Saturday, December 29, 2007

ಮಿತ್ರರು ಒಂದೇ ಕುಟುಂಬದ ಸೊಸೆಯರಾದಾಗ..


ನನಗಾಗ 8 ವರ್ಷ. ಬಾಲ್ಯ ಸವಿಯೋ ಕಾಲ. ಸುಖ ದುಃಖ, ಮೇಲು ಕೀಳು, ಬೇಧ ಭಾವ ಅರಿಯದ ವಯಸ್ಸು. ಒಂದರ್ಥದಲ್ಲಿ ಇನ್ನೂ ಸಾಧಾರಣ ತಿಳುವಳಿಕೆ ಬಾರದ ವಯಸ್ಸು. ಕನ್ನಡ (ಪ್ರಾಥಮಿಕ) ಶಾಲೆಗೆ ಹೋಗ್ತಾ ಇದ್ದೆ. ಆ ಸಂದರ್ಭದಲ್ಲಿ ನಮ್ಮ ಮನೆಯ ಜವಾಬ್ದಾರಿಯನ್ನೆಲ್ಲಾ ಅಪ್ಪನೆ ನಿರ್ವಹಿಸಬೇಕಾಗಿತ್ತು. ಅಮ್ಮ ಅವತ್ತಿನ ದಿನ ಕೂಲಿ ನಾಲಿ ಮಾಡಿಕೊಂಡು ಸಂಸಾರದ ಹೊರೆಯಲ್ಲಿ ತನ್ನ ಪಾಲನ್ನು ನೀಡುತ್ತಿದ್ದಳು. ಅತ್ತ ಅಣ್ಣನಿಗೆ ತನ್ನ ಓದನ್ನು ಮುಂದುವರೆಸಬೇಕೆಂಬ ಹಂಬಲ. ಆದ್ರೆ ಅವನು ದುಡಿಯೋದು ಬಿಟ್ಟು ಓದುತ್ತಾ ಕೂತ್ರೆ ಹಾಳಾದ ಹೊಟ್ಟೆ ಕೇಳಬೇಕಲ್ಲಾ. ಅದಕ್ಕಾಗಿ ಅವ್ನು ದಿನದಲ್ಲಿ ಕೆಲವು ಸಮಯವನ್ನು ಕಿರಾಣಿ ಅಂಗಡಿಗೆ ಹೋಗಿ ಲೆಕ್ಕಾ ಬರೆಯೋದಕ್ಕೆ ಹೋಗ್ತಾ ಇದ್ದಾ.

ನಮ್ಮನೇಲಿ ನಾನೊಬ್ಬಳೇ ಎಲ್ಲರ ಪ್ರೀತಿಗೆ ಪಾತ್ರಳಾದ ಹುಡುಗಿ ಅಂದ್ರೆ ಅತಿಶಯೋಕ್ತಿಯೇನಲ್ಲ. ಮುಂದೆ ನಾನು ಹಾಗೊ ಹೀಗೋ ಮಾಡಿ ಎಸ್ಎಸ್ಎಲ್‌ಸಿ ಪಾಸು ಮಾಡಿಕೊಂಡೆ. ಮುಂದೆ ಕಾಲೇಜು ಮೆಟ್ಟಿಲು ಏರಿ, ಹೆಚ್ಚಿಗೆ ಓದೋಣಾ ಅಂದ್ರೆ ಮನೆ ಪರಿಸ್ಥಿತಿ ಬೇರೆ ಚೆನ್ನಾಗಿರಲಿಲ್ಲ. ನಾನು ದೊಡ್ಡವಳಾದ ಮೇಲಂತೂ ನನ್ನ ತಂದೆ ತಾಯಿಗಳು ನನ್ನ ಮದುವೆ ಮಾಡೋ ಚಿಂತೆಯಲ್ಲಿಯೇ ಮಗ್ನರಾಗಿ ಬಿಟ್ರು. ಅಷ್ಟಕ್ಕೂ ನನಗಾಗ ಮದುವೆ ಮಾಡಿಕೊಳ್ಳೋ ಹಂಬಲವೇನೂ ಇರಲಿಲ್ಲ. ಅಲ್ಲದೆ ನನ್ನ ಜೀವನದ ಮಹದಾಸೆಯೂ ಅದಾಗಿರಲಿಲ್ಲ. ನಾನು ಚೆನ್ನಾಗಿ ಓದಿ ಜೀವನದಲ್ಲಿ ನಮಗಾಗಿ ಕಷ್ಟಪಟ್ಟ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆಯಿತ್ತು. ಆದ್ರೆ, ಸರಕಾರಿ ಕಾಲೇಜಿನಲ್ಲಿ ಇನ್ನೂರು ರೂಪಾಯಿ ನೀಡುವಷ್ಟು ಸಾಮರ್ಥ್ಯ ಕೂಡ ನನ್ನ ತಂದೆಗೆ ಇರಲಿಲ್ಲ. ಏತನ್ಮಧ್ಯೆ ಹಾಸಿಗೆ ಹಿಡಿದ ಅಜ್ಜಿ ಬೇರೆ. ಸಂಸಾರಗಿಂತಲೂ ದೊಡ್ಡ ಖರ್ಚು ಅವಳದೆ.

ಹೀಗೆ ಒಂದಿಲ್ಲಾ ಒಂದು ತಾಪತ್ರೆಯಗಳು ನಮ್ಮ ಸಂಸಾರದಲ್ಲಿ ಆಗಾಗ ಬಾಣದಂತೆ ಎದೆಗೆ ನಾಟುತ್ತಲೇ ಇದ್ದವು. ನನ್ನ ಕುಟುಂಬದ ಕಷ್ಟವನ್ನು ನೋಡಲಾರದೆ, ನನ್ನಿಂದ ಏನಾದ್ರು ಸಹಾಯ ಆಗುತ್ತದೆಯೇ ಎಂದು ಆಲೋಚನೆ ಮಾಡಿ, ಪ್ರತಿನಿತ್ಯ ಅಮ್ಮನೊಂದಿಗೆ ಇನ್ನೂ ಮುಂದೆ ನಾನು ಕೂಲಿಗೆ ಹೋದರಾಯ್ತು ಅಂತಾ ವಿಚಾರ ಮಾಡಿದೆ. ಆದ್ರೆ ವಯಸ್ಸಿನ ಹೆಣ್ಮಕ್ಳು ಹೊರಗಡೆ ಹೋಗಿ ದುಡಿಯೋದು ಯಾವ ತಂದೆ-ತಾಯಿಗಳು ಇಚ್ಚೆ ಪಡ್ತಾರೆ ಹೇಳಿ... ಹಾಗೇನೆ ನಮ್ಮ ಮನೇಲೂ ಅದಕ್ಕೆ ಬೇಡ ಅಂದ್ರು. ಆದರೆ, ಕುಟುಂಬದ ನೈಜ ಪರಿಸ್ಥಿತಿ ಅನಿವಾರ್ಯವಾಗಿ ಅವರನ್ನು ಮೂಕರನ್ನಾಗಿಸಿತು.

ನಾನೂ ಅಮ್ಮನೊಂದಿಗೆ ಹೋಗಿ ದಿನನಿತ್ಯ ಕೆಲಸಕ್ಕೆ ಹೋಗಿ ದುಡೀತಾ ಇರೋದ್ರಿಂದಾಗಿ ಕುಟುಂಬದಲ್ಲಿ ಹೌದೋ ಅಲ್ಲವೋ ಅನ್ನುವಷ್ಟು ಆರ್ಥಿಕ ಮಟ್ಟ ಸುಧಾರಣೆ ಕಂಡಿತ್ತು. ಕೆಲವು ದಿನಗಳ ಈ ಕಾರ್ಯ ಬಿಡುವಿಲ್ಲದೆ ಹಾಗೇ ಮುಂದುವರೆಯಿತು. ಮಳೆಗಾಲದಲ್ಲಿ ಹೊಲ ಗದ್ದೆಗಳಲ್ಲಿ ಸಾಕಷ್ಟು ಕೆಲ್ಸಾ ಇರ್ತಿತ್ತು. ಇದರಿಂದ ಕೆಲಸಕ್ಕೆ ಯಾವ ಅಡ್ಡಿಗಳು ಬರಲಿಲ್ಲ. ಆದರೆ, ಮಳೆಗಾಲ ಮರೆಮಾಚಿ ಬೇಸಿಗೆ ಆವರಿಸಿದಾಗ, ಆಗಂತೂ ಅಪ್ಪಾ ಹಾಗೂ ಅಮ್ಮಾ ಇಬ್ರೂ ಪಟ್ಟಣಕ್ಕೆ ಹೋಗಿಯೇ ದುಡಿದುಕೊಂಡು ಬರಬೇಕಾಗಿತ್ತು. ಆದರೆ, ನಾನು ಅವರೊಟ್ಟಿಗೆ ಬರುವುದು ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ಹೀಗಾಗಿ ನಮ್ಮೂರ ಗೌಡ್ರು ಮನೆಯಲ್ಲಿ ಮನೆಗೆಲಸ ಮಾಡಿಕೊಳ್ಳುತ್ತಾ ನಾನು ಕುಟುಂಬಕ್ಕೆ ಅಳಿಲು ಸೇವೆ ಮಾಡ್ತಾ ಇದ್ದೆ.

ಪ್ರತಿನಿತ್ಯದಂತೆ ನನ್ನ ಕೆಲಸಕ್ಕೆ ನಾನು ಗೌಡರ ಮನೆಗೆ ಹೋದೆ. ಆಗ ಅವರ ಮನೇಲಿ ಏನೋ ಒಂದು ಹಬ್ಬದ ವಾತಾವರಣ ಮೂಡಿತ್ತು. ನನಗೂ ತುಂಬಾ ಆಶ್ಚರ್ಯವಾಯ್ತು. 'ಏನಿದು ಇವತ್ತು ಎಲ್ಲರೂ ಇಷ್ಟೊಂದು ಖುಷಿಯಾಗಿದ್ದಾರೆ' ಅಂದ್ಕೊಂಡು ಮನೆಯ ಒಳಗಡೆ ಕಾಲಿಟ್ಟೆ. ಆಗ ಗೌಡಶ್ಯಾನಿ (ಗೌಡರ ಪತ್ನಿ) ಬಂದು 'ಮಲ್ಲಿ ಇವತ್ತು ನಮ್ಮ ಕವಿತಾಳನ್ನು (ಮಗಳು) ನೋಡೋಕೆ ಗಂಡಿನ ಕಡೆಯೋರು ಬರ್ತಾ ಇದಾರೆ' ಅನ್ನೊ ವಿಷಯವನ್ನು ತಿಳಿಸಿದಾಗ, ಈ ಸಂಭ್ರಮದ ಗುಟ್ಟೇನು ಅಂತಾ ಆವಾಗ ನನಗೆ ತಿಳಿತು. ಗಂಡಿನ ಕಡೆಯವರು ಇವರಿಗಿಂತಲೂ ಸ್ವಲ್ಪ ಮೇಲುಗೈ ಇದ್ದರು ಎನ್ನಿ. ಅವರಿಗೆ ಹೆಣ್ಣು ಇಷ್ಟವಾಗಿರುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿದ್ದವು.

ನಾನು ಅಂದುಕೊಂಡಂತೆ ಮರುದಿನ ನಡದೆ ಹೋಗಿತ್ತು. ಗೌಡರ ಮನೆಗೆ ಎಂದಿನಂತೆ ಕೆಲಸಕ್ಕೆ ಹೋದಾಗ, ಅಮ್ಮಾವ್ರು (ಗೌಡರ ಪತ್ನಿ) 'ಲೆ ಮಲ್ಲಿ ನಮ್ಮ ಕವಿತಾನ ಅವ್ರು ಒಪ್ಕೊಂಡಿದಾರಂತೆ. ಇವತ್ತು ಮುಂಜಾನೆ ಅವ್ರು ಫೋನ್ ಮಾಡಿ ತಿಳಿಸಿದ್ರು' ಎಂದು ಸಂಭ್ರಮದಿಂದ ತಿಳಿಸಿದಾಗ ನನಗೆ ತುಂಬಾ ಸಂತೋಷವಾಯಿತು. ಕಾಲ ಯಾರನ್ನು ಎಲ್ಲಿ, ಯಾವಾಗ ಒಂದು ಮಾಡುತ್ತೋ ಆ ದೇವರಿಗೆ ಗೊತ್ತು ಅಂತಾ ಮನೆಗೆ ಹೋದೆ.

ಈ ಘಟನೆಯಾಗಿ ಎರಡು ಮೂರು ದಿನಗಳ ನಂತರ ನನಗೊಂದು ವಿಚಿತ್ರವಾದ ಮತ್ತು ಅಷ್ಟೇ ಆಶ್ಚರ್ಯ ಕಾದಿತ್ತು. ನಮ್ಮನೇಲಿ ಯಾರೋ ಅತಿಥಿ ಬಂದು ಕುಳಿತಿದ್ದಾನೆ ! ಅವರೊಟ್ಟಿಗೆ ಅವರ ಬಂದು ಬಳಗ ಬೇರೆ ! ನನ್ನ ಕಣ್ಣುಗಳನ್ನು ನಾನೇ ನಂಬದಾಯಿತು. ಆಗ ನನ್ನ ತಾಯಿ ಒಳಗೆ ಕರೆದು 'ಲೇ ಮಲ್ಲಿ ಅವ್ರು ನಿನ್ನನ್ನ ನೋಡೋಕೆ ಬಂದಾರೆ. ಹುಡುಗನಿಗೆ ಈಗಾಗಲೇ ಒಂದ್ ಮದ್ವೆ ಆಗಿ, ಅವಳಿಗೆ ಡೈವೋರ್ಸ್ ನೀಡಿದ್ದಾನೆ. ಇದು ಅವರಿಗೆ ಎರಡನೇ ಕಡೆ ಸಂಬಂಧ. ಹುಡುಗಾ ಪರವಾಗಿಲ್ಲ. ಚೆನ್ನಾಗಿದ್ದಾನೆ. ಸುಮಾರು 34 ರ ಆಸುಪಾಸು' ಎಂದು ನನ್ನ ಅಮ್ಮ ಆ ಹುಡುಗನ ಗುಣಗಾನ ಮಾಡಿದ್ದೆ ಮಾಡಿದ್ದು. ಆದ್ರೆ.... ಮದ್ವೆ ಆಗೋಳು ನಾನು ತಾನೆ ಎಂದು ಹೇಳಿದಾಗ, ನನ್ನ ಅಮ್ಮನ ಕಣ್ಣಲ್ಲಿ ಕಂಬನಿ ತುಂಬಿಯೇ ಬಂತು. ಆಗ 'ನೋಡೇ ನಿನಗೆ ಸಾವಿರಾರು ರೂಪಾಯಿ ವರದಕ್ಷಿಣಿ ಕೊಟ್ಟು ಮದ್ವೆ ಮಾಡೋ ಶಕ್ತಿ ಅಂತೂ ಆ ದೇವ್ರು ನಮಗೆ ಕೊಟ್ಟಿಲ್ಲಾ. ಇದು ಒಳ್ಳೆ ಕಡೆ ಸಂಬಂಧ ದೇವಸ್ಥಾನದಲ್ಲಿ ಸರಳವಾಗಿ ಮದ್ವೆ ಮಾಡಿಕೊಡು ಅಂತಾ ಹೇಳಿದಾರೆ. ಅದಕ್ಕೆ ಅವ್ರೇ ಖರ್ಚು ನೀಡ್ತಾ ಇದಾರೆ. ದಯವಿಟ್ಟು ಬೇಡಾ ಅನ್ನಬೇಡ್ವೆ' ಅಂದಾಗ. ಆಯ್ತು ಅಂತಾ ಮೌನದಲ್ಲೇ ಉತ್ತರ ನೀಡಿದೆ.

ಕಾಲಚಕ್ರ ತಿರುಗತ್ತಲೇ ಇರುತ್ತದೆ ಎಂಬುವುದಕ್ಕೆ ನಾನೇ ಸಾಕ್ಷಿ. ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ಏನು ಗೊತ್ತೆ ನಾನು ಮದುವೆ ಆಗ್ತಾ ಇರೋ ಹುಡುಗನ ಸ್ವಂತ ತಮ್ಮನೆ ನಾನು ಪ್ರತಿನಿತ್ಯ ಕೆಲಸಕ್ಕೆ ಹೋಗ್ತಾ ಇದ್ದ ಗೌಡರ ಮಗಳ್ನಾ ಅಂದ್ರೆ ಕವಿತಾನ ಮದುವೆ ಆಗೋ ಗಂಡು ಅಂತಾ! ಎಷ್ಟೊಂದು ವಿಪರ್ಯಾಸ. ನನ್ನ ತಂದೆ ಪಟ್ಟಣಕ್ಕೆ ಕೆಲಸಕ್ಕೆ ಹೋದಾಗ ಅಲ್ಲಿ ಇವರ ಬಗ್ಗೆ ಯಾರೋ ಒಬ್ರು ಹೇಳಿದ್ದರಂತೆ. ಆ ಮೂಲಕವಾಗಿ ನಾನು ಇವರನ್ನು ಮದುವೆ ಆಗಬೇಕಾಗಿ ಬಂತು. ಇನ್ನೊಂದು ಆಶ್ಚರ್ಯದ ಸಂಗತಿ ಎಂದರೆ, ಕವಿತಾ ಮತ್ತು ನಾನು ಇಬ್ಬರು ಪ್ರಾಥಮಿಕ ಶಾಲೆಯಿಂದಲೇ ಮಿತ್ರರು ! ಈಗ ಒಂದೇ ಮನೆ ಸೊಸೆಯಂದಿರು ಬೇರೆ.

ನಮ್ಮ ಮಗಳು ತಾನು ಹುಟ್ಟಿನಿಂದಲೂ ಸಂಕಷ್ಟದಲ್ಲಿಯೇ ಬೆಳೆದವಳು. ತನ್ನ ಗಂಡನ ಮನೆಯಲ್ಲಾದ್ರೂ ಸುಖದಿಂದ ಬದುಕಲಿ ಎಂದು ತಂದೆ-ತಾಯಿಗಳು ಆಶಿಸಿದ್ದರು. ಆದ್ರೆ ಅದಕ್ಕೆ ತದ್ವಿರುದ್ಧವಾದ ವಾತಾವರಣ ಇಲ್ಲಿ ಸೃಷ್ಟಿಯಾಗಿತ್ತು. ಮದುವೆಯಾಗಿ ಕೆಲವು ತಿಂಗಳುಗಳು ಕಳೆದವು. ನನ್ನ ಗಂಡನ ಮನೇಲಿ ಒಂದು ರೀತಿಯ ತಾರತಮ್ಯ ಕಾಣಿಸುತ್ತಿತ್ತು. ಅದರಲ್ಲೂ ನನ್ನ ಅತ್ತೆಯಂತೂ ನಿಸ್ಸೀಮಳು. ನಾನು ಬಡವರ ಮನೆಯಿಂದ ಬಂದ ಹೆಣ್ಣು, ಕವಿತಾ ಸಾಹುಕಾರ ಮನೆಯಿಂದ ಬಂದ ಹೆಣ್ಣು ಎಂಬ ಒಂದೇ ಒಂದು ಕಾರಣಕ್ಕೆ ಅತ್ತೆ ಮನೆಯ ಹೊರಗಡೆಯಿರುವ ಬೇರೆ ಎರಡು ರೂಮ್‌ಗಳನ್ನು ನನಗೆ ನೀಡಿದಳು. ಆದ್ರೆ ನಾನು ಅದನ್ನು ಮನಪೂರ್ವಕವಾಗಿ ಸ್ವೀಕರಿಸಿದ್ದೆ.

ಆದ್ರೆ ಇದು ನನಗೆ ಹೊಸತರವೇನೂ ಕಾಣಲಿಲ್ಲ. ಗುಡಿಸಲಲ್ಲಿಯೇ ಹುಟ್ಟಿ, ಬೆಳೆದವಳು ನಾನು. ಇದು ಅಂತಹ ಬದಲಾವಣೆಯೇನೂ ನನ್ನಲ್ಲಿ ಕಾಣಲಿಲ್ಲ. ಅದು ಅಲ್ಲದೆ, ನನ್ನ ಪತಿಯೂ ಕೂಡ ಅವರು ಕೊಟ್ಟ ಒಳಗಡೆಯ ಬಂಗಲೆಯನ್ನು ಬಿಟ್ಟು ನನ್ನೊಟ್ಟಿಗೆ ಸಂಸಾರ ಸಾಗಿಸುತ್ತಿದ್ದಾರೆ. ಇದಕ್ಕಿಂತಲೂ ನನಗೆ ಬೇರೆ ಭಾಗ್ಯ ನನಗೇನು ಬೇಕು ಅಂದುಕೊಂಡು ನನ್ನ ಪತಿಯೊಂದಿಗೆ ಸುಖ ಜೀವನ ನಡೆಸುತ್ತಿದ್ದೇನೆ.

ಪ್ರಿಯ ಓದುಗರೆ, ಇಲ್ಲಿ ನಾನು ಬಿಡಿಸಿರುವ ಅಕ್ಷರಗಳ ಸರಮಾಲೆಯು ಕೇವಲ ಸೃಷ್ಟಿಯಲ್ಲ. ಇದು ನನ್ನೂರಿನಲ್ಲಾದ ನೈಜ ಘಟನೆಯನ್ನು ಆಧರಿಸಿ ಬರೆದಿರುವ ಸತ್ಯ ಸಂಗತಿ. ವಿವಿಧ ಬಗೆಯ ಕಷ್ಟ ಕಾರ್ಪಣ್ಯಗಳು ಜೀವನದುದ್ದಕ್ಕೂ ಬರುತ್ತಲೇ ಇರುತ್ತವೆ. ಆದರೆ, ಕೆಲವರ ಅನುಭವಗಳು ಇದಕ್ಕೆ ಹೊರತಾಗಿರುತ್ತವೆ.

3 comments:

dinesh said...

ಬರಹ ಚೆನ್ನಾಗಿದೆ....ಫೋಟೊ ಇನ್ನೂ ನೈಸ್....

ಶ್ರೀನಿಧಿ.ಡಿ.ಎಸ್ said...

ನಮಸ್ತೇ,
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ! ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ.

ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ.

jomon varghese said...

ಹಾರುವ ಹಕ್ಕಿಗೆ ನಮಸ್ಕಾರ...

ಕಥೆ ಯಾರದ್ದು ಹುಡುಗಾ? ತುಂಬಾ ಬಾವುಕನಾಗಿ ಬರೆದಿದ್ದೀಯ.ಚೆನ್ನಾಗಿದೆ.ಖುಷಿಯಾಯಿತು. ಚಿತ್ರ ನೋಡಿ ಇದು ಅವರೇನಾ ಎನ್ನುವ ಕುತೂಹಲವೂ ಮೂಡಿತು.

ಧನ್ಯವಾದಗಳು.

ಜೋಮನ್.