Friday, November 2, 2007

ಕಲೆಯಋಷಿ ಶಾರೂಖ್ ‌ಖಾನ್‌ಗೆ ಇಂದು 42ರ ಸಂಭ್ರಮ


ಕಲೆಯನ್ನು ಬದುಕಿನ ಒಂದು ಅಂಗವಾಗಿ ಮಾಡಿಕೊಂಡು ವೇಷ ಹಾಕುವವರನ್ನು ನೋಡಿದ್ದೇವೆ. ಆದರೆ, ಕಲೆಯನ್ನೇ
ಬದುಕನ್ನಾಗಿ ಮಾಡಿಕೊಂಡು ಪಕ್ಕಾ ವೃತ್ತಿಪರರಾಗಿ ಅದನ್ನೇ ಜೀವಾಳವಾಗಿರಿಸಿಕೊಂಡವರ ಬಣ್ಣದ ಕಥೆಯು ನಿಜಕ್ಕೂ
ವಿಸ್ಮಯವಾಗಿರುತ್ತೆ. ಅಂತಹ ಕಲೆಯಲ್ಲಿ ಚಿತ್ರರಂಗವು ಒಂದು.


ಮುಖಕ್ಕೆ ಬಣ್ಣ ಬಳಿದುಕೊಂಡು, ಕತ್ತಲೆ ಕೋಣೆಯೊಂದರಲ್ಲಿ ಮೂರು ಗಂಟೆಗಳ ಕಾಲ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ
ಕಲೆಗಾರಿಕೆ ನಿಜಕ್ಕೂ ಅದ್ಭುತ. ಇಂತಹ ಪ್ರತಿಭೆಯನ್ನು ನಾವು ಎಲ್ಲರಲ್ಲೂ ಕಾಣುವುದು ಅಸಾಧ್ಯವಾದದ ಮಾತು. ಆದರೆ,
ಅದನ್ನು ಕೆಲವರು ಮಾತ್ರ ಪಡೆದುಕೊಂಡಿರುತ್ತಾರೆ. ಅಂತಹ ಸಾಲಿಗೆ ಬಾಲಿವುಡ್ ನಟ ಶಾರೂಖ್ ಖಾನ್ ಕೂಡ ಸೇರಿದ್ದಾರೆ.


ತಮ್ಮ ಅದ್ಭುತ ಕಲೆಯ ಮೂಲಕ ದೇಶ ವಿದೇಶಗಳಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಶಾರೂಖ್ ಖಾನ್
ಇಂದು (02-11-2007) 42 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಕತ್ತಲೆಕೋಣೆಯಲ್ಲಿ ಕಲೆಯನ್ನು ತೋರ್ಪಡಿಸಿರುವ ಶಾರೂಖ್
ತಮ್ಮ ನೈಜ ಸ್ವರೂಪದ ಬೆಳಕನ್ನು ಹೊರಚೆಲ್ಲಿದ್ದಾರೆ.


ಶಾರೂಖ್ ಜೀವನ:ಸ್ವತಂತ್ರ ಹೋರಾಟಗಾರ ತಾಜ್ ಮೊಹಮ್ಮದ್ ಹಾಗೂ ಫಾತಿಮಾ ಖಾನ್ ಅವರ ಪುತ್ರನಾಗಿ ಶಾರೂಖ್ ಖಾನ್ 1965, ನವೆಂಬರ್ 2 ರಂದು ಜನ್ಮ ತಳೆದರು. ನಂತರ ತಮ್ಮ ವಿದ್ಯಾಭ್ಯಾಸವನ್ನು ಸೆಂಟ್ ಕೊಲಂಬಿಯಾ ಶಾಲೆಯಲ್ಲಿ
ಪೂರ್ಣಗೊಳಿಸಿದರು. ಶಾರೂಖ್ ಚಿತ್ರರಂಗದಲ್ಲಿ ಬರುತ್ತಾರೆ, ಮಿಂಚುತ್ತಾರೆ, ಒಬ್ಬ ದೊಡ್ಡ ಕಲಾವಿದನಾಗುತ್ತಾನೆ ಎಂಬ
ಯಾವ ಕನಸನ್ನು ಹೊತ್ತುಕೊಂಡಿರಲಿಲ್ಲ. ಕೊಲಂಬಿಯಾ ಶಾಲೆಯು ಉತ್ಸಾಹಿತ ಮಕ್ಕಳಿಗೆ ಸ್ವಾರ್ಡ್ ಪ್ರಶಸ್ತಿಯನ್ನು ನೀಡಿ
ಗೌರವಿಸುತ್ತದೆ. ಈ ಪ್ರಶಸ್ತಿಗೆ ಶಾರೂಖ್ ಆಯ್ಕೆಯಾದಾಗ ಅವರೊಬ್ಬ ಕಲಾವಿದರಾಗುವ ಲಕ್ಷಣಗಳು ಕಾಣಿಸಿಕೊಂಡವು.


ಅಲ್ಲದೆ, ಶಾಲಾ ಅವಧಿಗೆ ಚಕ್ಕರ್ ಹೊಡೆದು, ನಾಟಕಗಳಲ್ಲಿ ಪಾಲ್ಗೊಳ್ಳುವುದಕ್ಕೆ ಪ್ರಾರಂಭಿಸಿದರು. ಇದರಿಂದ ಅಭಿನಯದತ್ತ
ತಮ್ಮ ಚಿತ್ತವನ್ನು ಹರಿಸಿದರು. ನಂತರ ಹನ್ಸ್‌ರಾಜ್ ಕಾಲೇಜಿನಿಂದ ಪದವಿಯನ್ನು ಮುಗಿಸಿಕೊಂಡ ಶಾರೂಖ್ ಖಾನ್,
ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿಯನ್ನು
ಮುಗಿಸಿಕೊಂಡರು.


ಬೆಳ್ಳಿತೆರೆಗೆ ಬರುವ ಮುಂಚಿತವಾಗಿ ಶಾರೂಖ್ ಖಾನ್ ಅವರು, ಫೌಜಿ ಹಾಗೂ ಸರ್ಕಸ್ ಧಾರಾವಾಹಿಗಳ ಮೂಲಕ
ಕಿರುತೆರೆಯಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಪ್ರಾರಂಭವಾಯಿತು ಅವರ ಬಣ್ಣದ ಬದುಕು. ನಂತರ ಶಾರೂಖ್‌ ಮಾಯಾನಗರಿ
ಮುಂಬೈಗೆ ಆಗಮಿಸಿ ಬಾಲಿವುಡ್‌ನಲ್ಲಿ ಕಾಣಿಸಿಕೊಳ್ಳುವ ಆಸೆಗೆ ಮುಂದಾದರು. ಆದರೆ, ಅವರಿಗೆ ದಿಕ್ಕಾಗಿದ್ದ ಅವರ ತಂದೆ
ತಾಯಿಗಳನ್ನು 1991 ರಲ್ಲಿಯೇ ಕಳೆದುಕೊಂಡು ಅನಾಥರಾದರು.


ಖಾನ್ ತಮ್ಮ ತಂದೆತಾಯಿಗಳನ್ನು ಕಳೆದುಕೊಂಡ ನಂತರ, 1991 ರಲ್ಲಿಯೇ ಗೊರ್‌ಗಾವ್‌ದಿಂದ ಮುಂಬೈಗೆ ಆಗಮಿಸಿದರು.
ಇದಾದ ಕೇವಲ ಒಂದೇ ವರ್ಷದಲ್ಲಿ (1992 ರಲ್ಲಿ) "ದಿವಾನಾ" ಚಿತ್ರದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಯ ಚಿತ್ರಗಳನ್ನು
ರೂಪಿಸಲು ಪ್ರಾರಂಭಿಸಿದರು. ಇದು ಅವರ ಮೊಟ್ಟ ಮೊದಲ ಚಿತ್ರವಾದರೂ, ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಚರ್ಚೆಗೆ
ಗ್ರಾಸವಾಯಿತು. ಈ ಚಿತ್ರದ ಮೂಲಕವೇ ಶಾರೂಖ್‌ ತಮ್ಮನ್ನು ಗುರುತಿಸಿಕೊಂಡರು.


ಅಷ್ಟೇ ಅವರ ಮೊದಲ ಚಿತ್ರವು ಫಿಲ್ಮ್‌ಫೇರ್‌ನ ಉತ್ತಮ ಪ್ರಶಸ್ತಿಯು ದೊರೆಯಿತು. ಇದಾದ ನಂತರ ಅವರು ನಟಿಸಿದ
"ಮಾಯಾ ಮೆಮ್‌ಸಾಬ್" ಚಿತ್ರವು ಸ್ವಲ್ಪ ವಿವಾದವೆಬ್ಬಿಸಿತು. ಕಾರಣವಿಷ್ಟೇ, ಅದರಲ್ಲಿ ಶಾರೂಖ್ ಲೈಂಗಿಕ ಚಿತ್ರಗಳಲ್ಲಿ
ಕಾಣಿಸಿಕೊಂಡಿದ್ದರು. ಹೀಗೆ ಖಾನ್ ಬಾಲಿವುಡ್ ಚಿತ್ರರಂಗದಲ್ಲಿ "ಕಭಿ ಖುಷ್, ಕಭಿ ಗಮ್" ಅನುಭವಿಸಿ, ಮುಂದೆ ಬಾಲಿವುಡ್
ಚಿತ್ರರಂಗದ "ಅಶೋಕ್" ಚಕ್ರವರ್ತಿಯಾಗಿ ಮೆರೆದಿದ್ದು ನಿಜಕ್ಕೂ ವಿಸ್ಮಯ.


ಹಿಟ್ ಚಿತ್ರಗಳು:
ಶಾರೂಖ್ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು. 1993 ರಲ್ಲಿ ಅವರು ಅಭಿನಯಿಸಿದ
"ಬಾಜಿಗರ್" ಹಾಗೂ "ಡರ್" ಚಿತ್ರಗಳು ಮತ್ತೊಂದು ಹೊಸ ಅಲೆಯನ್ನು ಸೃಷ್ಟಿಸಿದವು. ಆದರೆ ಈ ಚಿತ್ರದಲ್ಲಿ ಹೀರೊ ರೂಪದ
ಖಳನಾಯಕನಾಗಿ ಅಭಿನಯಿಸಿದ್ದು ವಿಶೇಷ. ಅವರು ಖಳನಾಯಕನಾಗಿ ನಟಿಸಿದ ಮೊದಲ ಚಿತ್ರಗಳಾದರೂ, ಇವು
ಪ್ರೇಕ್ಷಕರ ಅಚ್ಚುಮೆಚ್ಚುಗೆಗೆ ಪಾತ್ರವಾದವು. "ಬಾಜಿಗರ್" ಚಿತ್ರದಲ್ಲಿನ ಅವರ ಅದ್ಭುತ ಅಭಿನಯಕ್ಕೆ ಮೆಚ್ಚಿ ಫಿಲ್ಮ್‌ಫೇರ್
ಅತ್ಯುತ್ತಮ ನಟ ಪ್ರಶಸ್ತಿಯು ದೊರಕಿತು.


ಇದಾದ ನಂತರ "ಕಭಿ ಹಾ ಕಭಿ ನಾ" ಚಿತ್ರವು ಅವರಿಗೆ ದೊಡ್ಡ ಪ್ರಮಾಣದ ಯಶಸ್ಸು ದೊರಕಿಸಿಕೊಟ್ಟಿತು. ಈ ಚಿತ್ರಕ್ಕೂ
ಕೂಡ ಅವರಿಗೆ ಫಿಲ್ಮ್‌ಫೆರ್‌ನ ಅತ್ಯುತ್ತಮ ನಟ ಪ್ರಶಸ್ತಿ ದೊರಕಿತು. ನಂತರ ಅವರು ನಟಿಸಿದ ಕರಣ್ ಅರ್ಜುನ್,
ಡಿಡಿಎಲ್‌ಜಿ, ಪರದೇಸಿ, ಕುಚ್ ಕುಚ್ ಹೋತಾ ಹೈ, ಕಭಿ ಖುಷ್ ಕಭಿ ಗಮ್, ವೀರ್ ಜರಾ ಹಾಗೂ ಇತ್ತೀಚೆಗೆ ರೂಪಿಸಿರುವ
ಚಕ್ ದೇ ಇಂಡಿಯಾಗಳು ಬಾಕ್ಸ್ ಆಫಿಸ್‌ನಲ್ಲಿ ಭರ್ಜರಿ ಯಶಸ್ಸು ದೊರಕಿಸಿ ಕೊಟ್ಟಿವೆ.


ಶಾರೂಖ್ ನಿಜಕ್ಕೂ ಅದ್ಭುತ ಕಲಾವಿದ. ಇಂದಿಗೂ ಕೂಡ ಅವರ ಚಿತ್ರಗಳನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ
ಅಭಿಮಾನಿಗಳು ಮುಗಿಬೀಳುತ್ತಾರೆ. ಅವರು ಕನ್ನಡದ ದೀಪಿಕಾ ಪಡುಕೋಣೆ ಅವರೊಂದಿಗೆ "ಓಂ ಶಾಂತಿ ಓಂ" ಚಿತ್ರವನ್ನು
ಈಗಾಗಲೇ ಪೂರ್ಣಗೊಳಿಸಿದ್ದು, ದೀಪಾವಳಿಯ ಹಬ್ಬದಂದು ಅದು ಬಿಡುಗೊಳ್ಳಲಿದೆ.


ಈ ಲೇಖನವನ್ನು ಎಂಎಸ್ಎನ್ ಕನ್ನಡ ಪೋರ್ಟಲ್‌ನಲ್ಲಿಯೂ ಓದಬಹುದು. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

No comments: