹಜ.

Tuesday, October 9, 2007

ಹಲವು ಸೋಲುಗಳ ಮರೆಸುವ ಒಂದು ಗೆಲುವು.......

ಭಾರತ ಕ್ರಿಕೆಟ್ ತಂಡ ಯಾವಾಗ ಏನಾಗುತ್ತೆ ಎಂಬುದು ಗೊತ್ತಾಗುವುದಿಲ್ಲ. ಮೇಲಿಂದ ಮೇಲೆ ಸೋಲು ಕಂಡ ನಂತರ ಒಂದುಸಲ ಜಯ ತಂದುಕೊಂಡರೆ, ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಮನ ತಣಿಸುವ ಶಕ್ತಿ ಅದಕ್ಕಿದೆ ಎಂದರೆ ಅಚ್ಚರಿಪಡಬೇಕಿಲ್ಲ. ಆದರೂ, ಇದು ಸತ್ಯ.

ಕೆರಿಬಿಯನ್‌ನಲ್ಲಿ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ "ನಾವು ಗೆದ್ದೆ ಗೆಲ್ಲುತ್ತೇವೆ" ಎಂಬ ಅತಿಯಾದ ಆತ್ಮವಿಶ್ವಾಸದೊಂದಿಗೆ ಭಾರತ ಕ್ರಿಕೆಟ್ ಕಲಿಗಳು ತೆರಳಿದರು. ಆದರೆ ಆಗಿದ್ದೇನು? ಪಕ್ಕದ ಬಾಂಗ್ಲಾದೇಶಕ್ಕೆ ಮಣಿದಿದ್ದು. ಇದು 'ಹುಲಿಯನ್ನು ಹೊಡೆಯಲು ಹೋದ ಶೂರ, ಹಾದಿಯಲ್ಲಿದ್ದ ನಾಯಿಯನ್ನು ನೋಡಿ ಅಂಜಿದನಂತೆ' ಎಂಬಂತಾಗುತ್ತದೆ. ಇದು ಪರಿಹಾಸ್ಯವಲ್ಲ. ಆದ ನೈಜ ಘಟನೆಯ ಮುಂದಿರುವ ಕನ್ನಡಿ. ಅದರಲ್ಲಿ ಸತ್ಯವಷ್ಟೇ ಕಾಣಬೇಕು.

ಇಂತಹ ಸೋಲನ್ನು ಕಂಡ ಭಾರತ ದುರ್ಬಲ ಬರ್ಮುಡಾ ತಂಡವನ್ನು ಮಣ್ಣು ಮುಕ್ಕಿಸಿ, ಟೂರ್ನಿಯ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಆದರೆ, ಕೊನೆಯ ಶ್ರೀಲಂಕಾ ಪಂದ್ಯದಲ್ಲಿ ಸೋಲನುಭವಿಸಿ, ಸ್ವದೇಶಕ್ಕೆ ಮರಳಿದ ಭಾರತ ತಂಡಕ್ಕೆ ಸಿಕ್ಕಿದ್ದು, ಅಗೌರವ, ಟೀಕೆ!

ಬಿಸಿಸಿಐ ಕೂಡ ಭಾರತದ ಕ್ರಿಕೆಟ್ 'ಹುಲಿ'ಗಳಿಗೆ ಮೂಗುದಾರ ಹಾಕಲು ಹೊರಟರು. ಇದನ್ನು ಸಹಿಸಿಕೊಂಡ ಭಾರತ ತಂಡದ ಆಟಗಾರರು ಮುಂದಿನ ಬಾಂಗ್ಲಾದೇಶ ಸರಣಿ ಹಾಗೂ ದ.ಆಫ್ರಿಕಾ ಸರಣಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ವಿಶ್ವಕಪ್ ಸೋಲನ್ನು ಕೊಂಚ ಮರೆಯಾಗಿರಿಸಿದರು.

ಇದಾದ ನಂತರ ಇಂಗ್ಲೆಂಡ್‌ ಸರಣಿಯಂತೂ ಭಾರತೀಯ ಕ್ರಿಕೆಟ್ ತಂಡದ ಪಾಲಾಗಿ ವರವಾಗಿ ಒದಗಿತು. ಇದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಮತ್ತೆ ಹೊಸ ಚಲನೆಯನ್ನುಂಟು ಮಾಡಿತು. ಇದು ಹೋಗಲಿ ಬಿಡಿ. ಹಳೆಯ ಮಾತು.

ಹಿರಿಯರಿಲ್ಲದ ಯುವಪಡೆಯು ದ.ಆಫ್ರಿಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ, ದ.ಆಫ್ರಿಕಾ ತಂಡಗಳನ್ನೇ ಮಣಿಸಿ ಪ್ರಶಸ್ತಿಯನ್ನು ತಾಯ್ನೆಲಕ್ಕೆ ಹೊತ್ತು ತಂದರು. ಆಗ ಭಾರತದಲ್ಲಿ ಉಂಟಾದ ಸಂತಸ, ಸಂಭ್ರಮ ಅಷ್ಟಿಷ್ಟಲ್ಲ. ಅವರ ಸಂತಸಕ್ಕೆ ಅಪಾರವೇ ಇಲ್ಲದಂತಾಯಿತು. ಈ ವಿಶ್ವಕಪ್ ಭಾರತೀಯ ಕ್ರಿಕೆಟ್ ರಂಗಕ್ಕೆ ಮತ್ತೊಂದು ಶಿಖರವನ್ನು ನೀಡಿತೆಂದರೆ, ಅತಿಶಯೋಕ್ತಿಯೇನಲ್ಲ.

ಈಗ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಆಗಮಿಸಿದೆ. ಇದರಲ್ಲಿ ಈಗಾಗಲೇ ಭಾರತ ತಂಡವು ಆರಂಭದಲ್ಲಿ ಪರಾಭವಗೊಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಕಹಿ ಅನುಭವ ಪಡೆದ ದೋನಿ ಪಡೆ, ಚಂಡೀಗಢದಲ್ಲಿ ನಡೆದ ಮೊದಲ ಗೆಲುವು ಕಳೆದೆರಡು ಸೋಲುಗಳ ಕಹಿಯನ್ನು ಮರೆಸಿದೆ. ಸೋಲು ಗೆಲುವಿನ ಸೋಪಾನ ಎಂಬ ಮಂತ್ರವನ್ನು ಜಪಿಸುತ್ತಿರುವ ಭಾರತ ತಂಡ ಮುಂದೇನಾಗುತ್ತೆ.....

Sunday, September 23, 2007

ಅಕ್ಟೋಬರ್ 6, 2007 ರಂದು.........

ಪಾಕಿಸ್ತಾನ. ಇತ್ತೀಚಿನ ದಿನಮಾನಗಳಲ್ಲಿ ಪ್ರತಿನಿತ್ಯ ಒಂದಿಲ್ಲಾ ಒಂದು ದಾಳಿಗೆ ತುತ್ತಾಗುತ್ತಿದೆ. ರಾಜಕೀಯವಾಗಿ, ಸಾಮಾಜಿಕವಾಗಿ ಇದೆಲ್ಲಕ್ಕಿಂತ ಮಿಗಿಲಾಗಿ ಧಾರ್ಮಿಕ ತೀವ್ರವಾದವಂತೂ ದೇಶದ ನೆಮ್ಮದಿಯನ್ನೇ ಹಾಳು ಮಾಡಿದೆ. ಇದರಿಂದ ಅಲ್ಲಿನ ಸಾಮಾಜಿಕ ಜನಜೀವನ ಎಷ್ಟರ ಮಟ್ಟಿಗೆ ಕ್ಷಿಣಿಸಿರಬೇಕು ಎಂಬುವುದನ್ನು ನಾವು ಈ ಮೂಲಕವೇ ಊಹಿಸಿಕೊಳ್ಳಬಹುದು.ಅಕ್ಟೋಬರ್ 6, 2007 ಈ ದಿನ ಪಾಕಿಸ್ತಾನದಲ್ಲಿ ಭಾರೀ ಕುತೂಹಲವನ್ನೆ ಮೂಡಿಸಿದೆ. ಅಂದು ಮುಸ್ಲಿಂ ನಾಡಿನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿವೆ. ಇದಕ್ಕಾಗಲೇ ಅಲ್ಲಿನ ಚುನಾವಣೆ ಆಯೋಗವು ತನ್ನ ಅಧಿಸೂಚನೆಯನ್ನು ಹೊರಡಿಸಿದ್ದೂಯಾಗಿದೆ.

ಎಲ್ಲ ರಾಷ್ಟ್ರಗಳಲ್ಲಿ ಚುನಾವಣೆಗಳು ನಡೆಯುವುದು ಸಾಮಾನ್ಯ ಹಾಗೂ ಸಹಜವಾದ ವಿಷಯ. ಆದರೆ, ಇಲ್ಲಿಯ ಚುನಾವಣೆ ನಡೆಯುವುದಕ್ಕಿಂತ ಪೂರ್ವದಲ್ಲಿ ನಡೆಯುತ್ತಿರುವ ವಾದ-ವಿವಾದ, ಏಟಿಗೆ-ಏದುರೇಟು, ಮಾತಿನ ಚಕಮಕಿ, ರಾಜಕೀಯ ವೈಷಮ್ಯ, ಅಧಿಕಾರದ ದಾಹ, ಏಕಸ್ವಾಮತ್ವ, ನಿರಂಕುಶ ಪ್ರಭುತ್ವ, ಸರ್ವಾಧಿಕಾರ ಧೋರಣೆ ಹೀಗೆ ಹಲವಾರು ಅಂಶಗಳು ಇಲ್ಲಿ ಗಿರಕಿ ಹೊಡೆಯುತ್ತಿರುವುದು ಆ ನಾಡಿನ ಜನತೆಯ ನೆಮ್ಮದಿಯನ್ನು ಕಸಿದುಕೊಂಡಿವೆ.ಕಳೆದ ಕೆಲವು ದಿನಗಳ ಹಿಂದೆ ಪಾಕಿಸ್ತಾನದಲ್ಲಿ ತಲೆದೂರಿದ್ದ ರಾಜಕೀಯ ಅಸ್ಥಿರತೆಯು, ತುರ್ತು ಪರಿಸ್ಥಿತಿಯನ್ನು ಹೇರುವ ಮಟ್ಟಕ್ಕೆ ಹೋಗಿತ್ತು. ಇಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತವಾದ ಚುನಾವಣೆಗಳು ನಡೆಯುತ್ತವೆ ಎಂಬ ಭರವಸೆ ಇಲ್ಲದ ಕೆಲವು ರಾಜಕೀಯ ನಾಯಕರು ಇಂತಹ ಕಾರ್ಯಕ್ಕೆ ಮುಂದಾಗಿದ್ದರು. ಆದರೆ, ಇದಕ್ಕೆ ತಮ್ಮ ಸರಕಾರ ಆಸ್ಪದ ನೀಡುವುದಿಲ್ಲ. ಇಲ್ಲಿ ನ್ಯಾಯಬದ್ಧವಾದ ಚುನಾವಣೆಗಳನ್ನು ನಡೆಸುತ್ತೇವೆ ಎಂದು ಪ್ರಧಾನಮಂತ್ರಿ ಶೌಖತ್ ಅಜಿಜ್ ಅವರು ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿದರು.

ಮುಷರ್ರಫ್ V/s ಷರೀಷ್
ಪಾಕಿಸ್ತಾನ ಅಧ್ಯಕ್ಷ ಜನರಲ್ ಪರ್ವೇಜ್ ಮುಷರ್ರಫ್ ಹಾಗೂ ದೇಶಭ್ರಷ್ಟ ಆರೋಪದ ಮೇಲೆ ಕಳೆದ ಏಳು ವರ್ಷಗಳ ಹಿಂದೆ ಗಡೀಪಾರಾಗಿರುವ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ನಡುವೆ ಶೀತನ ಸಮರವಾಗುತ್ತಿರುವುದು ಗೋಚರವಾಗುತ್ತಿದೆ. ಮುಂಬರಲಿರುವ ಅಕ್ಟೋಬರ್ 6 ರ ಚುನಾವಣೆಯಲ್ಲಿ ಗಡೀಪಾರಾಗಿರುವ ಷರೀಫ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂಬುದು ಮುಷರ್ರಫ್ ಛಲ ಸಾಧಿಸುತ್ತಿದ್ದಾರೆ. ಆದರೆ, ಇದರಲ್ಲಿ ಸ್ಪರ್ಧಿಸಿಯೇ ತೀರುತ್ತೇನೆ ಎಂಬುದು ಷರೀಫ್ ಅವರ ಮರು ಉತ್ತರ.

ಆದರೆ, ಗಡಿಪಾರಾಗಿ ಶಿಕ್ಷೆ ಎದುರಿಸುತ್ತಿರುವ ಮಾಜಿ ಪ್ರಧಾನಿ ನವಾಜ್ ಶರೀಫ್ ಹಾಗೂ ಅವರ ಸಹೋದರ ಸ್ವದೇಶಕ್ಕೆ ಮರಳಲು ಅವಕಾಶ ಕಲ್ಪಿಸುವಂತೆ ಸಲ್ಲಿಸಿದ್ದ ಮನವಿಯನ್ನು ಪರಿಶೀಲಿಸಿದ ಸರ್ವೋಚ್ಛ ನ್ಯಾಯಾಲಯ ಅವರಿಬ್ಬರಿಗೂ ಇಲ್ಲಿ ನೆಲೆಸಲು ಅವಕಾಶವಿದೆ ಎಂದು ನ್ಯಾಯಾಲಯವು ತಿಳಿಸಿತ್ತು. ಇದನ್ನೇ ಪ್ರಮುಖ ಆಧಾರವಾಗಿಟ್ಟುಕೊಂಡು ನವಾಜ್ ಷರೀಫ್ ಅವರು ಪಾಕಿಸ್ತಾನಕ್ಕೆ ಮರಳಲು ಸಿದ್ಧರಾದರು. ಕೊನೆಗೂ ಅವರು ಸೆಪ್ಟೆಂಬರ್ 8 ರಂದು ಪಾಕಿಸ್ತಾನಕ್ಕೆ ಬರುವ ಇಂಗಿತವನ್ನು ವ್ಯಕ್ತಪಡಿಸಿದರು.

ಆದರೆ, ತಾನೊಂದು ಬಗೆದರೆ, ದೈವವೊಂದು ಬಗೆದಂತೆ ಎಂಬ ನಾಣ್ಣುಡಿಯಂತೆ, ಸೆಪ್ಟೆಂಬರ್ 10 ರಂದು ಪಾಕಿಸ್ತಾನಕ್ಕೆ ಬರಲು ಪಿಎಂಎಲ್-ಎನ್ ನಾಯಕ ನವಾಜ್ ಷರೀಫ್ ಸಕಲ ಸಿದ್ಧತೆಗಳನ್ನು ಮಾಡಿಕೊಂಡರು. ಆದರೆ, ಅವರೊಟ್ಟಿಗೆ ಅವರ ಸಹೋದರ ಶಹ್‌ಬಾಜ್ ಷರೀಫ್, ಇತರ ಪತ್ರಕರ್ತರು, ವಕೀಲರು ಕೂಡ ಆಗಮಿಸಲು ಒಂದು ತಂಡವೇ ರೆಡಿಯಾಯಿತು. ಇನ್ನೇನು ದಿನಗಳು ಉರುಳುತ್ತಾ ಹೋದ ಹಾಗೆ ಪಾಕಿಸ್ತಾನದಲ್ಲಿ ಆತಂಕಗಳು ಮರೆಮಾಡಲು ಶುರುವಾಯಿತು.1999 ರಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ನವಾಜ್ ಷರೀಫ್ ಹಾಗೂ ಅವರ ಸಹೋದರರಿಬ್ಬರನ್ನೂ ಜನರಲ್ ಪರ್ವೇಜ್ ಮುಷರ್ರಫ್ ಅವರು ಹತ್ತು ವರ್ಷಗಳ ಕಾಲ ಗಡೀಪಾರು ಮಾಡಿದ್ದರು. ಆದರೆ, ಅವರು ದೇಶಬಿಟ್ಟು ಹೊರಡುವ ಪೂರ್ವದಲ್ಲಿ ಸ್ವದೇಶಕ್ಕೆ ಹತ್ತು ವರ್ಷಗಳ ಕಾಲ ಹಿಂದಿರುಗುವುದಿಲ್ಲ ಎಂಬ ಒಡಂಬಡಿಕೆಗೆ ಸಹಿ ಹಾಕಿದ್ದರು. ಹೀಗಾಗಿ ಅವರು ಸ್ವದೇಶಕ್ಕೆ ಮರಳಲು ನಾವು ಬಿಡುವುದಿಲ್ಲ ಎಂಬುವುದ ಪಾಕ್ ಅಧ್ಯಕ್ಷ ಮುಷರ್ರಫ್ ಅವರ ವಾದ. ಇದಕ್ಕೆ ಸೌದಿ ಅರೇಬಿಯಾ ಹಾಗೂ ದುಬೈಗಳಿಂದಲೂ ಜನರಲ್ ಅವರಿಗೆ ಬೆಂಬಲವಿತ್ತು ಎಂಬುವುದನ್ನು ಬೇರೆಯಾಗಿ ಹೇಳಬೇಕಿಲ್ಲ.

ಇಡೀ ಪ್ರಪಂಚವು ಸೆಪ್ಟೆಂಬರ್ 10 ರಂದು ಮುಸ್ಲಿಂ ರಾಷ್ಟ್ರದತ್ತ ಗಮನ ಹರಿಸಿತು. ಅಂದು ಬೆಳಗ್ಗೆ 9.15 ಕ್ಕೆ ನವಾಜ್ ಷರೀಫ್ ಅವರು ತಮ್ಮ ಕುಟುಂಬ, ಮಿತ್ರರು, ಪಕ್ಷದ ನಾಯಕರುಗಳೊಂದಿಗೆ ಇಸ್ಲಾಮಾಬಾದ್‌ನ ಅಂತಾರಾಷ್ಟ್ರೀಯ ವಿಮಾನ ಕೇಂದ್ರಕ್ಕೆ ಆಗಮಿಸಿದರು. ಅವರನ್ನು ಸ್ವೀಕರಿಸಲು ಹಲವಾರು ಮಂದಿ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ನಿಟ್ಟುಸಿರು ಬಿಟ್ಟು ಕಾಯುತ್ತಿದ್ದರು. ಆದರೆ, ಆದದ್ದೇನು ಗೊತ್ತೆ. ಮತ್ತೆ ಅವರನ್ನು ಬಂಧಿಸಿ ಸೌದಿ ಅರೇಬಿಯಾಗೆ ಹಸ್ತಾಂತರ.ಕಳೆದ ಏಳು ವರ್ಷಗಳಿಂದ ತಾಯ್ನಾಡಿನಿಂದ ದೂರ ಉಳಿದಿದ್ದ ಷರೀಫ್ ಮತ್ತೊಮ್ಮೆ ಸೌದಿ ಅರೇಬಿಯಾಗೆ ಹಸ್ತಾಂತರಿಸಲಾಯಿತು. ಇದರಿಂದ ಬೇಸತ್ತ ಷರೀಫ್ ಅವರು, ನನ್ನ ಬಂಧನಕ್ಕೆ ಮುಷರ್ರಫ್ ಅವರ ಅಹಂಕಾರವೇ ಕಾರಣೆ ಎಂದು ಕಿಡಿ ಕಾರಿದರು. ಪಾಕಿಸ್ತಾನದಲ್ಲಿಯೂ ಕೂಡ ಈ ಕುರಿತು ಹಲವಾರು ಪ್ರತಿಭಟನೆಗಳನ್ನು ಅವರ ಬೆಂಬಲಿಗರೇ ಕೈಗೊಂಡರು. ಆದರೆ ಅದರಿಂದ ಏನು ಪ್ರಯೋಜನವಾಗಲಿಲ್ಲ.

ಭುಟ್ಟೊರೊಂದಿಗೆ ಗುಟ್ಟು ಮಾತುಕತೆ
ಮುಷರ್ರಫ್ ಅವರು ತಾವು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಹೊರಟಿದ್ದಾರೆ ಎಂಬುವುದಕ್ಕೆ ಕೆಲವು ಅಂಶಗಳು ನಮ್ಮ ಕಣ್ಣಿಗೆ ಕಾಣಸಿಗುತ್ತವೆ. ಮತ್ತೊಮ್ಮೆ ಅಧ್ಯಕ್ಷರಾಗಲೇಬೇಕು ಎಂಬ ಕಾರಣದಿಂದ ಅವರು ಮಾಜಿ ಪ್ರಧಾನಮಂತ್ರಿ ಹಾಗೂ ಗಡೀಪಾರಾಗಿರುವ ಪಿಪಿಪಿಯ ಅಧ್ಯಕ್ಷೆ ಬೆನಜಿರ್ ಭುಟ್ಟೊ ಅವರೊಂದಿಗೆ ಇಂಗ್ಲೆಂಡ್‌ನಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ ಅಂಬೋಣ.

ಹಾಗಾದರೆ, ಈ ಮಾತುಕತೆಯಲ್ಲಿ ಆಗಿದ್ದೇನು ಎಂಬುವುದಕ್ಕೆ ಪುಷ್ಠಿ ನೀಡುವುದಕ್ಕೆ ಪ್ರಬಲ ಸಾಕ್ಷಿಗಳು ಮಾಧ್ಯಮಗಳಿಗೆ ಬಹುಶಃ ನಮಗೆ ದೊರಕದೆ ಇರಬಹುದು.ಆದರೂ ಮಾಧ್ಯಮಗಳು ಕೆಲವು ಮಾಹಿತಿಗಳನ್ನು ಹೆಕ್ಕಿ ತೆಗೆದಿದ್ದು, ತಮ್ಮನ್ನು ಸೇನಾಸಮವಸ್ತ್ರದಲ್ಲಿಯೇ ಮರು ಆಯ್ಕೆ ಮಾಡಬೇಕು. ಒಂದು ವೇಳೆ ತಮಗೆ ರಾಷ್ಟ್ರಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಮರು ನೇಮಕ ಮಾಡುವಲ್ಲಿ ನೆರವು ನೀಡಿದ್ದಲ್ಲಿ ಭುಟ್ಟೊ ಮೇಲಿರುವ ಗಡೀಪಾರನ್ನು ಹಿಂದಕ್ಕೆ ಪಡೆದುಕೊಳ್ಳುವುದಾಗಿ ಮುಷರ್ರಫ್ ಮಾತು ನೀಡಿದ್ದರಂತೆ ಎಂಬುದು ವದಂತಿ.

ಆದರೆ, ಇದು ನಿಜವೇ ಆಗಿರಬಹುದಲ್ಲ ಎಂಬುವುದನ್ನು ಜಾಣ ಓದುಗರಿಗೆ ಬೇರೆ ಬಿಡಿಸಿ ಹೇಳಬೇಕಿಲ್ಲ.ಅಧಿಕಾರ ಹಂಚಿಕೆ ಕುರಿತು ಭುಟ್ಟೊ ಹಾಗೂ ಮುಷರ್ರಫ್ ಅವರ ನಡುವೆ ಮಾತುಕತೆಗಳು ನಡೆದಿದ್ದು, ಇದು ಮುಂದಿನ ಸಾರ್ವತ್ರಿಕ ಚುನಾವಣೆಯ ಮೇಲೆ ಅವಲಂಬಿತವಾಗಿದೆ ಎಂದು ಪ್ರಧಾನಮಂತ್ರಿ ಶೌಖತ್ ಅಜಿಜ್ ವಿವರಣೆ ನೀಡಿದ್ದರು. ಆದರೆ ಯಾರು ಏನೇ ಹೇಳಿಕೆಗಳನ್ನು ನೀಡಿದರೂ, ಚುನಾವಣೆಯಲ್ಲಿ ಏನಾಗುತ್ತೆ ಎನ್ನುವುದನ್ನು ನಿರ್ಧರಿಸುವುದು ಅಲ್ಲಿನ ಪ್ರಜೆಗಳೇ.

ಮುಷ್‌ಗೆ ಅಡ್ಡಿಯಾಗಿರುವ ಸೇನಾಸಮವಸ್ತ್ರ?

ಅಕ್ಟೋಬರ್ ಆರು ಇದು ಪಾಕಿಸ್ತಾನದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುವ ಪರ್ವ ಕಾಲ ಎಂದು ಹೇಳಬೇಕು. ಆದರೆ, ಮುಷರ್ರಫ್ ಅವರು ತಾವು ಧರಿಸಿರುವ ಸೇನಾ ಸಮವಸ್ತ್ರದ ಕಾಲಾವಧಿಯು ನವೆಂಬರ್ 15 ರಂದು ಮುಕ್ತಾಯಗೊಳ್ಳುತ್ತಿದೆ. ಆದರೆ ವಿಶಿಷ್ಟವೆಂದರೆ, ಅಕ್ಟೋಬರ್ 6 ರ ಚುನಾವಣೆಯಲ್ಲಿ ಅವರು ಮರು ಆಯ್ಕೆ ಬಯಸಿ ಮತ್ತೊಮ್ಮೆ ಸಾರ್ವಭೌಮ ಅಧಿಕಾರ ಪಡೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದು ಸಾಧ್ಯವೆ ಎಂಬುದು ಈಗ ಪಾಕಿಸ್ತಾನದಲ್ಲಿ ಬಹುಚರ್ಚಿತವಾಗುತ್ತಿರುವ ವಿಷಯವಾಗಿದೆ.

ಮುಷರ್ರಫ್ ಅವರು ಈಗಾಗಲೇ ಸೇನಾಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವುದು ಸಾರ್ವತ್ರಿಕ ಸತ್ಯವಾದ ಮಾತು. ಅದರೊಟ್ಟಿಗೆ ದೇಶದ ಅಧ್ಯಕ್ಷ ಸ್ಥಾನದಲ್ಲಿ ಇನ್ನೂ ಇದ್ದಾರೆ. ಆದರೆ, ಸಮಸ್ಯೆ ಎದುರಾಗಿರುವುದೇ ಇಲ್ಲಿ. ಸೇನಾ ಸಮವಸ್ತ್ರದಲ್ಲಿ ದೇಶದ ಅಧ್ಯಕ್ಷರಾಗಿ ಮರು ಆಯ್ಕೆಯಾಗುವ ಇಚ್ಛಿಸಿದಲ್ಲಿ ತಾವು ಅಸೆಂಬ್ಲಿಯಿಂದ ಹಾಗೂ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ವಿರೋಧ ಪಕ್ಷಗಳು ಕಟ್ಟುನಿಟ್ಟಾಗಿ ಹೇಳಿವೆ.ತಾವು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸೇನಾ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬುವುದು ಅಧ್ಯಕ್ಷರ ವಾದ.

ಇದಕ್ಕೆ ನಾವು ಸಿದ್ಧರಿಲ್ಲ ನೀವು ಸೇನಾ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿಯೇ ಮರು ಆಯ್ಕೆ ಬಯಸಿ ಚುನಾವಣೆಯನ್ನು ಎದುರಿಸಿ ಎಂಬುದು ವಿರೋಧ ಪಕ್ಷಗಳು ಮೇಲಿಂದ ಮೇಲೆ ಅಧ್ಯಕ್ಷರಿಗೆ ಚುರುಕು ಮುಟ್ಟಿಸುತ್ತಿವೆ. ಈ ರೀತಿಯ ಹಲವಾರು ತದ್ವಿರುದ್ಧ ಮಾತಿನ ಚಕಮಕಿಗಳು ಈಗಲೇ ನಡೆಯುತ್ತಿವೆ. ಆದರೆ, ಅಕ್ಟೋಬರ್ 6 ರಂದು ಏನಾಗುತ್ತೆ? ಚುನಾವಣೆಯಲ್ಲಿ ಮುಷರ್ರಫ್ ಸ್ಪರ್ಧಿಸುವರೆ? ಸ್ಪರ್ಧಿಸಿದಲ್ಲಿ ಗೆಲುವು ಸಾಧಿಸುವರೆ? ಅಥವಾ ಅದಕ್ಕೂ ಮುಂಚಿತವಾಗಿ ವಿರೋಧ ಪಕ್ಷಗಳ ಹೇಳಿಕೆಗೆ ತಲೆಬಾಗುವರೆ? ಸೇನಾ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವರೆ? ಈ ರೀತಿಯ ಹಲವಾರು ಉತ್ತರಗಳಿಗೆ ಅಕ್ಟೋಬರ್ 6........