Monday, October 22, 2007

ಚೆನ್ನೈನಲ್ಲಿ ಕನ್ನಡಿಗರ ದಸರಾ ಹಬ್ಬದ ಸಂಭ್ರಮ


















ಇತ್ತೀಚೆಗೆ ವೆಬ್‌ದುನಿಯಾ ಕಚೇರಿಯಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಸಂಭ್ರಮಿಸಿದ ಬಗೆಯ ಚಿತ್ರಗಳು..

Sunday, October 21, 2007

ನಾವ್ ನೀವ್ ಬಂಗಾರ್‌ದ್ಹಂಗ್ ಇರೂಣ....


ಬಹುಶಃ ನಾನು ಊರಲ್ಲಿ ಇದ್ದಿದ್ರೆ ವಿಜಯ ದಶಮಿಯನ್ನು ಅಲ್ಲಿಯೇ ಆಚರಣೆ ಮಾಡ್ತಾ ಇದ್ದೆ. ಆದ್ರೆ ಅದಕ್ಕೆ ಕಾಲ ಕೂಡಿ ಬಾರದ್ದರಿಂದ ಚೆನ್ನೈನಲ್ಲಿ ನನ್ನ ಯಾಂತ್ರಿಕ ಜೀವನದಲ್ಲಿಯೇ ಅಲ್ಲಿಯ ಹಬ್ಬದ ಆಚರಣೆ ಬಗೆಯನ್ನು ಜ್ಞಾಪಿಸಿಕೊಂಡು ಈ ಮೂಲಕ ನನ್ನ ಎಲ್ಲ ಮಿತ್ರರಿಗೆ, ಬಂಧು-ಬಾಂಧವರಿಗೆ ಹಾಗೂ ಈ ಬ್ಲಾಗ್ ಓದಿದವರಿಗೂ ಸಹ ವಿಜಯ ದಶಮಿಯ ಶುಭಾಶಯಗಳನ್ನು ಕೋರುತ್ತಿದ್ದೇನೆ.


ಉತ್ತರ ಕರ್ನಾಟಕದಲ್ಲಿ ವಿಜಯ ದಶಮಿ ದಿನದಂದು ಪತ್ರಿ ಹಾಗೂ ಪತ್ರಿಯ ಎಲೆಯನ್ನು ಹಿರಿಯ ಕೊಟ್ಟು ಅವರಿಗೆ ನಮಸ್ಕರಿಸಿ, "ನಾವು ನೀವು ಬಂಗಾರ್‌ದ್ಹಂಗ್ ಇರೂಣ" ಅಂತ ಹೇಳೋದು ಸಾಂಪ್ರದಾಯ. ಅದಕ್ಕೆ ನಾನು ಅಲ್ಲಿಲ್ಲದ್ದರಿಂದ, ಈ ಮೂಲಕ ಎಲ್ಲರಿಗೂ ಇದನ್ನೇ ಹೇಳಲು ಇಚ್ಛಿಸಲು ಬಯಸುವೆ.


'ನಿನ್ನೆಯ ಕಹಿಯನ್ನು ಮರೆಯೋಣ,

ನಾಳೆಯ ಏನಾಗುತ್ತೊ ಎಂಬುವುದನ್ನು ಬಿಡೋಣ

ಇಂದಿನ ಸಂತಸವನ್ನು ಹಂಚಿಕೊಳ್ಳೋಣ'


-ಎಂದು ಹೇಳುತ್ತಾ, ಈ ಬ್ಲಾಗ್ ಓದುಗರಿಗೆ, ಮಿತ್ರರಿಗೆ, ಬಂಧು-ಬಾಂಧವರಿಗೆ ಮತ್ತೊಮ್ಮೆ ವಿಜಯ ದಶಮಿಗಳ ಶುಭಾಶಯ ಕೋರುವೆ.

Wednesday, October 17, 2007

ಬೆಂಚು ಬರಹದ ಬಗ್ಗೆ ಕೊಂಚ ಬರಹ.......


'ಕಂಡಲ್ಲೂ ನೀನೆನೆ... ನಿಂತಲ್ಲೂ ನೀನೆನೆ.. ಎಲ್ಲೆಲ್ಲೂ ನೀನೆ ಕಾಣುವೆ'... ಎಂಬ ಪ್ರೇಮಗೀತೆಯನ್ನು ಸದಾ ಹೃದಯದಲ್ಲಿ ಮಿಡಿಯುವ ಪ್ರೇಮಿಗಳು, ತಮ್ಮ ಪ್ರೀತಿ ನಿಜವಾಗಿಯೂ ಎಷ್ಟು ಪ್ರಭಾವವಾಗಿರುತ್ತೆ ಅಥವಾ ಆಳವಾಗಿರುತ್ತೆ ಎಂಬುವುದನ್ನು ತಾವು ಕೂತ ಬೆಂಚು, ನಿಂತ ನೆಲ, ಓಡಾಡಿದ ಕಲ್ಲುಗಳು ಹೀಗೆ ತಾವೆಲ್ಲಿ ವಿಹರಿಸಿ ಬಂದಿರುತ್ತಾರೋ ಅಲ್ಲೆಲ್ಲ ತಮ್ಮ ಅಮರ ಪ್ರೇಮದ ಅಕ್ಷರಗಳನ್ನು ಮೂಡಿಸುತ್ತಾರೆ (ಇನ್ನೂ ಈ ಪ್ರತೀತಿಯನ್ನು ಮಂದುವರೆಸಿದ್ದಾರೆ).


ತನ್ನ ಹಾಗೂ ತನ್ನ ಪ್ರೇಮಿಯ ಹೆಸರು ಶಾಶ್ವತವಾಗಿರಲಿ ಎಂಬ (ಮೂಢ) ಭಾವನೆಯಿಂದ ಪ್ರಸಿದ್ಧ ಐತಿಹಾಸಿಕ ಸ್ಥಳಗಳ ಗೋಡೆಗಳ ಮೇಲೆ ತಮ್ಮ ಹೆಸರುಗಳನ್ನು ಪ್ರೇಮಕಾವ್ಯದಂತೆ ಮೂಡಿಸಿ ಬಂದಿರುತ್ತಾರೆ. ಅಬ್ಬಾ! ಇದು ಎಂಥಾ ಪ್ರೀತಿ ಎಂದು ಅದನ್ನು ನೋಡಿದವರಿಗೇ ಅರ್ಥವಾಗಬೇಕು (ತಿಳಿದರೆ ಮಾತ್ರ).


'ಜನ್ಮ ಜನ್ಮಕ್ಕೂ ನೀನೆ ನನ್ನ ಸಂಗಾತಿ', 'ನಿನ್ನನ್ನೇ ಪ್ರೀತಿಸುವ ಇಂತಿ ನಿನ್ನ ಪ್ರಿಯಕರ', 'ಹಲವು ದಿನಗಳ ಗೆಳೆಯಾ ಅಥವಾ ಗೆಳತಿ' ಹೀಗೆ ನಾನಾ ವಿಧಗಳಲ್ಲಿ ತಮ್ಮದೆಯಾದ ವಾಕ್ಯಗಳನ್ನು ಪ್ರೇಮದ ಸಂಕೇತದೊಂದಿಗೆ ಸ್ಥಳಗಳಲ್ಲಿ ಮೂಡಿಸಿರುತ್ತಾರೆ. 'ಇವರೇಕೆ ಹೀಗೆ ನನ್ನ ಮೇಲೆ ಮೂಡಿಸುತ್ತಾರೋ' ಎಂದು ಆ ಗೋಡೆಗಳು ತಮ್ಮಲ್ಲಿಯೇ ಗೊಣಕಿಕೊಳ್ಳುತ್ತಿರುತ್ತವೆ.


ಇದರಲಿ ಬಿಡಿ. ಇದು ಪ್ರೇಮಿಗಳ ಕಥೆಯಾಯಿತು. ಟೈಂ ಪಾಸ್ ಮಾಡುವವರ ಕಥೆಯು ಅದೇ ಆಗಿರುತ್ತದೆ. ರೈಲಿನಲ್ಲಿ ಪ್ರಯಾಣಿಸುವಾಗ ಅವರ ಮುಂದಿರುವ ಸೀಟು ಸ್ಪಲ್ಪ ಕಣ್ಣಾಡಿಸಿ ನೋಡಿ (ಸಾಧ್ಯವಾದರೆ, ಕಿಡಿಗಳು ಹಾಗೇ ಬಾತ್ ರೂಮ್ ಕೂಡಾ). ಎನೆಲ್ಲಾ ಗೀಚಿರ್ತಾರೆ. ಇಷ್ಟೇ ಆದ್ರೆ ಓಕೆ ಅನ್ನಬಹುದು. ಆದರೆ, ಅಲ್ಲಿ ಬರೆದಿರುವ ನಿಯಮಗಳನ್ನು 'ತಿದ್ದುಪಡಿ' ಮಾಡಿ ಅದರ ನೈಜ ಅರ್ಥವನ್ನು ಅನರ್ಥ ಬರುವಂತೆ ಮಾಡಿರುತ್ತಾರೆ. ಇದನ್ನು ಬರೆದ ಆ ಮಹಾಪುರುಷ ಎಷ್ಟು ಜಾಣನಿರಬಹುದು ಎಂದು ಅದನ್ನು ಓದಿದವರು ಮನಸ್ಸಿನಲ್ಲಿಯೇ ಮಂದಹಾಸ ಬೀರುವುದನ್ನು ನಾವು ಕಂಡಿದ್ದೇವೆ.


ಹಾಗೆ ಪಾರ್ಕ್‌ಗೆ ಬೆಳಗಿನ ಜಾವ ಜಾಗಿಂಗ್‌ಗೆ ಹೋದಾಗಲೊ ಅಥವಾ ಸಂಜೆ ವಾಕ್ ಹೋದಾಗಲೋ ಕೊಂಚ ಹೊತ್ತು ವಿಶ್ರಾಂತಿ ಪಡೆದುಕೊಳ್ಳಲು ಬೆಂಚುಗಳ ಮೇಲೆ ಕುಳಿತಾಗ ಅಲ್ಲಿಯು ಆ ಮಹಾಪುರುಷರ 'ಅಕ್ಷರ ಕೆತ್ತನೆ' ತಪ್ಪಿರುವುದಿಲ್ಲ. ಒಂದು ಒಳ್ಳೆಯ ವಾಕ್ಯವನ್ನು ಬರೆದಿದ್ದರೆ, ಪರವಾಗಿಲ್ಲ, ಅದರ ಬದಲು ಅವರ ಹೆಸರು ವಿಳಾಸ ಎಲ್ಲ ವಿವರ ನಮೂದಿಸಿ ಬಿಟ್ಟಿರ್ತಾರೆ. ಇನ್ನು ಕೆಲವರು ತಮ್ಮ ಭಾವಚಿತ್ರವನ್ನೆ ಬಿಡಿಸಿರುತ್ತಾರೆ! ಅದು ಅದ್ಭುತ ಕಲೆ.


ಇದು ಬಸ್ಸುಗಳನ್ನು ಬಿಡಲಿಲ್ಲ. ಒಮ್ಮೆ ಬಸ್ಸಿನಲ್ಲಿ ಹೋಗುವಾಗ ಅದರ ಸೀಟಿನ ಹಿಂದೆ ಹೀಗೆ ಬರೆಯಲಾಗಿತ್ತು- 'ಟಿಕೆಟ್ ರಹಿತ ಪ್ರಯಾಣ ಮಾಡಿದಲ್ಲಿ, ಅವರಿಗೆ 500 ರೂಪಾಯಿಗಳ ದಂಡ ವಿಧಿಸಲಾಗುವುದು' ಎಂದಿತ್ತು. ಇದನ್ನು ಯಾರೋ ಒಬ್ಬ, 'ಟಿಕೆಟ್ ಹಿತ ಪ್ರಯಾಣ ರೂಪಾ!' ಎಂದು ಅದರ ಮೂಲರೂಪವನ್ನು ಬದಲಾಯಿಸಿಬಿಟ್ಟಿದ್ದ. ಇನ್ನೊಬ್ಬ 'ಟಿಕೆಟ್ ಹಿತ ಪ್ರಯಾಣ ಮಾಡಿದಲ್ಲಿ, ಅವರಿಗೆ 500 ರೂಪಾಯಿ' ಎಂದಷ್ಟೇ ಬದಲಾಯಿಸಿದ್ದ. ನಿಜಕ್ಕೂ ಇಷ್ಟೊಂದು ಬುದ್ಧಿವಂತರು(!) ಇರ್ತಾರೆಯೇ ಎಂದುಕೊಂಡೆ.


ಕ್ಲಾಸ್ ರೂಮಿನಲ್ಲಿ ಬೆಂಚ್ ಮೇಲೆ ಕೂತಾಗಲು ಕೂಡ ಹಲವಾರು ಬಗೆಯ ವಿಶಿಷ್ಟ ಶೈಲಿಯ ಬರಹಗಳು ಕಾಣ ಸಿಗುತ್ತವೆ (ಕಾಲೇಜು ಜೀವನ ಅನುಭವಿಸಿದ್ದಲ್ಲಿ). ಪ್ರೊಪೆಸ್ಸರ್‌ಗಳ ಪಾಠ ಬೇಜಾರಾದಾಗ ಮುಂದಿರುವುದು ಒಂದೇ ಮಾರ್ಗ. ಅಕ್ಷರಗಳನ್ನು ಬರಿಯೋದು. ಚಿತ್ರ ಬಿಡಿಸೋದು. ಕೆಲವೊಮ್ಮೆ ಚಿತ್ರಗಾರರಿದ್ದರೆ, ಅದೇ ಪ್ರೊಫೆಸ್ಸರ್‌ಗಳು ಬೆಂಚ್ ಮೇಲೆ ಚಿತ್ರವಾಗಿ ಮೂಡಿಬಿಡುತ್ತಾರೆ! (ಆದ್ರೆ ನಾನೇನು ಅಂತಹ ಕಲಾವಿದನಲ್ಲ).


ಇದೆಲ್ಲಕ್ಕಿಂತಲೂ ಹಾಸ್ಟೇಲ್ ಗೋಡೆಗಳು ಇವಕ್ಕೆ ಅತಿಸೂಕ್ತ ಎಂದರೆ, ತಪ್ಪಾಗಲಾರದು. ಎಂತೆಂಥ ಬರಹಗಳು, ಒಂದೊಂದು ಅದ್ಭುತ ಮತ್ತು ಅಷ್ಟೇ ಹಾಸ್ಯಮಯವಾಗಿರುತ್ತವೆ. 'ನನ್ನನ್ನು ನೀವು ಭೇಟಿಯಾಗಬೇಕಿದ್ದರೆ, ಈ ನಂಬರ್‌ನ್ನು ಸಂಪರ್ಕಿಸಿ. ಎಂದು ಬರೆದು ಅವರ ವಿಳಾಸ ಕೂಡ ಬರೆದಿರ್ತಾರೆ' (ಇವರನ್ನು ನಾವ್ಯಾಕೆ ಸಂಪರ್ಕಿಸಬೇಕು. ಹೋಗ್ಲಿ ಯಾಕೆ ಫೋನ್ ಮಾಡಬೇಕು). 'ಇವರು ನನ್ನ ರೂಮ್ ಪಾರ್ಟ್ನರ್‌ಗಳು- ಮುಂದೆ ಅವರ ಹೆಸರು' (ಅವರನ್ನು ತೆಗೆದುಕೊಂಡು ನಾನೇನು ಮಾಡಲಿ).


ಹೀಗೆ ಬೆಂಚು ಬರಹದ ಬಗ್ಗೆ ಹೇಳುತ್ತಾ ಹೋದರೆ, ಅದು ನಿರಂತರ. ರಾಜ ಮಹಾರಾಜರು ತಮ್ಮ ಹೆಸರನ್ನು ಬರೆಸಲು ಈಗಿನಂತೆ ಕಂಪ್ಯೂಟರ್‌ಗಳು, ವೆಬ್‌ಸೈಟ್‌ಗಳು ಇಲ್ಲದ್ದರಿಂದ ಕಲ್ಲಿನ ಮೇಲೆ ಚಿತ್ರಕಾರರ ಮೂಲಕ ತಮ್ಮ ಹೆಸರನ್ನು ಬರೆಸುತ್ತಿದ್ದರು ಎಂಬುದನ್ನು ನಾವು ಇತಿಹಾಸದಿಂದ ತಿಳಿದುಕೊಂಡಿದ್ದೇವೆ. ಅವರಂತೆಯೇ ನಮ್ಮ ಹೆಸರು ಕೆತ್ತನೆಯಲ್ಲಿ ಬಾರದಿದ್ದರೂ ಪರವಾಗಿಲ್ಲ. At least ಈ ಬರಹದ ಮೂಲಕವಾದರೂ, ಇಲ್ಲಿ ಒಡಮೂಡಲಿ ಎಂಬ ಭಾವನೆ ಈಗಿನ ಜನರದ್ದು. ಹೀಗಾಗಿ ತಾವು ಎಲ್ಲಿಗಾದರೂ ಭೇಟಿ ನೀಡಿದಾಗ ಅಥವಾ ಎಲ್ಲಿಯಾದರೂ ಕೂತಾಗ (ಖಾಲಿ) ಇಂತಹ ಕಾರ್ಯಕ್ಕೆ ಮುಂದಾಗುವುದು ಸಹಜ.

Tuesday, October 9, 2007

ಹಲವು ಸೋಲುಗಳ ಮರೆಸುವ ಒಂದು ಗೆಲುವು.......

ಭಾರತ ಕ್ರಿಕೆಟ್ ತಂಡ ಯಾವಾಗ ಏನಾಗುತ್ತೆ ಎಂಬುದು ಗೊತ್ತಾಗುವುದಿಲ್ಲ. ಮೇಲಿಂದ ಮೇಲೆ ಸೋಲು ಕಂಡ ನಂತರ ಒಂದುಸಲ ಜಯ ತಂದುಕೊಂಡರೆ, ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಮನ ತಣಿಸುವ ಶಕ್ತಿ ಅದಕ್ಕಿದೆ ಎಂದರೆ ಅಚ್ಚರಿಪಡಬೇಕಿಲ್ಲ. ಆದರೂ, ಇದು ಸತ್ಯ.

ಕೆರಿಬಿಯನ್‌ನಲ್ಲಿ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ "ನಾವು ಗೆದ್ದೆ ಗೆಲ್ಲುತ್ತೇವೆ" ಎಂಬ ಅತಿಯಾದ ಆತ್ಮವಿಶ್ವಾಸದೊಂದಿಗೆ ಭಾರತ ಕ್ರಿಕೆಟ್ ಕಲಿಗಳು ತೆರಳಿದರು. ಆದರೆ ಆಗಿದ್ದೇನು? ಪಕ್ಕದ ಬಾಂಗ್ಲಾದೇಶಕ್ಕೆ ಮಣಿದಿದ್ದು. ಇದು 'ಹುಲಿಯನ್ನು ಹೊಡೆಯಲು ಹೋದ ಶೂರ, ಹಾದಿಯಲ್ಲಿದ್ದ ನಾಯಿಯನ್ನು ನೋಡಿ ಅಂಜಿದನಂತೆ' ಎಂಬಂತಾಗುತ್ತದೆ. ಇದು ಪರಿಹಾಸ್ಯವಲ್ಲ. ಆದ ನೈಜ ಘಟನೆಯ ಮುಂದಿರುವ ಕನ್ನಡಿ. ಅದರಲ್ಲಿ ಸತ್ಯವಷ್ಟೇ ಕಾಣಬೇಕು.

ಇಂತಹ ಸೋಲನ್ನು ಕಂಡ ಭಾರತ ದುರ್ಬಲ ಬರ್ಮುಡಾ ತಂಡವನ್ನು ಮಣ್ಣು ಮುಕ್ಕಿಸಿ, ಟೂರ್ನಿಯ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಆದರೆ, ಕೊನೆಯ ಶ್ರೀಲಂಕಾ ಪಂದ್ಯದಲ್ಲಿ ಸೋಲನುಭವಿಸಿ, ಸ್ವದೇಶಕ್ಕೆ ಮರಳಿದ ಭಾರತ ತಂಡಕ್ಕೆ ಸಿಕ್ಕಿದ್ದು, ಅಗೌರವ, ಟೀಕೆ!

ಬಿಸಿಸಿಐ ಕೂಡ ಭಾರತದ ಕ್ರಿಕೆಟ್ 'ಹುಲಿ'ಗಳಿಗೆ ಮೂಗುದಾರ ಹಾಕಲು ಹೊರಟರು. ಇದನ್ನು ಸಹಿಸಿಕೊಂಡ ಭಾರತ ತಂಡದ ಆಟಗಾರರು ಮುಂದಿನ ಬಾಂಗ್ಲಾದೇಶ ಸರಣಿ ಹಾಗೂ ದ.ಆಫ್ರಿಕಾ ಸರಣಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ವಿಶ್ವಕಪ್ ಸೋಲನ್ನು ಕೊಂಚ ಮರೆಯಾಗಿರಿಸಿದರು.

ಇದಾದ ನಂತರ ಇಂಗ್ಲೆಂಡ್‌ ಸರಣಿಯಂತೂ ಭಾರತೀಯ ಕ್ರಿಕೆಟ್ ತಂಡದ ಪಾಲಾಗಿ ವರವಾಗಿ ಒದಗಿತು. ಇದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಮತ್ತೆ ಹೊಸ ಚಲನೆಯನ್ನುಂಟು ಮಾಡಿತು. ಇದು ಹೋಗಲಿ ಬಿಡಿ. ಹಳೆಯ ಮಾತು.

ಹಿರಿಯರಿಲ್ಲದ ಯುವಪಡೆಯು ದ.ಆಫ್ರಿಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ, ದ.ಆಫ್ರಿಕಾ ತಂಡಗಳನ್ನೇ ಮಣಿಸಿ ಪ್ರಶಸ್ತಿಯನ್ನು ತಾಯ್ನೆಲಕ್ಕೆ ಹೊತ್ತು ತಂದರು. ಆಗ ಭಾರತದಲ್ಲಿ ಉಂಟಾದ ಸಂತಸ, ಸಂಭ್ರಮ ಅಷ್ಟಿಷ್ಟಲ್ಲ. ಅವರ ಸಂತಸಕ್ಕೆ ಅಪಾರವೇ ಇಲ್ಲದಂತಾಯಿತು. ಈ ವಿಶ್ವಕಪ್ ಭಾರತೀಯ ಕ್ರಿಕೆಟ್ ರಂಗಕ್ಕೆ ಮತ್ತೊಂದು ಶಿಖರವನ್ನು ನೀಡಿತೆಂದರೆ, ಅತಿಶಯೋಕ್ತಿಯೇನಲ್ಲ.

ಈಗ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಆಗಮಿಸಿದೆ. ಇದರಲ್ಲಿ ಈಗಾಗಲೇ ಭಾರತ ತಂಡವು ಆರಂಭದಲ್ಲಿ ಪರಾಭವಗೊಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಕಹಿ ಅನುಭವ ಪಡೆದ ದೋನಿ ಪಡೆ, ಚಂಡೀಗಢದಲ್ಲಿ ನಡೆದ ಮೊದಲ ಗೆಲುವು ಕಳೆದೆರಡು ಸೋಲುಗಳ ಕಹಿಯನ್ನು ಮರೆಸಿದೆ. ಸೋಲು ಗೆಲುವಿನ ಸೋಪಾನ ಎಂಬ ಮಂತ್ರವನ್ನು ಜಪಿಸುತ್ತಿರುವ ಭಾರತ ತಂಡ ಮುಂದೇನಾಗುತ್ತೆ.....

Sunday, September 23, 2007

ಅಕ್ಟೋಬರ್ 6, 2007 ರಂದು.........

ಪಾಕಿಸ್ತಾನ. ಇತ್ತೀಚಿನ ದಿನಮಾನಗಳಲ್ಲಿ ಪ್ರತಿನಿತ್ಯ ಒಂದಿಲ್ಲಾ ಒಂದು ದಾಳಿಗೆ ತುತ್ತಾಗುತ್ತಿದೆ. ರಾಜಕೀಯವಾಗಿ, ಸಾಮಾಜಿಕವಾಗಿ ಇದೆಲ್ಲಕ್ಕಿಂತ ಮಿಗಿಲಾಗಿ ಧಾರ್ಮಿಕ ತೀವ್ರವಾದವಂತೂ ದೇಶದ ನೆಮ್ಮದಿಯನ್ನೇ ಹಾಳು ಮಾಡಿದೆ. ಇದರಿಂದ ಅಲ್ಲಿನ ಸಾಮಾಜಿಕ ಜನಜೀವನ ಎಷ್ಟರ ಮಟ್ಟಿಗೆ ಕ್ಷಿಣಿಸಿರಬೇಕು ಎಂಬುವುದನ್ನು ನಾವು ಈ ಮೂಲಕವೇ ಊಹಿಸಿಕೊಳ್ಳಬಹುದು.ಅಕ್ಟೋಬರ್ 6, 2007 ಈ ದಿನ ಪಾಕಿಸ್ತಾನದಲ್ಲಿ ಭಾರೀ ಕುತೂಹಲವನ್ನೆ ಮೂಡಿಸಿದೆ. ಅಂದು ಮುಸ್ಲಿಂ ನಾಡಿನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿವೆ. ಇದಕ್ಕಾಗಲೇ ಅಲ್ಲಿನ ಚುನಾವಣೆ ಆಯೋಗವು ತನ್ನ ಅಧಿಸೂಚನೆಯನ್ನು ಹೊರಡಿಸಿದ್ದೂಯಾಗಿದೆ.

ಎಲ್ಲ ರಾಷ್ಟ್ರಗಳಲ್ಲಿ ಚುನಾವಣೆಗಳು ನಡೆಯುವುದು ಸಾಮಾನ್ಯ ಹಾಗೂ ಸಹಜವಾದ ವಿಷಯ. ಆದರೆ, ಇಲ್ಲಿಯ ಚುನಾವಣೆ ನಡೆಯುವುದಕ್ಕಿಂತ ಪೂರ್ವದಲ್ಲಿ ನಡೆಯುತ್ತಿರುವ ವಾದ-ವಿವಾದ, ಏಟಿಗೆ-ಏದುರೇಟು, ಮಾತಿನ ಚಕಮಕಿ, ರಾಜಕೀಯ ವೈಷಮ್ಯ, ಅಧಿಕಾರದ ದಾಹ, ಏಕಸ್ವಾಮತ್ವ, ನಿರಂಕುಶ ಪ್ರಭುತ್ವ, ಸರ್ವಾಧಿಕಾರ ಧೋರಣೆ ಹೀಗೆ ಹಲವಾರು ಅಂಶಗಳು ಇಲ್ಲಿ ಗಿರಕಿ ಹೊಡೆಯುತ್ತಿರುವುದು ಆ ನಾಡಿನ ಜನತೆಯ ನೆಮ್ಮದಿಯನ್ನು ಕಸಿದುಕೊಂಡಿವೆ.ಕಳೆದ ಕೆಲವು ದಿನಗಳ ಹಿಂದೆ ಪಾಕಿಸ್ತಾನದಲ್ಲಿ ತಲೆದೂರಿದ್ದ ರಾಜಕೀಯ ಅಸ್ಥಿರತೆಯು, ತುರ್ತು ಪರಿಸ್ಥಿತಿಯನ್ನು ಹೇರುವ ಮಟ್ಟಕ್ಕೆ ಹೋಗಿತ್ತು. ಇಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತವಾದ ಚುನಾವಣೆಗಳು ನಡೆಯುತ್ತವೆ ಎಂಬ ಭರವಸೆ ಇಲ್ಲದ ಕೆಲವು ರಾಜಕೀಯ ನಾಯಕರು ಇಂತಹ ಕಾರ್ಯಕ್ಕೆ ಮುಂದಾಗಿದ್ದರು. ಆದರೆ, ಇದಕ್ಕೆ ತಮ್ಮ ಸರಕಾರ ಆಸ್ಪದ ನೀಡುವುದಿಲ್ಲ. ಇಲ್ಲಿ ನ್ಯಾಯಬದ್ಧವಾದ ಚುನಾವಣೆಗಳನ್ನು ನಡೆಸುತ್ತೇವೆ ಎಂದು ಪ್ರಧಾನಮಂತ್ರಿ ಶೌಖತ್ ಅಜಿಜ್ ಅವರು ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿದರು.

ಮುಷರ್ರಫ್ V/s ಷರೀಷ್
ಪಾಕಿಸ್ತಾನ ಅಧ್ಯಕ್ಷ ಜನರಲ್ ಪರ್ವೇಜ್ ಮುಷರ್ರಫ್ ಹಾಗೂ ದೇಶಭ್ರಷ್ಟ ಆರೋಪದ ಮೇಲೆ ಕಳೆದ ಏಳು ವರ್ಷಗಳ ಹಿಂದೆ ಗಡೀಪಾರಾಗಿರುವ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ನಡುವೆ ಶೀತನ ಸಮರವಾಗುತ್ತಿರುವುದು ಗೋಚರವಾಗುತ್ತಿದೆ. ಮುಂಬರಲಿರುವ ಅಕ್ಟೋಬರ್ 6 ರ ಚುನಾವಣೆಯಲ್ಲಿ ಗಡೀಪಾರಾಗಿರುವ ಷರೀಫ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂಬುದು ಮುಷರ್ರಫ್ ಛಲ ಸಾಧಿಸುತ್ತಿದ್ದಾರೆ. ಆದರೆ, ಇದರಲ್ಲಿ ಸ್ಪರ್ಧಿಸಿಯೇ ತೀರುತ್ತೇನೆ ಎಂಬುದು ಷರೀಫ್ ಅವರ ಮರು ಉತ್ತರ.

ಆದರೆ, ಗಡಿಪಾರಾಗಿ ಶಿಕ್ಷೆ ಎದುರಿಸುತ್ತಿರುವ ಮಾಜಿ ಪ್ರಧಾನಿ ನವಾಜ್ ಶರೀಫ್ ಹಾಗೂ ಅವರ ಸಹೋದರ ಸ್ವದೇಶಕ್ಕೆ ಮರಳಲು ಅವಕಾಶ ಕಲ್ಪಿಸುವಂತೆ ಸಲ್ಲಿಸಿದ್ದ ಮನವಿಯನ್ನು ಪರಿಶೀಲಿಸಿದ ಸರ್ವೋಚ್ಛ ನ್ಯಾಯಾಲಯ ಅವರಿಬ್ಬರಿಗೂ ಇಲ್ಲಿ ನೆಲೆಸಲು ಅವಕಾಶವಿದೆ ಎಂದು ನ್ಯಾಯಾಲಯವು ತಿಳಿಸಿತ್ತು. ಇದನ್ನೇ ಪ್ರಮುಖ ಆಧಾರವಾಗಿಟ್ಟುಕೊಂಡು ನವಾಜ್ ಷರೀಫ್ ಅವರು ಪಾಕಿಸ್ತಾನಕ್ಕೆ ಮರಳಲು ಸಿದ್ಧರಾದರು. ಕೊನೆಗೂ ಅವರು ಸೆಪ್ಟೆಂಬರ್ 8 ರಂದು ಪಾಕಿಸ್ತಾನಕ್ಕೆ ಬರುವ ಇಂಗಿತವನ್ನು ವ್ಯಕ್ತಪಡಿಸಿದರು.

ಆದರೆ, ತಾನೊಂದು ಬಗೆದರೆ, ದೈವವೊಂದು ಬಗೆದಂತೆ ಎಂಬ ನಾಣ್ಣುಡಿಯಂತೆ, ಸೆಪ್ಟೆಂಬರ್ 10 ರಂದು ಪಾಕಿಸ್ತಾನಕ್ಕೆ ಬರಲು ಪಿಎಂಎಲ್-ಎನ್ ನಾಯಕ ನವಾಜ್ ಷರೀಫ್ ಸಕಲ ಸಿದ್ಧತೆಗಳನ್ನು ಮಾಡಿಕೊಂಡರು. ಆದರೆ, ಅವರೊಟ್ಟಿಗೆ ಅವರ ಸಹೋದರ ಶಹ್‌ಬಾಜ್ ಷರೀಫ್, ಇತರ ಪತ್ರಕರ್ತರು, ವಕೀಲರು ಕೂಡ ಆಗಮಿಸಲು ಒಂದು ತಂಡವೇ ರೆಡಿಯಾಯಿತು. ಇನ್ನೇನು ದಿನಗಳು ಉರುಳುತ್ತಾ ಹೋದ ಹಾಗೆ ಪಾಕಿಸ್ತಾನದಲ್ಲಿ ಆತಂಕಗಳು ಮರೆಮಾಡಲು ಶುರುವಾಯಿತು.1999 ರಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ನವಾಜ್ ಷರೀಫ್ ಹಾಗೂ ಅವರ ಸಹೋದರರಿಬ್ಬರನ್ನೂ ಜನರಲ್ ಪರ್ವೇಜ್ ಮುಷರ್ರಫ್ ಅವರು ಹತ್ತು ವರ್ಷಗಳ ಕಾಲ ಗಡೀಪಾರು ಮಾಡಿದ್ದರು. ಆದರೆ, ಅವರು ದೇಶಬಿಟ್ಟು ಹೊರಡುವ ಪೂರ್ವದಲ್ಲಿ ಸ್ವದೇಶಕ್ಕೆ ಹತ್ತು ವರ್ಷಗಳ ಕಾಲ ಹಿಂದಿರುಗುವುದಿಲ್ಲ ಎಂಬ ಒಡಂಬಡಿಕೆಗೆ ಸಹಿ ಹಾಕಿದ್ದರು. ಹೀಗಾಗಿ ಅವರು ಸ್ವದೇಶಕ್ಕೆ ಮರಳಲು ನಾವು ಬಿಡುವುದಿಲ್ಲ ಎಂಬುವುದ ಪಾಕ್ ಅಧ್ಯಕ್ಷ ಮುಷರ್ರಫ್ ಅವರ ವಾದ. ಇದಕ್ಕೆ ಸೌದಿ ಅರೇಬಿಯಾ ಹಾಗೂ ದುಬೈಗಳಿಂದಲೂ ಜನರಲ್ ಅವರಿಗೆ ಬೆಂಬಲವಿತ್ತು ಎಂಬುವುದನ್ನು ಬೇರೆಯಾಗಿ ಹೇಳಬೇಕಿಲ್ಲ.

ಇಡೀ ಪ್ರಪಂಚವು ಸೆಪ್ಟೆಂಬರ್ 10 ರಂದು ಮುಸ್ಲಿಂ ರಾಷ್ಟ್ರದತ್ತ ಗಮನ ಹರಿಸಿತು. ಅಂದು ಬೆಳಗ್ಗೆ 9.15 ಕ್ಕೆ ನವಾಜ್ ಷರೀಫ್ ಅವರು ತಮ್ಮ ಕುಟುಂಬ, ಮಿತ್ರರು, ಪಕ್ಷದ ನಾಯಕರುಗಳೊಂದಿಗೆ ಇಸ್ಲಾಮಾಬಾದ್‌ನ ಅಂತಾರಾಷ್ಟ್ರೀಯ ವಿಮಾನ ಕೇಂದ್ರಕ್ಕೆ ಆಗಮಿಸಿದರು. ಅವರನ್ನು ಸ್ವೀಕರಿಸಲು ಹಲವಾರು ಮಂದಿ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ನಿಟ್ಟುಸಿರು ಬಿಟ್ಟು ಕಾಯುತ್ತಿದ್ದರು. ಆದರೆ, ಆದದ್ದೇನು ಗೊತ್ತೆ. ಮತ್ತೆ ಅವರನ್ನು ಬಂಧಿಸಿ ಸೌದಿ ಅರೇಬಿಯಾಗೆ ಹಸ್ತಾಂತರ.ಕಳೆದ ಏಳು ವರ್ಷಗಳಿಂದ ತಾಯ್ನಾಡಿನಿಂದ ದೂರ ಉಳಿದಿದ್ದ ಷರೀಫ್ ಮತ್ತೊಮ್ಮೆ ಸೌದಿ ಅರೇಬಿಯಾಗೆ ಹಸ್ತಾಂತರಿಸಲಾಯಿತು. ಇದರಿಂದ ಬೇಸತ್ತ ಷರೀಫ್ ಅವರು, ನನ್ನ ಬಂಧನಕ್ಕೆ ಮುಷರ್ರಫ್ ಅವರ ಅಹಂಕಾರವೇ ಕಾರಣೆ ಎಂದು ಕಿಡಿ ಕಾರಿದರು. ಪಾಕಿಸ್ತಾನದಲ್ಲಿಯೂ ಕೂಡ ಈ ಕುರಿತು ಹಲವಾರು ಪ್ರತಿಭಟನೆಗಳನ್ನು ಅವರ ಬೆಂಬಲಿಗರೇ ಕೈಗೊಂಡರು. ಆದರೆ ಅದರಿಂದ ಏನು ಪ್ರಯೋಜನವಾಗಲಿಲ್ಲ.

ಭುಟ್ಟೊರೊಂದಿಗೆ ಗುಟ್ಟು ಮಾತುಕತೆ
ಮುಷರ್ರಫ್ ಅವರು ತಾವು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಹೊರಟಿದ್ದಾರೆ ಎಂಬುವುದಕ್ಕೆ ಕೆಲವು ಅಂಶಗಳು ನಮ್ಮ ಕಣ್ಣಿಗೆ ಕಾಣಸಿಗುತ್ತವೆ. ಮತ್ತೊಮ್ಮೆ ಅಧ್ಯಕ್ಷರಾಗಲೇಬೇಕು ಎಂಬ ಕಾರಣದಿಂದ ಅವರು ಮಾಜಿ ಪ್ರಧಾನಮಂತ್ರಿ ಹಾಗೂ ಗಡೀಪಾರಾಗಿರುವ ಪಿಪಿಪಿಯ ಅಧ್ಯಕ್ಷೆ ಬೆನಜಿರ್ ಭುಟ್ಟೊ ಅವರೊಂದಿಗೆ ಇಂಗ್ಲೆಂಡ್‌ನಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ ಅಂಬೋಣ.

ಹಾಗಾದರೆ, ಈ ಮಾತುಕತೆಯಲ್ಲಿ ಆಗಿದ್ದೇನು ಎಂಬುವುದಕ್ಕೆ ಪುಷ್ಠಿ ನೀಡುವುದಕ್ಕೆ ಪ್ರಬಲ ಸಾಕ್ಷಿಗಳು ಮಾಧ್ಯಮಗಳಿಗೆ ಬಹುಶಃ ನಮಗೆ ದೊರಕದೆ ಇರಬಹುದು.ಆದರೂ ಮಾಧ್ಯಮಗಳು ಕೆಲವು ಮಾಹಿತಿಗಳನ್ನು ಹೆಕ್ಕಿ ತೆಗೆದಿದ್ದು, ತಮ್ಮನ್ನು ಸೇನಾಸಮವಸ್ತ್ರದಲ್ಲಿಯೇ ಮರು ಆಯ್ಕೆ ಮಾಡಬೇಕು. ಒಂದು ವೇಳೆ ತಮಗೆ ರಾಷ್ಟ್ರಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಮರು ನೇಮಕ ಮಾಡುವಲ್ಲಿ ನೆರವು ನೀಡಿದ್ದಲ್ಲಿ ಭುಟ್ಟೊ ಮೇಲಿರುವ ಗಡೀಪಾರನ್ನು ಹಿಂದಕ್ಕೆ ಪಡೆದುಕೊಳ್ಳುವುದಾಗಿ ಮುಷರ್ರಫ್ ಮಾತು ನೀಡಿದ್ದರಂತೆ ಎಂಬುದು ವದಂತಿ.

ಆದರೆ, ಇದು ನಿಜವೇ ಆಗಿರಬಹುದಲ್ಲ ಎಂಬುವುದನ್ನು ಜಾಣ ಓದುಗರಿಗೆ ಬೇರೆ ಬಿಡಿಸಿ ಹೇಳಬೇಕಿಲ್ಲ.ಅಧಿಕಾರ ಹಂಚಿಕೆ ಕುರಿತು ಭುಟ್ಟೊ ಹಾಗೂ ಮುಷರ್ರಫ್ ಅವರ ನಡುವೆ ಮಾತುಕತೆಗಳು ನಡೆದಿದ್ದು, ಇದು ಮುಂದಿನ ಸಾರ್ವತ್ರಿಕ ಚುನಾವಣೆಯ ಮೇಲೆ ಅವಲಂಬಿತವಾಗಿದೆ ಎಂದು ಪ್ರಧಾನಮಂತ್ರಿ ಶೌಖತ್ ಅಜಿಜ್ ವಿವರಣೆ ನೀಡಿದ್ದರು. ಆದರೆ ಯಾರು ಏನೇ ಹೇಳಿಕೆಗಳನ್ನು ನೀಡಿದರೂ, ಚುನಾವಣೆಯಲ್ಲಿ ಏನಾಗುತ್ತೆ ಎನ್ನುವುದನ್ನು ನಿರ್ಧರಿಸುವುದು ಅಲ್ಲಿನ ಪ್ರಜೆಗಳೇ.

ಮುಷ್‌ಗೆ ಅಡ್ಡಿಯಾಗಿರುವ ಸೇನಾಸಮವಸ್ತ್ರ?

ಅಕ್ಟೋಬರ್ ಆರು ಇದು ಪಾಕಿಸ್ತಾನದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುವ ಪರ್ವ ಕಾಲ ಎಂದು ಹೇಳಬೇಕು. ಆದರೆ, ಮುಷರ್ರಫ್ ಅವರು ತಾವು ಧರಿಸಿರುವ ಸೇನಾ ಸಮವಸ್ತ್ರದ ಕಾಲಾವಧಿಯು ನವೆಂಬರ್ 15 ರಂದು ಮುಕ್ತಾಯಗೊಳ್ಳುತ್ತಿದೆ. ಆದರೆ ವಿಶಿಷ್ಟವೆಂದರೆ, ಅಕ್ಟೋಬರ್ 6 ರ ಚುನಾವಣೆಯಲ್ಲಿ ಅವರು ಮರು ಆಯ್ಕೆ ಬಯಸಿ ಮತ್ತೊಮ್ಮೆ ಸಾರ್ವಭೌಮ ಅಧಿಕಾರ ಪಡೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದು ಸಾಧ್ಯವೆ ಎಂಬುದು ಈಗ ಪಾಕಿಸ್ತಾನದಲ್ಲಿ ಬಹುಚರ್ಚಿತವಾಗುತ್ತಿರುವ ವಿಷಯವಾಗಿದೆ.

ಮುಷರ್ರಫ್ ಅವರು ಈಗಾಗಲೇ ಸೇನಾಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವುದು ಸಾರ್ವತ್ರಿಕ ಸತ್ಯವಾದ ಮಾತು. ಅದರೊಟ್ಟಿಗೆ ದೇಶದ ಅಧ್ಯಕ್ಷ ಸ್ಥಾನದಲ್ಲಿ ಇನ್ನೂ ಇದ್ದಾರೆ. ಆದರೆ, ಸಮಸ್ಯೆ ಎದುರಾಗಿರುವುದೇ ಇಲ್ಲಿ. ಸೇನಾ ಸಮವಸ್ತ್ರದಲ್ಲಿ ದೇಶದ ಅಧ್ಯಕ್ಷರಾಗಿ ಮರು ಆಯ್ಕೆಯಾಗುವ ಇಚ್ಛಿಸಿದಲ್ಲಿ ತಾವು ಅಸೆಂಬ್ಲಿಯಿಂದ ಹಾಗೂ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ವಿರೋಧ ಪಕ್ಷಗಳು ಕಟ್ಟುನಿಟ್ಟಾಗಿ ಹೇಳಿವೆ.ತಾವು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸೇನಾ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬುವುದು ಅಧ್ಯಕ್ಷರ ವಾದ.

ಇದಕ್ಕೆ ನಾವು ಸಿದ್ಧರಿಲ್ಲ ನೀವು ಸೇನಾ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿಯೇ ಮರು ಆಯ್ಕೆ ಬಯಸಿ ಚುನಾವಣೆಯನ್ನು ಎದುರಿಸಿ ಎಂಬುದು ವಿರೋಧ ಪಕ್ಷಗಳು ಮೇಲಿಂದ ಮೇಲೆ ಅಧ್ಯಕ್ಷರಿಗೆ ಚುರುಕು ಮುಟ್ಟಿಸುತ್ತಿವೆ. ಈ ರೀತಿಯ ಹಲವಾರು ತದ್ವಿರುದ್ಧ ಮಾತಿನ ಚಕಮಕಿಗಳು ಈಗಲೇ ನಡೆಯುತ್ತಿವೆ. ಆದರೆ, ಅಕ್ಟೋಬರ್ 6 ರಂದು ಏನಾಗುತ್ತೆ? ಚುನಾವಣೆಯಲ್ಲಿ ಮುಷರ್ರಫ್ ಸ್ಪರ್ಧಿಸುವರೆ? ಸ್ಪರ್ಧಿಸಿದಲ್ಲಿ ಗೆಲುವು ಸಾಧಿಸುವರೆ? ಅಥವಾ ಅದಕ್ಕೂ ಮುಂಚಿತವಾಗಿ ವಿರೋಧ ಪಕ್ಷಗಳ ಹೇಳಿಕೆಗೆ ತಲೆಬಾಗುವರೆ? ಸೇನಾ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವರೆ? ಈ ರೀತಿಯ ಹಲವಾರು ಉತ್ತರಗಳಿಗೆ ಅಕ್ಟೋಬರ್ 6........